ಪರಿಷತ್‌ ಸದಸ್ಯರು ತಮ್ಮ ಮಾತು ಕೇಳದಕ್ಕೆ ಸಭಾಪತಿ ಹೊರಟ್ಟಿ ಬೇಸರ - ನನಗೆ ಅವಮಾನವಾಗುತ್ತಿದೆ

Sujatha NR | Published : Mar 6, 2025 10:20 AM

ಸದನದ ನಡಾವಳಿ ಪ್ರಕಾರ ನಡೆದುಕೊಳ್ಳದೆ, ತಮ್ಮ ಆದೇಶಕ್ಕೂ ಮನ್ನಣೆ ಕೊಡದೆ, ಅನುಮತಿ ಇಲ್ಲದೆ ಎದ್ದು ನಿಂತು ಮಾತನಾಡುವ ಸದಸ್ಯರ ನಡವಳಿಕೆಯಿಂದ ತೀವ್ರ ಬೇಸರಗೊಂಡ ಸಭಾಪತಿ ಬಸವರಾಜ ಹೊರಟ್ಟಿ

 ವಿಧಾನ ಪರಿಷತ್ತು : ಸದನದ ನಡಾವಳಿ ಪ್ರಕಾರ ನಡೆದುಕೊಳ್ಳದೆ, ತಮ್ಮ ಆದೇಶಕ್ಕೂ ಮನ್ನಣೆ ಕೊಡದೆ, ಅನುಮತಿ ಇಲ್ಲದೆ ಎದ್ದು ನಿಂತು ಮಾತನಾಡುವ ಸದಸ್ಯರ ನಡವಳಿಕೆಯಿಂದ ತೀವ್ರ ಬೇಸರಗೊಂಡ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ತಮಗೆ ಅವಮಾನವಾಗುತ್ತಿದ್ದು, ಈಗಲೇ ದೊಡ್ಡ ತೀರ್ಮಾನ ತೆಗೆದುಕೊಳ್ಳುವುದಾಗಿ’ ಹೇಳಿದ ಘಟನೆ ನಡೆಯಿತು.

ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಜೆಡಿಎಸ್‌ ನಾಯಕ ಟಿ.ಎ.ಶರವಣ ಮಾತನಾಡಿ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಆರು ತಿಂಗಳಿನಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸಿಲ್ಲ. ಆದರೂ ರಾಜ್ಯಪಾಲರ ಮೂಲಕ ಸತ್ಯಕ್ಕೆ ದೂರವಾದ ಭಾಷಣ ಮಾಡಿಸಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಸಭಾನಾಯಕ ಬೋಸರಾಜು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದರು, ಇದಕ್ಕೆ ಕಾಂಗ್ರೆಸ್ಸಿನ ಐವಾನ್‌ ಡಿಸೋಜ, ಉಮಾಶ್ರೀ ಅವರು ಧ್ವನಿಗೂಡಿಸಿದರು.

ಈ ಮಧ್ಯೆ ಶರವಣ ಅವರ ಭಾಷಣಕ್ಕೆ ಪದೇ ಪದೆ ಆಡಳಿತ ಪಕ್ಷದ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಜೆಡಿಎಸ್‌ ಸದಸ್ಯ ಭೋಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಮಾತಿಗೆ ಬಿಜೆಪಿಯ ಎನ್‌.ರವಿಕುಮಾರ್, ಭಾರತೀಶೆಟ್ಟಿ ಸೇರಿ ಇತರರು ನಿಂತರು. ಇದರಿಂದ ಸದನದಲ್ಲಿ ಮಾತಿನ ಚಕಮಕಿಯಿಂದ ಗದ್ದಲ ಏರ್ಪಟ್ಟ ಕಾರಣ ಸಭಾಪತಿ ಅವರು ಹತ್ತು ನಿಮಿಷ ಕಲಾಪ ಮುಂದೂಡಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಶರವಣ ಮತ್ತು ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹ್ಮದ್‌ ಅವರ ನಡುವೆ ಗೃಹಲಕ್ಷ್ಮಿ ಯೋಜನೆ ಕುರಿತು ಜಟಾಪಟಿ ಶುರುವಾಯಿತು. ಈ ನಡುವೆ ಗೃಹಲಕ್ಷ್ಮಿ ಹಣ ಆರು ತಿಂಗಳಿನಿಂದ ಬರದಿರುವ ಬಗ್ಗೆ ಸಾಕ್ಷ್ಯ ಕೊಟ್ಟರೆ ರಾಜೀನಾಮೆ ನೀಡುತ್ತೇನೆ ಎಂದು ಸಲೀಂ ಅಹ್ಮದ್‌ ಸವಾಲು ಹಾಕಿದರು. ಇದರಿಂದ ಇನ್ನಷ್ಟು ಗದ್ದಲ ಹೆಚ್ಚಾಯಿತು.

