ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಷಯ-ಬಿಜೆಪಿಯವರಿಗೆ ವಿರೋಧಿಸುವುದು ಬಿಟ್ಟು ಬೇರೆ ಕೆಲಸ ಇಲ್ಲ: ಲಕ್ಷ್ಮಣ

KannadaprabhaNewsNetwork |  
Published : Dec 27, 2024, 12:46 AM ISTUpdated : Dec 27, 2024, 04:31 AM IST
4 | Kannada Prabha

ಸಾರಾಂಶ

ನಾಥುರಾಮ್ ಗೋಡ್ಸೆ ಹೆಸರನ್ನು ರಸ್ತೆಗೆ ಇಟ್ಟಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂ ಇದೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ ಹೆಸರಿನಲ್ಲೂ ರಸ್ತೆ ಇದೆ. ಇದಕ್ಕೆಲ್ಲಾ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು. ಬಿಜೆಪಿಯವರಿಗೆ ವಿರೋಧ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲ.

 ಮೈಸೂರು : ನಗರದ ಕೆ.ಆರ್.ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯವರಿಗೆ ವಿರೋಧ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಥುರಾಮ್ ಗೋಡ್ಸೆ ಹೆಸರನ್ನು ರಸ್ತೆಗೆ ಇಟ್ಟಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂ ಇದೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ ಹೆಸರಿನಲ್ಲೂ ರಸ್ತೆ ಇದೆ. ಇದಕ್ಕೆಲ್ಲಾ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವಂತೆ ಕೋರಿ ಶಾಸಕ ಕೆ.ಹರೀಶ್ ಗೌಡ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಸಿದ್ದರಾಮಯ್ಯ ನೀಡಿರುವ ಅನುದಾನದ ವಿಚಾರ ಪ್ರಸ್ತಾಪಿಸಿ, ಒಟ್ಟು 12 ಆಸ್ಪತ್ರೆಗಳು ಆ ರಸ್ತೆಯಲ್ಲಿ ನಿರ್ಮಾಣ ಆಗಿವೆ. ಇದರಿಂದ ಐದು ಜಿಲ್ಲೆಗಳ ಸುಮಾರು 77 ಲಕ್ಷ ಜನರು ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಹಾಗಾಗಿ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಸೂಕ್ತ ಎಂದರು.

ರಾಜ್ಯ ಸರ್ಕಾರದ ನಡಾವಳಿ ಪ್ರಕಾರ ವೃತ್ತ, ರಸ್ತೆ, ಉದ್ಯಾನವನಕ್ಕೆ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರ ಪ್ರಕಾರವೇ ನಗರ ಪಾಲಿಕೆ ಆಯುಕ್ತರು ಸ್ಥಾಯಿ ಸಮಿತಿಗೆ ಕಳುಹಿಸಿದ್ದಾರೆ. ಸ್ಥಾಯಿ ಸಮಿತಿ ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೆಲ ಸಂಘ ಸಂಸ್ಥೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್‌ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದರು.

ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಕಟುವಾಗಿ ಟೀಕೆ ಮಾಡುತ್ತಾ ಬಂದಿದ್ದವರು, ಅಪರೂಪಕ್ಕೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನು? ಎಂದು ಹೇಳಿದ್ದಾರೆ. ಬಿಜೆಪಿಯವರ ಹಿಡನ್ ಅಜೆಂಡಾ ಅರ್ಥ ಮಾಡಿಕೊಂಡು ಹೇಳಿದ್ದಾರೆ ಎಂದರು.

ಪ್ರತಾಪ್ ಸಿಂಹ ಹತ್ತು ವರ್ಷಗಳ ಬಳಿಕ ನಿಜ ಹೇಳಿದ್ದಾರೆ. ಅವರು ಎಲ್ಲಾದರೂ ಸಿಕ್ಕಿದರೆ ಕಾಫಿ ಕೊಡಿಸುತ್ತೇನೆ. ನಿಜ ಹೇಳಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರೊಂದಿಗೆ ಕಾಫಿ ಕುಡಿಯುವುದಕ್ಕೆ ಮಾತ್ರ ಸೀಮಿತ. ಏಕೆಂದರೆ ಅವರು ರೈಟಿಸ್ಟ್. ನಿನ್ನೆ ಆ ರೀತಿ ಹೇಳಿದ್ದಾರೆ, ಇಂದು ನಾಳೆ ಇನ್ನೇನು ಹೇಳ್ತಾರೋ ಗೊತ್ತಿಲ್ಲ ಎಂದರು.

ಕ್ರಿಮಿನಲ್ ಕೇಸ್ ಇರುವ ವ್ಯಕ್ತಿ ಮುನಿರತ್ನ. ಅವರು ರಾಜಕೀಯದಲ್ಲಿ ಇರುವುದೇ ದುರಂತ. ಸುಖಾಸುಮ್ಮನೆ ಡಿ.ಕೆ. ಸುರೇಶ್, ಡಿ.ಕೆ.ಶಿವಕುಮಾರ್, ಕುಸುಮಾ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಮೊಟ್ಟೆಗೆ ಆಸಿಡ್ ಹಾಕಿದ್ದಾರೆ ಎಂದು ಹೇಳಿದ್ದಾರೆ, ಮೊಟ್ಟೆ ಒಳಗಡೆ ಹೇಗೆ ಆಸಿಡ್ ಹಾಕುತ್ತಾರೆ?, ಬಿಜೆಪಿಯವರು ಮುನಿರತ್ನ ಯಾರು ಎಂದು ಜನರಿಗೆ ತಿಳಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಕಾರ್ಯದರ್ಶಿ ಶಿವಣ್ಣ, ವಕ್ತಾರ ಮಹೇಶ್ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಮಭಾವದ ಶಿಕ್ಷಣಕ್ಕೆ ಸಾರ್ವಜನಿಕ ಹಾಸ್ಟೆಲ್‌ ಅಗತ್ಯ: ಎಚ್‌. ಆಂಜನೇಯ
ಕೇಂದ್ರದ ತೆರಿಗೆ ಪಾಲು ಏರಿಕೆಯಲ್ಲಿ ರಾಜ್ಯ ನಂ.1