ಯಲಹಂಕದಲ್ಲಿ ಕಾಂಗ್ರೆಸ್‌ ಆಟಕ್ಕೆ ಉಂಟು, ಲೆಕ್ಕಕ್ಕಿಲ್ಲ: ಸುಧಾಕರ್‌

KannadaprabhaNewsNetwork |  
Published : Apr 20, 2024, 01:39 AM ISTUpdated : Apr 20, 2024, 05:16 AM IST
ಚಿಕ್ಕಬಳ್ಳಾಪುರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಅವರು ಯಲಹಂಕದ ವಿವಿಧೆಡೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರೊಂದಿಗೆ ಪ್ರಚಾರ ಮಾಡಿದರು. | Kannada Prabha

ಸಾರಾಂಶ

ಯಲಹಂಕದಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರೊಂದಿಗೆ ಭರ್ಜರಿ ಪ್ರಚಾರ ನಡೆಸಿರುವ ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಜರಿದಿದ್ದಾರೆ.

  ಯಲಹಂಕ :  ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಂದಾದ ಬಳಿಕ ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹೇಳಿದರು.

ಯಲಹಂಕ ವಿಧಾನಸಭಾ ಕ್ಷೇತ್ರದ ತೋಟದಗುಡ್ಡಹಳ್ಳಿ, ಅಂಚೇಪಾಳ್ಯ ಮೊದಲಾದ ಕಡೆಗಳಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರೊಂದಿಗೆ ಡಾ। ಕೆ.ಸುಧಾಕರ್‌ ಪ್ರಚಾರ ಮತ್ತು ಸಭೆ ನಡೆಸಿದರು. ನಂತರ ಮಾತನಾಡಿ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರೊಂದಿಗೆ ಸಭೆ ನಡೆಸಿದ್ದೇನೆ. ಇಲ್ಲಿ ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಇದೆ. ಶೇ.80 ರಷ್ಟು ಮತಗಳು ಬಿಜೆಪಿಗೆ ದೊರೆಯಲಿದೆ. ಆದರೆ ಕಾಂಗ್ರೆಸ್‌ಗೆ ಶೇ.20ರಷ್ಟೂ ಮತಗಳು ದೊರೆಯುವುದು ಅನುಮಾನ. ಇದಕ್ಕೆ ಶಾಸಕರ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದರು.

ಯಲಹಂಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸಂಘಟನೆ ಶಕ್ತಿಯುತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮಾಗಮದಿಂದ ಇಲ್ಲಿ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.

ಯುವನಿಧಿಗೆ ಷರತ್ತು: ಕಾಂಗ್ರೆಸ್‌ ಸರ್ಕಾರ ಬೆರಳೆಣಿಕೆಯ ನಿರುದ್ಯೋಗಿ ಯುವಜನರಿಗೆ ಷರತ್ತುಗಳನ್ನು ಹಾಕಿ ಹಣ ನೀಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಉದ್ಯೋಗಾವಕಾಶ ನೀಡಿ ಬದುಕು ಕಟ್ಟಿಕೊಟ್ಟಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆಯಡಿ ಎಲ್ಲ‌ ನಿರುದ್ಯೋಗಿಗಳಿಗೆ ಹಣ ನೀಡುವುದಾಗಿ ತಿಳಿಸಿತ್ತು. ಆದರೆ ನಂತರ ಬಹಳ ತಡವಾಗಿ ಯೋಜನೆ ಜಾರಿ ಮಾಡಿ ಅನೇಕ ಷರತ್ತುಗಳನ್ನು ಹಾಕಿ ಎಲ್ಲ ಯುವಜನರಿಗೆ ಅದರ ಪ್ರಯೋಜನ ಸಿಗದಂತೆ ಮಾಡಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ನೀಡಿದ್ದಾರೆ. ಇದೇ ಮೋದಿ ಗ್ಯಾರಂಟಿ ಎಂದರು.

