ನೇಣು ಬಿಗಿದು ಯುವಕ ಆತ್ಮಹತ್ಯೆ- ಪತ್ನಿ, ಪೊಲೀಸರ ವಿರುದ್ಧ ದೂರು

KannadaprabhaNewsNetwork | Updated : Nov 04 2023, 12:31 AM IST

ಸಾರಾಂಶ

ಇಲ್ಲಿಯ ಕೋಟಿಲಿಂಗೇಶ್ವರ ನಗರದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಿಲ್ ಕುಂದಗೋಳ(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೆ ಕೇಶ್ವಾಪುರ ಠಾಣೆ ಇನಸ್ಪೆಕ್ಟರ್ ಸಾತೇನಹಳ್ಳಿ, ಎಎಸ್‌ಐ ಜಯಶ್ರೀ ಚಲವಾದಿ ಹಾಗೂ ಅವನ ಪತ್ನಿ ಕುಟುಂಬದವರು ಕಾರಣ ಎಂದು ಶುಕ್ರವಾರ ಕಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿಯ ಕೋಟಿಲಿಂಗೇಶ್ವರ ನಗರದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಿಲ್ ಕುಂದಗೋಳ(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೆ ಕೇಶ್ವಾಪುರ ಠಾಣೆ ಇನಸ್ಪೆಕ್ಟರ್ ಸಾತೇನಹಳ್ಳಿ, ಎಎಸ್‌ಐ ಜಯಶ್ರೀ ಚಲವಾದಿ ಹಾಗೂ ಅವನ ಪತ್ನಿ ಕುಟುಂಬದವರು ಕಾರಣ ಎಂದು ಶುಕ್ರವಾರ ಕಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

ನಿಖಿಲ ತಂದೆ ಮೋಹನ ಕುಂದಗೋಳ ಮಾತನಾಡಿ, ನಿಖಿಲ ಮದುವೆಯಾದ ಹುಡುಗಿಯ ವಿಚಾರವಾಗಿ ಗುರುವಾರ ತಡರಾತ್ರಿ ಪೊಲೀಸರು ಮಗನನ್ನು ಠಾಣೆಗೆ ಕರೆಸಿ ದೌರ್ಜನ್ಯ ಎಸಗಿದ್ದಾರೆ. ಆದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಪೊಲೀಸ್ ಅಧಿಕಾರಿ ಹಾಗೂ ಹುಡುಗಿಯ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ, ಪಂಗಡದ ವಿವಿಧ ಸಂಘಟನೆ ಸದಸ್ಯರು, ಪದಾಕಾರಿಗಳು ಕಿಮ್ಸ್ ಶವಗಾರದ ಎದುರು ಜಮಾಯಿಸಿ ಪ್ರತಿಭಟನೆಗೆ ಸಾಥ ನೀಡಿದರು.

ಪ್ರಕರಣ ಏನು?:

ನಿಖಿಲ ಕಳೆದ ವರ್ಷ ಪ್ರೀತಿ ಎಂಬ ಹುಡುಗಿಯ ಜತೆ ಮದುವೆಯಾಗಿದ್ದ. ಅವಳಿಗೆ ಬೇರೊಬ್ಬ ಹುಡುಗನ ಜತೆ ಸಂಬಂಧವಿರುವುದರಿಂದ ಅವಳನ್ನು ತವರು ಮನೆಗೆ ಕಳುಹಿಸಲಾಗಿತ್ತಂತೆ. ಎರಡೂ ಕುಟುಂಬಗಳ ನಡುವೆ ಮಾತುಕತೆಯೂ ನಡೆದಿತ್ತು. ಗುರುವಾರ ರಾತ್ರಿ ಅವಳ ಕುಟುಂಬದವರು ಕೇಶ್ವಾಪುರ ಠಾಣೆಗೆ ಬಂದು, ಮದುವೆ ಸಂದರ್ಭ ನೀಡಿದ್ದ ಸಾಮಗ್ರಿ ಮತ್ತು 2 ಲಕ್ಷ ಮರಳಿಸುವಂತೆ ತಿಳಿಸಿದ್ದರು. ಇದರಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಮೋಹನ ಕುಂದಗೋಳ ಮಾಧ್ಯಮಕ್ಕೆ ತಿಳಿಸಿದರು.

ಕಿಮ್ಸ್ ಶವಗಾರಕ್ಕೆ ಬೆಳಗ್ಗೆಯೇ ನಿಖಿಲ ಶವ ತಂದಿದ್ದು, ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಸಂಜೆಯಾದರೂ ಶವ ಪರೀಕ್ಷೆ ನಡೆದಿರಲಿಲ್ಲ. ಸಮಾಜದ ಮುಖಂಡರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಕೈ ಬಿಡುವಂತೆ ಕುಟುಂಬದವರನ್ನು ಮನವೊಲಿಸಲಾಯಿತು. ಮಗನ ಸಾವಿಗೆ ಪ್ರೀತಿ ಪೊಂಗಲಪುರ, ಧನರಾಜ, ಮಂಜುಳಾ, ಅಂದಾನಪ್ಪ, ಕೇಶ್ವಾಪುರ ಪೊಲೀಸ್ ಠಾಣೆಯ ಅಧಿಕಾರಿ ಸಾತೇನಹಳ್ಳಿ ಹಾಗೂ ಎಎಸ್‌ಐ ಜಯಶ್ರೀ ಚಲವಾದಿ ಕಾರಣ ಎಂದು ಗೀತಾ ಕುಂದಗೋಳ ದೂರು ನೀಡಿದ್ದಾರೆ.

Share this article