- ಕಾಂಗ್ರೆಸ್ನಲ್ಲಿ 136 ಶಾಸಕರು ಒಗ್ಗಟ್ಟಾಗಿದ್ದೇವೆ
ಬಿಜೆಪಿ ಈಗಾಗಲೇ 150 ಬಾಗಿಲಾಗಿದೆ. ಅವರು ಮೊದಲು ಒಗ್ಗಟ್ಟಾಗಲಿ. ಆನಂತರ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಮಾತನಾಡಲಿ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಕುಟುಕಿದರು.
ಹಾಸನದಲ್ಲಿ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ವಿರುದ್ಧ ಹಿಂದೆ ಯತ್ನಾಳ್ ಗುಡುಗುತ್ತಿದ್ದರು. ಈಗ ಸದಾನಂದಗೌಡರ ಸರದಿ. ಅವರಲ್ಲೇ ಒಗ್ಗಟ್ಟಿಲ್ಲ. ಇನ್ನು ನಮ್ಮ ಪಕ್ಷದ ಒಗ್ಗಟ್ಟಿನ ಬಗ್ಗೆ ಅವರಿಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.ವಿಜಯೇಂದ್ರ ಯುವಕರು, ಒಳ್ಳೆಯ ಯುವಕರನ್ನು ಆಯ್ಕೆ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಅವರ ನಾಯಕತ್ವದಲ್ಲಿ ಸದೃಢವಾಗಿ ಪಕ್ಷ ಕಟ್ಟಲಿ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ 136 ಶಾಸಕರೂ ಒಗ್ಗಟ್ಟಾಗಿದ್ದೇವೆ. ಸಿಎಂ, ಡಿಸಿಎಂ, ಖರ್ಗೆ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಪಕ್ಷದ ಜೊತೆ ಇದ್ದೇವೆ. ಯಾವ ಭಿನ್ನಮತ, ಗೊಂದಲ ಇಲ್ಲ. ಹಾಸನಾಂಬೆ ಆಶೀರ್ವಾದದಿಂದ ಎಲ್ಲರೂ ಚೆನ್ನಾಗಿದ್ದೇವೆ. ಇಲ್ಲದೇ ಇರುವುದನ್ನೆಲ್ಲಾ ಬಿಜೆಪಿಯವರು ಹಬ್ಬಿಸುತ್ತಿದ್ದಾರ ಎಂದು ದೂರಿದರು.
ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ದೀಪಾವಳಿ ಮುಗಿದ ಮೇಲೆ, ಸಂಕ್ರಾಂತಿ ಒಳಗೆ ಎಷ್ಟು ಜನ ಶಾಸಕರು ನಮ್ಮ ಪಕ್ಷಕ್ಕೆ ಬರ್ತಾರೆ ಅಂತ ನೋಡುತ್ತಿರಿ ಎಂದು ಹೇಳಿದರು.ನಾವು 136 ಜನ ಒಗ್ಗಟ್ಟಾಗಿದ್ದೇವೆ, ಬಿಜೆಪಿಯವರ ಬಲೆಗೆ ನಾವು ಬೀಳುವುದಿಲ್ಲ. ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ. ನಮ್ಮ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದ ರವಿಕುಮಾರ್, ನಮ್ಮ ಪಕ್ಷಕ್ಕೆ ಬರುವಂತೆ ನಾವು ಯಾರ ಮನೆಗೂ ಹೋಗಿ ಕರೀತಿಲ್ಲ, ಅವರಾಗೇ ಅವರೇ ಬರುತ್ತೇವೆ ಎನ್ನುತ್ತಿದ್ದಾರೆ. ಅವರನ್ನು ನಾವು ಸ್ವಾಗತ ಮಾಡುತ್ತಿದ್ದೇವೆ ಎಂದರು.
ಮೊನ್ನೆಯಷ್ಟೇ ಜೆಡಿಎಸ್ನ 18 ಶಾಸಕರು ಹಾಸನದಲ್ಲಿದ್ದರು ಎಂದಿದ್ದರು. ಎಲ್ಲರೂ ಹಾಸನದಲ್ಲಿ ಇರಬೇಕಾದರೆ ಶರಣಗೌಡ ಕಂದಕೂರು ಅವರು ನನ್ನ ಜೊತೆ ಕಾಫಿ ಕುಡಿಯುತ್ತಿದ್ದರು. ಕಾಂಗ್ರೆಸ್ಗೆ ಬನ್ನಿ ಅಂತ ನಾವೇನು ಕರೆಯಲಿಲ್ಲ. ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದೂ ಹೇಳಲಿಲ್ಲ. ಅವರು ನನ್ನ ಗೆಳೆಯ, ನನ್ನ ಜೊತೆ ಕಾಫಿ ಕುಡಿಯುತ್ತಿದ್ದರು ಎಂದಷ್ಟೇ ಹೇಳಿದೆ. ರಾಜಕಾರಣದಲ್ಲಿ ಕಾಫಿ, ಡಿನ್ನರ್ಗೆ ಬಹಳ ಮಹತ್ವವಿದೆ ಎಂದು ಹೇಳಿದರು.