ಪರಮ ಗ್ರಂಥವನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ । ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಮತ ಕನ್ನಡಪ್ರಭ ವಾರ್ತೆ ಮಳವಳ್ಳಿ ದೇಶದಲ್ಲಿ ಎಲ್ಲ ವರ್ಗಗಳ ಜನರು ಒಗ್ಗಟಾಗಿ ಭಾಷೆ, ಸಂಸ್ಕೃತಿ, ಜಾತಿ ಧರ್ಮದ ನಡುವೆ ವಿವಿಧೆತೆಯಲ್ಲಿ ಏಕತೆ ಕಾಣುತ್ತಿದ್ದರೆ ಅದಕ್ಕೆ ಸಂವಿಧಾನವೇ ಕಾರಣ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ತಾಲೂಕಿನ ಮಲಿಯೂರು ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ಭಗವಾನ್ ಬುದ್ಧರ ಧ್ಯಾನ ಮಂದಿರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಕಟ್ಟಡದ ಉದ್ಘಾಟನೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಪ್ರಸ್ತುತ ಏಕತೆ ಕಾಣಲು ಕಾರಣ ಎಂಬುದನ್ನು ಯಾರೂ ಮರೆಯುವಂತಿಲ್ಲ, ಸಂವಿಧಾನ ವಿರೋಧಿ ಮಾತುಗಳು ಕೇಳಿ ಬಂದಾಗ ನಿಜವಾದ ಭಾರತೀಯರು ಯಾರೂ ಸುಮ್ಮನೆ ಕೂರಬಾರದು.ಅಂತಹವರನ್ನು ಖಂಡಿಸಬೇಕು. ಈ ಜವಾಬ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಮಾತ್ರವಲ್ಲದೇ ಪ್ರತಿಯೊಬ್ಬ ಬಾರತೀಯನಿಗೂ ಇರಬೇಕು ಎಂದರು. ಸಾವಿರಾರು ವರ್ಷಗಳಿಂದ ಸಮಸ್ಯೆ; ಚಲನಚಿತ್ರ ನಟ ಹಾಗೂ ಚಿಂತಕ ಚೇತನ್ ಕುಮಾರ್ ಅಹಿಂಸಾ ಮಾತನಾಡಿ, ಕಾವೇರಿ ನೀರಿನ ಸಮಸ್ಯೆ 1892 ರಲ್ಲಿ ಮದ್ರಾಸ್ ಮತ್ತು ಮೈಸೂರು ಪ್ರೆಸಿಡೆನ್ಸಿ ನಡುವೆ ಸೃಷ್ಟಿಯಾದ ಸಮಸ್ಯೆ ಅಲ್ಲ. ಅದು ಸಾವಿರಾರು ವರ್ಷಗಳಿಂದ ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆ ತಲೆದೂರಿದೆ. ನೀರಿನ ಸಮಸ್ಯೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಸ್ವಾರ್ಥದಲ್ಲಿ ನೋಡದೇ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಹೇಳಿದರು. ಭಗವಾನ್ ಬುದ್ಧರ ಧ್ಯಾನ ಮಂದಿರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಕಟ್ಟಡವನ್ನು ಬೆಂಗಳೂರಿನ ಸ್ಪೂರ್ತಿಧಾಮದ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಮರಿಸ್ವಾಮಿ ಉದ್ಘಾಟಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ವಹಿಸಿದ್ದರು. ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಶ್ರೀನಾಥ್, ಜಿ.ಪಂ.ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ಸ್ಪೂರ್ತಿಧಾಮದ ವೇದಾವತಿ, ಶಂಕರಮ್ಮ, ತಾ.ಪಂ.ಮಾಜಿ ಉಪಾಧ್ಯಕ್ಷ ಸಿ.ಮಾಧು, ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಎಸ್.ಸಿ.ಎಸ್.ಟಿ.ವಿಭಾಗದ ಅಧ್ಯಕ್ಷ ಎಸ್.ಎಂ.ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಪುಟ್ಟಮಲ್ಲಯ್ಯ, ಮಹದೇವಯ್ಯ, ನಂಜುಂಡಸ್ವಾಮಿ, ಮರಿಸ್ವಾಮಿ, ನಾಗರಾಜು, ಪ್ರಭು ಜಯರಾಮು ಇದ್ದರು. -------------- 2ಕೆಎಂಎನ್ ಡಿ20 ಭಗವಾನ್ ಬುದ್ಧರ ಧ್ಯಾನ ಮಂದಿರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಕಟ್ಟಡವನ್ನು ಗಣ್ಯರು ಉದ್ಘಾಟಿಸಿದರು.