ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಹಜ ಅಧಿಕಾರ ಯೋಗವಿಲ್ಲ. ಸಿಸೇರಿಯನ್ ಆಗಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರಿಗೆ ಭವಿಷ್ಯವನ್ನು ನಾನು ಹಿಂದೆ ವಿಧಾನಸೌಧದಲ್ಲೇ ಹೇಳಿದ್ದೇನೆ. ಅವರಿಗೆ ಅಧಿಕಾರ ಹಾಗೆಯೇ ಸಿಗುವುದಿಲ್ಲ. ಜಾತಕದಲ್ಲಿ ಗುರು, ಶುಕ್ರ, ಶನಿ ಯೋಗ ಇಲ್ಲ. ಒದ್ದು ಅಧಿಕಾರ ಕಿತ್ತುಕೊಳ್ಳಬೇಕು ಎಂದರು.
ಕಾಂಗ್ರೆಸ್ ಸಚಿವರು ಕ್ಷಿಪ್ರ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆ. ಆದರೆ, ಡಿ.ಕೆ.ಶಿವಕುಮಾರ್ ಅವರ ಜಾತಕ ಸರಿಯಿಲ್ಲ. ಅಧಿಕಾರವನ್ನು ಅವರು ಒದ್ದು ಕಿತ್ತುಕೊಳ್ಳಬೇಕಿದೆ. ಅವರಿಗೆ ನೈಸರ್ಗಿಕವಾದ ಯೋಗವಿಲ್ಲ ಎಂದು ಹೇಳಿದರು.
ಗೃಹ ಇಲಾಖೆ ಕಾಂಗ್ರೆಸ್ನ ಡಿಪಾರ್ಟ್ಮೆಂಟ್ ಆಗಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಅದೇ ರೀತಿ ಗೃಹ ಇಲಾಖೆಯ ಹೊಸ ಕಾನೂನು ತಂದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಬರೆಯುವವರ ವಿರುದ್ಧ ಕ್ರಮ ವಹಿಸಲಿದೆ. ಇದರಿಂದ ಪತ್ರಕರ್ತರನ್ನು ಜೈಲಿಗೆ ಹಾಕಲಾಗುತ್ತದೆ. ಗ್ಯಾರಂಟಿಗಳನ್ನು ನಿಲ್ಲಿಸಲು ಹೈಕಮಾಂಡ್ ಬಿಡುತ್ತಿಲ್ಲ. ಅದಕ್ಕಾಗಿ ಹಣ ಉಳಿಸಲು ಪಿಂಚಣಿ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಹಣ ಕಡಿತ ಮಾಡಲಾಗುತ್ತದೆ. ಅನೇಕ ಫಲಾನುಭವಿಗಳನ್ನು ಅನರ್ಹ ಮಾಡಲಾಗುತ್ತದೆ ಎಂದರು.
ಅಶೋಕ್ ಜ್ಯೋತಿಷ್ಯ ಹೇಳ್ತಾರಾ?:
ವಿಧಾನಸಭೆ ಪ್ರತಿಪಕ್ಷ ನಾಯಕ ಅಶೋಕ್ ಜ್ಯೋತಿಷ್ಯ ಹೇಳಲು ಆರಂಭಿಸಿರುವುದು ಗೊತ್ತಿರಲಿಲ್ಲ. ಅವರು ಜ್ಯೋತಿಷ್ಯ ಕಲಿತಿದ್ದರೆ ನಾನು ಹೋಗಿ ಭವಿಷ್ಯ ಕೇಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಅಕ್ಟೋಬರ್ಗೆ ನಾಯಕತ್ವ ಬದಲಾವಣೆ ಆಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಭಾನುವಾರ ಡಿ.ಕೆ. ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಶೋಕ್ ಅವರು ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರಾ? ಅವರು ಜ್ಯೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ. ನಾನು ಹೋಗಿ ಭವಿಷ್ಯ ಕೇಳುತ್ತೇನೆ ಎಂದು ಹೇಳಿದರು.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಕೇಳಿದಾಗ, ‘ಹೌದು, ಅವರು ಶಾಸಕರ ಜೊತೆ ಖುದ್ದಾಗಿ ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅವರೇ ಶಾಸಕರಿಗೆ ತಿಳಿಸಿದ್ದಾರೆ. ನಾನು ಕೂಡ ಶಾಸಕರಿಗೆ ಮಾಹಿತಿ ನೀಡಿದ್ದೇನೆ. ಕ್ಷೇತ್ರ, ಪಕ್ಷ ಸಂಘಟನೆ ಕುರಿತು ಶಾಸಕರು ಚರ್ಚಿಸಬಹುದು’ ಎಂದು ತಿಳಿಸಿದರು.