ಕನ್ನಡಪ್ರಭ ವಾರ್ತೆ, ಬೆಂಗಳೂರು ‘ಬಿಜೆಪಿಯ ತಂಡವೊಂದು ಸರ್ಕಾರ ಬೀಳಿಸಲು ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ಯಾವ ಶಾಸಕರನ್ನು ಯಾರು ಯಾವಾಗ ಭೇಟಿ ಮಾಡಿದರು ಎಂಬುದನ್ನು ಸಂಬಂಧಪಟ್ಟವರೇ ಹೇಳಿದ್ದಾರೆ. ಬಿಜೆಪಿಯವರು ಏನು ಆಫರ್ ಕೊಟ್ಟಿದ್ದಾರೆ ಎಂಬುದೂ ಗೊತ್ತಿದೆ. ಎಲ್ಲವನ್ನೂ ಅಧಿವೇಶನದಲ್ಲೇ ಹೇಳಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಬಾಂಬ್’ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಯಾರೊಂದಿಗೆ ಮಾತನಾಡಿದ್ದಾರೆ, ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಸಂಬಂಧಪಟ್ಟವರೇ ಎಲ್ಲಾ ಮಾಹಿತಿಯನ್ನು ನನಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಅವರು ಇನ್ನೂ ಏನೇನು ಮಾಡುತ್ತಾರೋ ಮಾಡಲಿ’ ಎಂದು ಸೂಚ್ಯವಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಹಾಗೆಲ್ಲ ಎಲ್ಲದರಲ್ಲೂ ಅನುಮಾನಪಡಲು ಆಗಲ್ಲ. ಜಗದೀಶ್ ಶೆಟ್ಟರ್ ಅವರು ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದರು. ಬಿಜೆಪಿ-ಜೆಡಿಎಸ್ ಹತಾಶೆಗೆ ಸರ್ಜರಿ ಅಗತ್ಯ: ‘ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್ಗಳೇ ಮೇಜರ್ ಆಪರೇಷನ್ ಮಾಡಬೇಕು’ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ನಿಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಅವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಈ ಹಂತದಲ್ಲಿ ನಾವೇನೂ ಮಾಡಲಾಗಲ್ಲ. ಡಾಕ್ಟರ್ಗಳೇ ಮೇಜರ್ ಆಪರೇಷನ್ ಮಾಡಬೇಕು ಎಂದರು. ಡಿಕೆಶಿ ಹೇಳೋದೇನು?
ಬಿಜೆಪಿ ತಂಡವೊಂದು ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿದೆ. ಬಿಜೆಪಿಗರು ಯಾರೊಂದಿಗೆ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಯಾರನ್ನು ಯಾವಾಗ ಭೇಟಿಯಾಗಿದ್ದಾರೆ ಎಂಬುದೂ ತಿಳಿದಿದೆ. ಯಾರ ಜತೆ ಮಾತನಾಡುತ್ತಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇದೆ. ಸಿದ್ದರಾಮಯ್ಯ, ನನಗೆ ಸಂಬಂಧಿಸಿದವರೇ ವಿವರವನ್ನು ಕೊಟ್ಟಿದ್ದಾರೆ. ಏನೇನು ಮಾಡುತ್ತಾರೋ ಮಾಡಲಿ. ಅಧಿವೇಶನದಲ್ಲೇ ಈ ಬಗ್ಗೆ ಹೇಳಿಸುವೆ.