ಸಚಿವ ಸಂಪುಟ ವಿಸ್ತರಣೆ ಬಳಿಕ ಡಿ.ಕೆ.ಶಿವಕುಮಾರ್‌ ಅವರ ಸಂಪುಟದಲ್ಲಿ ಒಟ್ಟು ಮೂರು ಮಂದಿ ಮುಸ್ಲಿಮರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರೂ ಆದ್ಯತೆ ಹಳೆ ಮೈಸೂರು ಹಾಗೂ ಮಂಗಳೂರು ಭಾಗಕ್ಕೆ ಮಾತ್ರ ದೊರಕಿದೆ.

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬಳಿಕ ಡಿ.ಕೆ.ಶಿವಕುಮಾರ್‌ ಅವರ ಸಂಪುಟದಲ್ಲಿ ಒಟ್ಟು ಮೂರು ಮಂದಿ ಮುಸ್ಲಿಮರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರೂ ಆದ್ಯತೆ ಹಳೆ ಮೈಸೂರು ಹಾಗೂ ಮಂಗಳೂರು ಭಾಗಕ್ಕೆ ಮಾತ್ರ ದೊರಕಿದೆ.

ಸಲೀಂ ಅಹ್ಮದ್‌ ಅವರಿಗೆ ಸಭಾಪತಿ ಹುದ್ದೆ

ಈ ಕೊರತೆಯನ್ನು ತುಂಬಲೋ ಎಂಬಂತೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕ ಸಲೀಂ ಅಹ್ಮದ್‌ ಅವರಿಗೆ ಸಭಾಪತಿ ಹುದ್ದೆ ನೀಡುವ ಮೂಲಕ ನ್ಯಾಯ ಒದಗಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿದೆ. ಆದರೆ, ಒಟ್ಟಾರೆ ಸಚಿವ ಸಂಪುಟವನ್ನು ತೆಗೆದುಕೊಂಡರೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಎರಡೂ ಭಾಗದಲ್ಲಿನ ಒಬ್ಬ ಮುಸ್ಲಿಂ ಶಾಸಕರಿಗೂ ಅವಕಾಶ ಸಿಕ್ಕಿಲ್ಲ.

ಕಿತ್ತೂರು ಕರ್ನಾಟಕ ಭಾಗದಿಂದ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಲೀಂ ಅಹ್ಮದ್‌ ಅವರಿಗೆ ವಿಧಾನ ಪರಿಷತ್‌ ಸಭಾಪತಿಯಂಥ ಪ್ರಮುಖ ಹುದ್ದೆ ಒಲಿದಿದೆ. ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ 5 ಮಂದಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಲಾಗಿತ್ತು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ರೋಷನ್‌ಬೇಗ್‌, ತನ್ವೀರ್‌ ಸೇಠ್‌, ಯು.ಟಿ. ಖಾದರ್‌, ಖಮರುಲ್‌ ಇಸ್ಲಾಂ ಅವರು ಸ್ಥಾನ ಪಡೆದಿದ್ದರು.

ಜೆಡಿಎಸ್‌ ಜತೆ 2018ರಲ್ಲಿ ಮಾಡಿದ್ದ ಸಮ್ಮಿಶ್ರ ಸರ್ಕಾರದಲ್ಲೂ ಕಾಂಗ್ರೆಸ್‌ ಪಕ್ಷದಿಂದಲೇ ಯು.ಟಿ.ಖಾದರ್‌, ಜಮೀರ್‌ ಅಹ್ಮದ್‌ಖಾನ್‌, ರಹೀಂಖಾನ್‌ ಸೇರಿ ಮೂರು ಮಂದಿ ಮುಸ್ಲಿಮರನ್ನು ಸಚಿವರನ್ನಾಗಿ ಮಾಡಲಾಗಿತ್ತು.

ಆದರೆ, 2023ರ ಸಿದ್ದರಾಮಯ್ಯ ಸಂಪುಟದಲ್ಲಿ ಜಮೀರ್‌ ಅಹ್ಮದ್‌ಖಾನ್‌, ರಹೀಂಖಾನ್‌ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಇದೀಗ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಜಮೀರ್‌ ಅಹ್ಮದ್‌ಖಾನ್‌, ಯು.ಟಿ.ಖಾದರ್‌ ಹಾಗೂ ರಿಜ್ವಾನ್‌ ಅರ್ಷದ್‌ ಈ ಮೂವರಿಗೆ ಅವಕಾಶ ದೊರೆತಿದೆ. ಒಟ್ಟಾರೆ ಉತ್ತಮ ಪ್ರಾಧಾನ್ಯತೆ ದೊರಕಿದ್ದರೂ ಉತ್ತರ ಕರ್ನಾಟಕಕ್ಕೆ ಆದ್ಯತೆ ಸಿಕ್ಕಿಲ್ಲ ಎಂಬುದು ಕೊರತೆ.

2 ದಶಕದಿಂದ ಕಿತ್ತೂರು ಕರ್ನಾಟಕಕ್ಕಿಲ್ಲ ಅವಕಾಶ:

ಕಿತ್ತೂರು ಕರ್ನಾಟಕದ ಹುಬ್ಬಳ್ಳಿಯಿಂದ 2005ರಲ್ಲಿ ಜಬ್ಬಾರ್ ಖಾನ್ ಹೊನ್ನಾಳಿ ಅವರು ಒಂದು ವರ್ಷದ ಅವಧಿವರೆಗೆ ಸಚಿವರಾಗಿದ್ದು ಬಿಟ್ಟರೆ 20 ವರ್ಷದಿಂದ ಅಲ್ಪಸಂಖ್ಯಾತ ಸಚಿವರಿಗೆ ಅವಕಾಶವೇ ಸಿಕ್ಕಿರಲಿಲ್ಲ. 

ಈ ಭಾಗದ ಏಳು ಜಿಲ್ಲೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಆದರೂ ಅವಕಾಶ ಸಿಕ್ಕಿಲ್ಲ. ಇನ್ನು ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಕಲ್ಯಾಣ ಕರ್ನಾಟಕದ ರಹೀಂ ಖಾನ್‌ ಕೂಡ ಸಚಿವ ಸ್ಥಾನ ಕಳೆದುಕೊಂಡಿದ್ದು, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಎರಡಕ್ಕೂ ಪ್ರಾತಿನಿಧ್ಯತೆ ಇಲ್ಲದಂತಾಗಿದೆ. ಈ ಕೊರತೆಯನ್ನು ಸಮುದಾಯಕ್ಕೆ ಸಭಾಪತಿ ಹುದ್ದೆ ನೀಡುವ ಮೂಲಕ ಸರಿದೂಗಿಸುವ ಯತ್ನ ನಡೆದಿದೆ.