ಸದನವನ್ನು ಸಾಮಾನ್ಯ ಸ್ಥಿತಿಗೆ ತರಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗದ ಕಾರಣ ಸಭಾಪತಿ ಹೊರಟ್ಟಿ ಅವರು ತೀವ್ರ ಬೇಸರ ವ್ಯಕ್ತಡಿಸಿದರು. 45 ವರ್ಷ ಈ ಸದನದಲ್ಲಿ ಕುಳಿತಿದ್ದೇನೆ. ನನಗೆ ಇಲ್ಲಿ ಆಗುವಷ್ಟು ಅವಮಾನ ಯಾರಿಗೂ ಆಗಲ್ಲ. ಇಲ್ಲೇ ದೊಡ್ಡ ತೀರ್ಮಾನ ಮಾಡುತ್ತೇನೆ. ಈ ಪೀಠಕ್ಕೆ ಘನತೆ, ಗೌರವ ಇಲ್ಲವೇ? ಬೇಕಾದಾಗ ಎದ್ದು ನಿಂತು ಮಾತನಾಡಿದರೆ ಏನು ಕಥೆ. ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ಹಾಗೆಂದು ಹೇಗೆ ಬೇಕಾದರೂ ನಡೆದುಕೊಂಡರೆ ಆಗಲ್ಲ ಎಂದು ಬೇಸರ ಹೊರಹಾಕಿದರು.

ಸುವರ್ಣ ಸೌಧದ ಮೆಟ್ಟಿಲು ಮೇಲೆ ಬಂಧನ: ಹಕ್ಕುಚ್ಯುತಿಗೆ ಕೊಟ್ಟ ಹೊರಟ್ಟಿ 

ಬೆಳಗಾವಿ ಅಧಿವೇಶನ ವೇಳೆ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಜಟಾಪಟಿ ನಂತರ ಸುವರ್ಣ ವಿಧಾನಸೌಧ ಮೆಟ್ಟಿಲ ಮೇಲೆ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರನ್ನು ಪೊಲೀಸರು ಬಂಧಿಸಿರುವ ವಿಷಯವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸಿರುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.

ಭೋಜನ ವಿರಾಮಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒಂದು ಘಟನೆ ನಡೆದಿತ್ತು. ಈ ಬಗ್ಗೆ ಸುವರ್ಣ ವಿಧಾನಸೌಧ ಮೆಟ್ಟಿಲ ಮೇಲೆ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ತಮ್ಮನ್ನು ಸೇರಿ ಅನೇಕ ಸದಸ್ಯರನ್ನು ಅನಾಮತ್ತಾಗಿ ಎತ್ತಿಕೊಂಡು ಬಾಗೇವಾಡಿ ಪೊಲೀಸ್‌ ಸ್ಟೇಷನ್‌ಗೆ ಹೋಗಿದ್ದಾರೆ. ಸದನದ ಒಳಗೆ ಈ ಘಟನೆ ನಡೆದಿದೆ. ಹೀಗಾಗಿ ನಮ್ಮ ಹಕ್ಕುಚ್ಯುತಿ ಆಗಿದೆ, ಪೊಲೀಸರು ಹೇಗೆ ಒಳಗಡೆ ಬಂದು ಬಂಧಿಸಿದರು. ನಮಗೆ ರಕ್ಷಣೆ ಕೊಡುವವರು ಯಾರು? ಹೀಗಾಗಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ಸದಸ್ಯರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಸರಿಯಲ್ಲ, ಸಭಾಪತಿಗಳು ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಆಗ ಸಭಾಪತಿಗಳು ಘಟನೆ ಬಗ್ಗೆ ತಮ್ಮ ಗಮನಕ್ಕೆ ಬಂದ ಎಲ್ಲರ ಜೊತೆ ಮಾತನಾಡಿದ್ದೇನೆ, ಈ ವಿಷಯವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸಿದ್ದೇನೆ. ಹಾಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.