;Resize=(412,232))
ಬೆಂಗಳೂರು : ಆರ್ಯವೈಶ್ಯ ಸಮುದಾಯದ ಅಭಿವೃದ್ಧಾಗಿ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕೆಲಸ. ಅದನ್ನು ನಾನು ಮಾಡುತ್ತೇನೆ. ಹಾಗೆಯೇ 2028ರ ಚುನಾವಣೆಯಲ್ಲೂ ನಮ್ಮ ಪಕ್ಷವನ್ನು ಬೆಂಬಲಿಸುವುದು ಹಾಗೂ ನನ್ನನ್ನು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ತರುವುದು ನಿಮ್ಮ ಸಮುದಾಯದ ಕೆಲಸ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ಆರ್ಯವೈಶ ಮಹಾಸಭಾವು ನಗರದ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಪ್ರಚಾರ ಅಭಿಯಾನ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಬನಶಂಕರಿಯಲ್ಲಿ ತಮ್ಮ ಸಂಘಕ್ಕೆ ಜಾಗ ಕೊಡುವ ಬಗ್ಗೆ ಮತ್ತು ನೆಲಮಂಗಲದಲ್ಲಿನ ಆರ್ಯವೈಶ ಮಹಾಸಭಾದ ವಿದ್ಯಾಸಂಸ್ಥೆಯ ನವೀಕರಣದ ಕುರಿತು ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಮನವಿ ಮಾಡಿದ್ದೀರಿ. ನಾನು ನಿಮ್ಮ ಕೆಲಸ ಮಾಡಿ ಕೊಡುತ್ತೇನೆ, ಮುಂದೆಯೂ ನೀವು ನನ್ನ ಜೊತೆ ಇರಬೇಕು. ನಿಲ್ಲುತ್ತೀರಿ ಎನ್ನುವ ಸಂಪೂರ್ಣ ನಂಬಿಕೆಯೂ ನನಗೆ ನಿಮ್ಮ ಸಮುದಾಯದ ಮೇಲೆ ಇದೆ ಎಂದರು.
ಬ್ರಿಟೀಷರ ವಿರುದ್ಧ ಜೀವನವಿಡೀ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ವ ಗಾಂಧೀಜಿ ಅವರು ಕೂಡ ಆರ್ಯವೈಶ್ಯ ಸಮುದಾಯದವರು. ಇಂತಹ ಸಮುದಾಯದಲ್ಲಿ ಬಂದಿರುವ ನೀವೆಲ್ಲರೂ ಹೆಮ್ಮೆಪಡಬೇಕು. ಆರ್ಯವೈಶ್ಯರು ಬಹಳ ಶ್ರಮದಿಂದ ಮುಂದೆ ಬಂದವರು. ಸಮಾಜದ ಅಭಿವೃದ್ಧಿಗೆ ಸಮುದಾಯದ ಕೊರತೆ ಬಹಳ ಮುಖ್ಯ. ಉದ್ಯೋಗ ಸೃಷ್ಠಿ ಮಾಡುವುದು ಬಹಳ ಮುಖ್ಯ. ಅದಕ್ಕೆ ನೀವು ನಿಮ್ಮ ವೃತ್ತಿಯನ್ನು ಎಂದೂ ಬಿಡಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಸುಧೀಂದ್ರ ಮಾತನಾಡಿ, ಕರ್ನಾಟಕ ಆರ್ಯವೈಶ ಮಹಾಸಭಾದಿಂದ ಡಿ.25, 26, 27, ರವರೆಗೆ 3 ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮ್ಮಿಟ್ ನಡೆಯಲಿದೆ. ಕ್ರಿಯಾಶೀಲ ಯುವ ಉದ್ದಿಮೆದಾರರುಗಳನ್ನು ಉತ್ತೇಜಿಸುವುದು ಈ ಸಮ್ಮಿಟ್ನ ಮುಖ್ಯ ಉದ್ದೇಶ. ಜಾಗತೀಕ ವ್ಯಾಪಾರ, ವಹಿವಾಟುಗಳಲ್ಲಿ ಇಂದಿನ ಯುವ ಪೀಳಿಗೆಯನ್ನು ತೊಡಗಿಸಲು ಪ್ರೇರೇಪಿಸುವುದು ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಸರ್ಕಾರದ ವಾಣಿಜ್ಯ, ಕೈಗಾರಿಕೆ ಮತ್ತು ಆಹಾರ ಸಂಸ್ಕರಣಾ ಸಚಿವ ಟಿ.ಜಿ. ಭರತ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ರಾಜಗೋಪಾಲ್ ಶ್ರೀರಾಮ್ ತಾತಯ್ಯ, ಕಲ್ವ ಸುಜಾತಾ ಗುಪ್ತಾ, ಡಾ.ಸಿಎ ಐ.ಎಸ್. ಪ್ರಸಾದ್, ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ರಾಮಪ್ರಸಾದ್ ತಾತಯ್ಯ, ಆಂಧ್ರದ ಶಾಸಕ, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಕೃಷ್ಣ, ಖಜಾಂಚಿ ಎನ್.ಎಸ್.ಶ್ರೀನಿವಾಸ ಮೂರ್ತಿ ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.