;Resize=(412,232))
ಬೆಂಗಳೂರು : ಮುಂದಿನ ಹತ್ತು ದಿನಗಳ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುವಂಥ ಪ್ರಕರಣ ಪ್ರಸ್ತಾಪಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕುತೂಹಲದ ಹೇಳಿಕೆ ನೀಡಿದ್ದಾರೆ.
ಭಾನುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾನು ವಿದೇಶ ಪ್ರವಾಸ ಮುಗಿಸಿ ಹತ್ತು ದಿನಗಳ ನಂತರ ವಾಪಸ್ ಬರುತ್ತೇನೆ. ದೇಶದಲ್ಲೇ ಅಲ್ಲೋಲ, ಕಲ್ಲೋಲ ಆಗುವಂಥ ಅತ್ಯಂತ ಪ್ರಮುಖ ವಿಷಯ ಪ್ರಸ್ತಾಪಿಸುತ್ತೇನೆ. ಈ ರಾಜ್ಯದಲ್ಲಿ ಏನೇನು ನಡೆಯುತ್ತಿದೆ, ರಾಜ್ಯವನ್ನು ಎಲ್ಲಿಗೆ ಕೊಂಡೊಯ್ದಿದ್ದಾರೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ ಎಂದು ತಿಳಿಸಿದರು.
ಎಂತೆಂಥ ಪರಿಸ್ಥಿತಿಯಲ್ಲಿ ಈ ರಾಜ್ಯ ಆಳುತ್ತಿದ್ದಾರೆಂದರೆ ಕೇವಲ ಅಧಿಕಾರ ಹಿಡಿಯಲು ಏನೇನು ಮಾಡುತ್ತಾರೆ ನೋಡಿ. ನಾನು ಎಲ್ಲವನ್ನೂ ನಿಮ್ಮ ಮುಂದಿಡುತ್ತೇನೆ. ಆಗ ಈ ಕುಮಾರಸ್ವಾಮಿ ಏನು ಅಂತ ಹೇಳಿ ಎಂದು ತೀಕ್ಷ್ಣವಾಗಿ ಹೇಳಿದರು.
ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ. ಒಂದೊಂದು ದಿನವೂ ನಮಗೆ ಮುಖ್ಯ. ಆದರೆ, ಅಲ್ಲಿ ನಮ್ಮ ಕನ್ನಡಿಗರು ಸೇರಿ ಅಕ್ಕ ಸಮ್ಮೇಳನ ಮಾಡುತ್ತಿದ್ದಾರೆ. 25ನೇ ವರ್ಷದ ಕಾರ್ಯಕ್ರಮ. ಬರಲೇಬೇಕು ಎಂಬ ತೀವ್ರ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ, ಅವರ ಸಮಾಧಾನಕ್ಕಾಗಿ ಹೋಗಿ ಬರಬೇಕಿದೆ. ನನಗೆ ಈಗಲೂ ಮನಸ್ಸು ಇಲ್ಲೇ ಇರಬೇಕು ಎಂದಿದೆ. ಪ್ರತಿಯೊಂದು ಕ್ಷಣವೂ ಇಲ್ಲಿರಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.