ಧಾರವಾಡ: ರೀಲ್ಸ್ ಮಾಡುತ್ತೇನೆಂದು ನನ್ನ ಮಗಳನ್ನು ಕರೆದುಕೊಂಡು ಹೋದ ಆತ, ನಮ್ಮನ್ನು ನಂಬಿಸಿ ದ್ರೋಹ ಮಾಡಿದ್ದಾನೆ. ಅವನಿಗೆ ತಕ್ಷ ಶಿಕ್ಷೆ ನೀಡುವ ಮೂಲಕ ನನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಬನ್ನಿ...!
ಮೊದ-ಮೊದಲು ರೀಲ್ಸ್ ಮಾಡಲು ಮಗಳನ್ನು ಕರೆದುಕೊಂಡು ಹೋಗುತ್ತಿದ್ದನು. ದುಡಿಯಲು ಹುಬ್ಬಳ್ಳಿಗೆ ಬಂದು ಜೀವನ ನಡೆಸುತ್ತಿದ್ದ ನಮಗೆ ಮಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾಳೆ ಎಂದುಕೊಂಡಿದ್ದೆವು. ಆದರೆ, ಮಗಳನ್ನು ನಂಬಿಸಿ ನಮಗೂ ಮೋಸ ಮಾಡಿ ಆತ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಅವನು ನಂಬಿಕೆ ದ್ರೋಹಿ. ಆತನಿಗೆ ಶಿಕ್ಷೆಯಾಗಬೇಕೆಂದು ಯುವತಿ ತಾಯಿ ಮನವಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮುಂಡಗೋಡದ ಗಾಂಧಿನಗರ ನಮ್ಮ ವಿಳಾಸ ಎಂದು ಸುಳ್ಳು ಹೇಳಿ ಮುಂಡಗೋಡದ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಜೂನ್ ತಿಂಗಳಂದು ಹಿಂದು ಯುವತಿಯನ್ನು ಮದುವೆಯಾಗಿರುವ ಮುಕಳೆಪ್ಪನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸರಿಗೆ ಬಜರಂಗದಳದ ಸದಸ್ಯರು ಶುಕ್ರವಾರ ದೂರು ನೀಡಿದ್ದಾರೆ. ಆದರೆ, ಈ ದೂರು ದಾಖಲಿಸಿಕೊಳ್ಳದ ಪೊಲೀಸರು ಮುಕಳೆಪ್ಪ ಹಾಗೂ ಯುವತಿಯನ್ನು ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದಾರೆ.ನಾನೇನಿದ್ದರೂ ಮುಕಳೆಪ್ಪನ ಜತೆಗೇ ಜೀವನ ನಡೆಸುತ್ತೇನೆ. ಅವನು ನಾನು ಮಾತ್ರವಲ್ಲದೇ ನಾಲ್ಕೈದು ಜನ ಯುವತಿಯರನ್ನು ಮದುವೆಯಾದರೂ ನಾನು ಆತನೊಂದಿಗೆ ಇರುತ್ತೇನೆ ಎಂದು ಯುವತಿ ಹೇಳುವಷ್ಟು ಮುಕಳೆಪ್ಪ ಯುವತಿಯ ಮನಸ್ಸು ಕೆಡಿಸಿದ್ದಾನೆ. ಜತೆಗೆ ಹು-ಧಾ ಪೊಲೀಸ್ ಆಯುಕ್ತರೊಂದಿಗೆ ಸೇರಿ ಮುಕಳೆಪ್ಪ ಕೆಲವು ವಿಡಿಯೋಗಳನ್ನು ಮಾಡಿದ್ದಾನೆ. ಹೀಗಾಗಿ ಪೊಲೀಸರ ಕೃಪಾಕಟಾಕ್ಷವೂ ಆತನ ಮೇಲಿದ್ದು, ಆತನ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ನಮಗಿಲ್ಲ ಎಂದು ಬಜರಂಗದಳದ ಸದಸ್ಯರು ಹೇಳಿದ್ದಾರೆ.
ಯೂಟ್ಯೂಬರ್ ಖ್ವಾಜಾ ವಿರುದ್ಧ ದೂರುಹುಬ್ಬಳ್ಳಿ:
ಯೂಟ್ಯೂಬರ್ ಸ್ಟಾರ್ ಖ್ವಾಜಾ ಶಿರಹಟ್ಟಿ ಉರ್ಪ್ ಮುಕಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಯುವತಿಯ ಪಾಲಕರು ದೂರು ನೀಡಿದ್ದಾರೆ. ಮೋಸ ಮಾಡಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ. ತಮ್ಮ ಮಗಳನ್ನು ವಾಪಸ್ ಕಳಿಸುವಂತೆ ಕೇಳಿದರೆ ಧಮ್ಕಿ ಹಾಕುತ್ತಿದ್ದಾನೆ. ನಮ್ಮ ಮಗಳನ್ನು ನಮ್ಮ ಜತೆ ಕಳುಹಿಸಿ ಕೊಡುವಂತೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಈ ವೇಳೆ ಇದ್ದರು.