1.50 ಕೋಟಿ ಯುವಜನರಿಗೆ ತರಬೇತಿ: ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ 1.50 ಕೋಟಿ ಯುವಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ. ರೋಜ್‌ಗಾರ್‌ ಮೇಳ ಯೋಜನೆಯಡಿ 2024ರ ಫೆಬ್ರವರಿ 13ರಂದು ಒಂದೇ ದಿನ 1 ಲಕ್ಷ ಜನರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಈವರೆಗೆ 10 ರೋಜ್‌ಗಾರ್‌ ಮೇಳಗಳನ್ನು ನಡೆಸಿದ್ದು, 6.5 ಲಕ್ಷ ಯುವಜನರಿಗೆ ಉದ್ಯೋಗ ದೊರೆತಿದೆ. ನವೋದ್ಯಮಗಳ ಪ್ರೋತ್ಸಾಹಕ್ಕೆ ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆ ಆರಂಭಿಸಿದ್ದು, 10 ಲಕ್ಷ ನೇರ ಉದ್ಯೋಗಗಳು ಇದರಿಂದ ಸೃಷ್ಟಿಯಾಗಿದೆ. 2023ರ ಡಿಸೆಂಬರ್‌ವರೆಗೆ 1.16 ಲಕ್ಷ ನವೋದ್ಯಮಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. 2017-2021ರ ನಡುವೆ ಟೆಕ್‌ ಸ್ಟಾರ್ಟ್‌ ಅಪ್‌ಗಳು 23 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ನಾಸ್ಕಾಮ್‌ ಅಧ್ಯಯನ ತಿಳಿಸಿದೆ ಎಂದು ಡಾ.ಕೆ.ಸುಧಾಕರ್‌ ಹೇಳಿದರು.

ಯುವಜನರಿಗೆ ಗ್ಯಾರಂಟಿಗಳ ನಡುವಿನ ವ್ಯತ್ಯಾಸ ಚೆನ್ನಾಗಿ ಅರಿವಿದೆ. ಕಾಂಗ್ರೆಸ್‌ ನೀಡುತ್ತಿರುವ ಗ್ಯಾರಂಟಿ ತಾತ್ಕಾಲಿಕವಾಗಿದ್ದು, ಇದು ಬದುಕನ್ನು ಶಾಶ್ವತವಾಗಿ ಕಟ್ಟಿಕೊಡುವುದಿಲ್ಲ. ಆದರೆ ಮೋದಿ ಗ್ಯಾರಂಟಿ ದೂರದೃಷ್ಟಿಯ ಗುರಿಗಳನ್ನು ಹೊಂದಿದೆ. ಇದು ಯುವಜನತೆಗೆ ಹೆಚ್ಚು ಅರಿವಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯುವಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಉದ್ಯೋಗಾವಕಾಶ: ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮೊದಲಾದ ಸ್ಥಳಗಳನ್ನು ಬೆಂಗಳೂರಿಗೆ ಪರ್ಯಾಯವಾಗಿ ಉಪನಗರಗಳಾಗಿ ಬೆಳೆಸಲಾಗುವುದು. ಈ ಭಾಗಗಳಲ್ಲಿ ಹೊಸ ಉದ್ಯಮಗಳ ಸ್ಥಾಪನೆ ಮಾಡಿ ಹೆಚ್ಚು ಉದ್ಯೋಗವಾಕಾಶ ಕಲ್ಪಿಸಲಾಗುವುದು. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗಿ ಈ ಭಾಗಗಳ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಮಾಡಲು ಅವಕಾಶ ದೊರೆಯಲಿದೆ ಎಂದು ಡಾ। ಕೆ.ಸುಧಾಕರ್‌ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ರಾಜ್ಯದಲ್ಲಿ ಇ-ವಾಹನ ಕ್ಷೇತ್ರ ಅಭಿವೃದ್ಧಿಗೆ ಒತ್ತು : ಎಚ್‌.ಡಿ. ಕುಮಾರಸ್ವಾಮಿ