ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಯುವ ಮತದಾರರೇ, ಕಡ್ಡಾಯವಾಗಿ ಮತದಾನ ಮಾಡಿ: ಜಿ.ಡಿ.ಶೇಖರ್ ಕರೆ

KannadaprabhaNewsNetwork | Published : Apr 5, 2024 1:09 AM

ಯುವಕರು ತಪ್ಪದೇ ಮತದಾನ ಮಾಡಬೇಕು, ಅದರ ಜೊತೆಗೆ ತಮ್ಮ ಕುಟುಂಬದ ಹಾಗೂ ಸುತ್ತಮುತ್ತಲಿನ ಜನರನ್ನು ಕೂಡ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಯುವಕರು ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಅರಿತುಕೊಳ್ಳಬೇಕು. ಒಂದೊಂದು ಮತಕ್ಕೂ ಬೆಲೆಯಿದೆ. ಒಂದು ಸದೃಢ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮತದಾನವು ಪ್ರಮುಖ ಪಾತ್ರವಾಗಿದೆ. ಹೀಗಾಗಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಕರೆ ನೀಡಿದರು.

ತಾಲೂಕಿನ ಅರಸು ಭವನದಲ್ಲಿ ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರು ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಅರಿತುಕೊಳ್ಳಬೇಕು. ಒಂದೊಂದು ಮತಕ್ಕೂ ಬೆಲೆಯಿದೆ. ಒಂದು ಸದೃಢ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮತದಾನವು ಪ್ರಮುಖ ಪಾತ್ರವಾಗಿದೆ. ಹೀಗಾಗಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಯುವಕರು ತಪ್ಪದೇ ಮತದಾನ ಮಾಡಬೇಕು, ಅದರ ಜೊತೆಗೆ ತಮ್ಮ ಕುಟುಂಬದ ಹಾಗೂ ಸುತ್ತಮುತ್ತಲಿನ ಜನರನ್ನು ಕೂಡ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಡಿ.ಬಿ. ಸುನಿಲ್ ಕುಮಾರ್ ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು. ಅದನ್ನು ಚಲಾಯಿಸಿದಾಗ ಮಾತ್ರ ಆ ಹಕ್ಕಿಗೆ ಅರ್ಥ ಬರುವುದು. ವೋಟರ್ ಹೆಲ್ಪ್ ಲೈನ್ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಹೊಸದಾಗಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ಗುರುತಿನ ಚೀಟಿಯಲ್ಲಿ ತಪ್ಪಿದ್ದಲ್ಲಿ ತಿದ್ದುಪಡಿಗೂ ಅವಕಾಶವಿದೆ. ಅದಲ್ಲದೆ, ಅಭ್ಯರ್ಥಿಗಳ ಮಾಹಿತಿಯು ಕೂಡ ಲಭ್ಯವಿದ್ದು, ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರು ಮತದಾನ ಮಾಡಲಿ ಎಂಬ ಉದ್ದೇಶದಿಂದ ಆ ದಿನ ರಜೆ ನೀಡಲಾಗುತ್ತದೆ. ಆದರೆ, ಕೆಲವರು ರಜೆಯನ್ನು ಮೋಜಿನಲ್ಲಿ ಕಳೆಯಲು ಪ್ರಯತ್ನಿಸುತ್ತಾರೆ ಇದು ತಪ್ಪು. ಇದರಿಂದ ಭವಿಷ್ಯದಲ್ಲಿ ಕೊರಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದರು.

ವ್ಯವಸ್ಥೆಯನ್ನು ದೂರುವ ಮೊದಲು ನಾವು ನಮ್ಮ ಹಕ್ಕು, ಕರ್ತವ್ಯಗಳನ್ನು ಪ್ರಮಾಣಿಕವಾಗಿ ಪೂರೈಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಇತರರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದರು.

ತಹಸೀಲ್ದಾರ್ ಸುರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡುವಂತೆ ಮನವಿ ಮಾಡಬೇಕು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಅರಸು ಭವನದ ಮುಂಭಾಗದಿಂದ ಜಾಥಾ ನಡೆಸಿ ಬೆಟ್ಟದಪುರ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಅಂಬಿಕಾ ಮೊದಲಾದವರು ಇದ್ದರು.