ಕನ್ನಡಪ್ರಭ ವಾರ್ತೆ ದಾವಣಗೆರೆ ನೈಜ ಸಂಸತ್ತಿಗಿಂತಲೂ ಯುವ ಸಂಸತ್ ಕಲಾಪಗಳನ್ನು ವೀಕ್ಷಿಸುವುದು ಅತ್ಯಂತ ರೋಚಕ ಮತ್ತು ಜ್ಞಾನವರ್ಧಕ ಆಗಿರುತ್ತದೆ. ಇಲ್ಲಿ ಯುವಜನರು ಎತ್ತುವ ಪ್ರಶ್ನೆಗಳು, ನೀಡುವ ಉತ್ತರಗಳು ಮತ್ತು ನಡೆಸುವ ಸಂವಾದಗಳು ಬಹಳ ಗೌರವಾನ್ವಿತ ಹಾಗೂ ವೈಚಾರಿಕ ಮಟ್ಟದಲ್ಲಿರುತ್ತವೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಹೇಳಿದರು.
ವಿದ್ಯಾರ್ಥಿಗಳಿಗೆ ರಾಜಕೀಯ ಮತ್ತು ಆಡಳಿತದ ಬಗ್ಗೆ ಅರಿವು ಮೂಡಿಸಲು ಸಂವಿಧಾನ, ದೇಶದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಆಳವಾಗಿ ಓದಿ ತಿಳಿದುಕೊಳ್ಳಬೇಕು. ನಿಮ್ಮ ಶಿಕ್ಷಕರನ್ನು ಹಾಗೂ ಜನಪ್ರತಿನಿಧಿಗಳನ್ನು (ನಾಯಕರನ್ನು) ವೈಚಾರಿಕವಾಗಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮುಖ್ಯ ಉದ್ದೇಶ ಉತ್ತಮ ಆಡಳಿತ. ಈ ಆಡಳಿತ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಯುವಜನರು ತಿಳಿದುಕೊಳ್ಳಬೇಕು. ಯುವಜನರು ಪ್ರಜಾಸತ್ತಾತ್ಮಕ ಚರ್ಚೆಗಳಲ್ಲಿ ಭಾಗವಹಿಸಬೇಕು. ಪ್ರಸ್ತುತ ಸಂಸತ್ ಮತ್ತು ವಿಧಾನಸಭೆಗಳಲ್ಲಿ ನಡೆಯುವ ಚರ್ಚೆಗಳಿಗೆ ಹೋಲಿಸಿದರೆ ಯುವ ಸಂಸತ್ನಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸುವ ಶಿಸ್ತು ಹಾಗೂ ಜ್ಞಾನ ಮೆಚ್ಚುವಂತದ್ದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, 18 ವರ್ಷ ತಲುಪುವ ಪ್ರತಿಯೊಬ್ಬ ಯುವಕ-ಯುವತಿಯು ದೇಶದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸೇನಾನಿ ಆಗಬೇಕು. ಕೇವಲ ಮತದಾನಕ್ಕೆ ಸೀಮಿತವಾಗದೇ, ದೈನಂದಿನ ಜೀವನದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಅರಿವು ಮೂಡಿಸಲು ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ''''''''''''''''ಯುವ ಸಂಸತ್'''''''''''''''' ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ವಕೀಲರು ಭಾಗವಹಿಸಿ ಯುವಕರೊಂದಿಗೆ ಚರ್ಚಿಸಲಿದ್ದಾರೆ ಎಂದರು.ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗುತ್ತಿರುವ ಮಾದಕ ವಸ್ತುಗಳ (ಡ್ರಗ್ಸ್) ಜಾಲದ ವಿರುದ್ಧ ಯುವಜನತೆ ಧ್ವನಿ ಎತ್ತಬೇಕು. ಡ್ರಗ್ಸ್ ಮಾರಾಟ ಅಥವಾ ಬಳಕೆಯ ಸುಳಿವು ಸಿಕ್ಕರೆ ತಕ್ಷಣ ಉಚಿತ ಸಹಾಯವಾಣಿ 112 ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು, ಮಾಹಿತಿ ನೀಡುವವರ ಹೆಸರನ್ನುಗೌಪ್ಯವಾಗಿಡಲಾಗುವುದು ಎಂದು ಡಿಸಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.