ಕನ್ನಡಪ್ರಭ ವಾರ್ತೆ ದಾವಣಗೆರೆ
ಭವಿಷ್ಯದಲ್ಲಿ ಭಾರತವು ವಿಶ್ವ ಗುರು ಸ್ಥಾನ ಅಲಂಕರಿಸಲಿದ್ದು, ಶ್ರೇಷ್ಠ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಅತ್ಯಂತ ಮಹತ್ವದ್ದು, ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ರಾಷ್ಟ್ರದ ಪ್ರಗತಿಗೆ ಅತ್ಯುನ್ನತ ಕೊಡುಗೆ ನೀಡಲು ದಾವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.ತಾಲೂಕಿನ ಶಿವಗಂಗೋತ್ರಿಯ ದಾವಿವಿ ಆವರಣದಲ್ಲಿ ಮಂಗಳವಾರ 11ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ, ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿ ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿ,
ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಿದೆ. ವಿವಿಯಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಪದವಿಗಷ್ಟೇ ಸೀಮಿತವಾಗದೇ, ಪದವಿ ನಂತರ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಶ್ರೇಷ್ಠ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಅತ್ಯಂತ ಮಹತ್ವದ್ದೆಂಬುದನ್ನೂ ನೀವೆಲ್ಲರೂ ಅರಿಯಬೇಕು ಎಂದು ತಿಳಿಸಿದರು.ಉನ್ನತ ಶಿಕ್ಷಣ ಸಚಿವ, ಸಹ ಕುಲಾಧಿಪತಿ ಡಾ.ಎಂ.ಸಿ.ಸುಧಾಕರ್, ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಮೌಲ್ಯಮಾಪನ ಕುಲ ಸಚಿವ ಪ್ರೊ.ಸಿ.ಕೆ.ರಮೇಶ, ಪ್ರಭಾರ ಕುಲ ಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ ಇತರರಿದ್ದರು. ನೀರು ಸಂರಕ್ಷಿಸಿ
ತಾಪಮಾನ ದಿನದಿನಕ್ಕೂ ಹೆಚ್ಚುತ್ತಿದ್ದು, ಎಲ್ಲಾ ದೃಷ್ಟಿಯಿಂದಲೂ ಇದು ಅಪಾಯಕಾರಿ. ಇದಕ್ಕಾಗಿ ಅರಣ್ಯ ರಕ್ಷಣೆ, ಸಸ್ಯ ಸಂಪತ್ತು ಹೆಚ್ಚಿಸುವ ಕೆಲಸ ಮನೆ ಮನೆಯಿಂದಲೂ ಆಗಬೇಕು. ನೀರಿನ ಸಂರಕ್ಷಣೆ, ಜಲ ಮರು ಪೂರಣ, ಭೂಮಿ, ಅರಣ್ಯ ಹಿತಕಾಯುವ ಕೆಲಸ ಎಲ್ಲರಿಂದಲೂ ಆಗಬೇಕು. ಮಳೆ ಬಂದಾಗ ಮಳೆ ನೀರು ಹರಿದು ಹೋಗದಂತೆ ಅಂತರ್ಜಲ ಹೆಚ್ಚಿಸುವ ಕೆಲಸ ಕಾರ್ಯಗಳು ಸಾಮೂಹಿಕವಾಗಿ ಆಗಬೇಕು.ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲ
ಗೌರವ ಡಾಕ್ಟರೇಟ್ ಪಡೆದ ಸಾಧಕರಿಗೆ ಅಭಿನಂದನೆಕಾನೂನು ಮತ್ತು ನ್ಯಾಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಹಾಗೂ ಕಲೆ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಎಚ್.ಬಿ.ಮಂಜುನಾಥ್ರಿಗೆ ದಾವಿವಿ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿದೆ. ಸಾಧಕರ ಅಭಿನಂದಿಸುವೆ, ಸೇವೆ ನಿರಂತರವಾಗಿರಲೆಂದು ಹಾರೈಸುವೆ. ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು, ಚಿನ್ನದ ಪದಕ, ಪ್ರಶಸ್ತಿಗೆ ಪಾತ್ರರಾದ ವಿದ್ಯಾರ್ಥಿಗಳು, ಪಿಎಚ್ಡಿ ಪದವಿ ಪಡೆದವರಿಗೆ ಅಭಿನಂದಿಸುವೆ ಎಂದು ರಾಜ್ಯಪಾಲ ಗೆಹ್ಲೋಟ್ ತಿಳಿಸಿದರು.