ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ ಕ್ಷೇತ್ರದಲ್ಲಿ ರೋಡ್ ಶೋ ಮಾಡಿ ಭರ್ಜರಿ ಪ್ರಚಾರ ನಡೆಸಿದರು.
ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಮೂರು ದಿನ ಬಾಕಿ ಇರುವ ಹೊತ್ತಿನಲ್ಲಿ ಅಮಿತ್ ಶಾ ಅವರು ನಗರಕ್ಕೆ ಬಂದು ತೇಜಸ್ವಿ ಸೂರ್ಯ ಪರ ತೆರೆದ ವಾಹನದಲ್ಲಿ ಮಿಂಚಿನ ರೋಡ್ ಶೋ ನಡೆಸಿದರು. ಅಮಿತ್ ಶಾ ಆಗಮನದಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಯಿತು. ರೋಡ್ ಶೋ ಮಾರ್ಗದುದ್ದಕ್ಕೂ ಜೈ ಶ್ರೀರಾಮ್, ಜೈ ಮೋದಿ, ಜೈ ಅಮಿತ್ ಶಾ ಘೋಷಣೆಗಳು ಮೊಳಗಿದವು.ಬೊಮ್ಮನಹಳ್ಳಿ ವಿಧಾನಸಭಾಕ್ಷೇತ್ರದ ವಿವೇಕಾನಂದ ಸರ್ಕಲ್ನಿಂದ ಆರಂಭವಾದ ಅಮಿತ್ ಶಾ ಅವರ ರೋಡ್ ಶೋ ಬನ್ನೇರುಘಟ್ಟದ ಐಐಎಂಬಿ ವರೆಗೆ ಸಾಗಿತು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಜಮಾಯಿಸಿದ್ದರು. ಅಮಿತ್ ಶಾ ಅವರ ಮೇಲೆ ಹೂಮಳೆಗರೆದು ಜೈಕಾರ ಕೂಗಿ ಸಂಭ್ರಮಿಸಿದರು.
ಶಾಂತಿಯ ನಾಡಿನಲ್ಲಿ ರಕ್ತಪಾತ:ಈ ವೇಳೆ ಮಾತನಾಡಿದ ಅಮಿತ್ ಶಾ, ಕರ್ನಾಟಕದಲ್ಲಿ ಲೂಟಿಕೋರ, ಓಲೈಕೆಯ, ಸ್ವಜನಪಕ್ಷಪಾತದ ಕಾಂಗ್ರೆಸ್ ಸರ್ಕಾರದಿಂದ ಜನರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿ ಸಮಾಜಘಾತುಕ ಶಕ್ತಿಗಳ, ಮತೀಯವಾದಿಗಳ ಮೆರೆದಾಟ ಹೆಚ್ಚಾಗಿದೆ. ಶಾಂತಿಗೆ ಹೆಸರಾದ ನಾಡಿನಲ್ಲಿ ಕೊಲೆ, ರಕ್ತಪಾತ, ಭಯೋತ್ಪಾದಕ ಚಟುವಟಿಕೆಗಳೂ ಹೆಚ್ಚಾಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಸುರಕ್ಷತೆಗೆ ಬೆದರಿಕೆ:ಕಾಂಗ್ರೆಸ್ ಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಎಸ್ಡಿಪಿಐ ಬೆಂಬಲವಿದೆ. ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರನ್ನು ಅದರ ಹಿಂದಿರುವವರನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಇದು ದೇಶಕ್ಕೆ ಮತ್ತು ರಾಜ್ಯದ ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಹೊಟೆಲ್ವೊಂದರಲ್ಲಿ ನಡೆದ ಬಾಂಬ್ ಸ್ಫೋಟವು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಕೃತ್ಯದ ಹಿಂದಿನ ಜಾಲವನ್ನು ಭೇದಿಸಿರುವ ಎನ್ಐಎ, ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸಿದೆ. ಬೆಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪಿಸಿದ್ದರಿಂದ ಇಂತಹ ಕೃತ್ಯಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ. ತೇಜಸ್ವಿ ಸೂರ್ಯ ಅವರು ಎನ್ಐಎ ಕಚೇರಿ ಸ್ಥಾಪನೆಗೆ ಮನವಿ ಮಾಡಿದ್ದರು ಎಂದು ಹೇಳಿದರು.
ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ:ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಅವರ ಕೈ ಬಲಪಡಿಸಿದರೆ ದೇಶ ಸುಭದ್ರವಾಗಿರುತ್ತದೆ. ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರುವ ಸರ್ಕಾರ, ದೇಶದ ಹೊರಗೂ ನುಗ್ಗಿ ಭಯೋತ್ಪಾದಕರನ್ನು ನಿರ್ಣಾಮ ಮಾಡುವ ಸಾಹಸ ತೋರಿದೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಗಳಿಂದ ಭಯೋತ್ಪಾದಕ ಗುಂಪುಗಳು ಮತ್ತು ಶತ್ರು ರಾಷ್ಟ್ರಗಳು ಹೆದರಿವೆ. ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ದೇಶದಲ್ಲಿ ನಕ್ಸಲೀಯ ಚಟುವಟಿಕೆಗಳಲ್ಲೂ ಶೇ.75 ರಷ್ಟು ಕಡಿಮೆಯಾಗಿದ್ದು, ಈ ಹಾವಳಿಯ ಸಂಪೂರ್ಣ ನಿಗ್ರಹ ದೂರವಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಸಿ.ಕೆ.ರಾಮಮೂರ್ತಿ, ಸತೀಶ್ ರೆಡ್ಡಿ ರೋಡ್ ಶೋನಲ್ಲಿ ಪಾಲ್ಗೊಂಡು ಅಮಿತ್ ಶಾಗೆ ಸಾಥ್ ನೀಡಿದರು.ಐದು ವರ್ಷದಲ್ಲಿ ಜನಪರ ಕಾರ್ಯಇದೇ ವೇಳೆ ಮಾತನಾಡಿದ ಅಭ್ಯರ್ಥಿ ತೇಜಸ್ವಿ ಸೂರ್ಯ, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪಿಸುವ ಸಂಬಂಧ ನನ್ನ ಮನವಿಯನ್ನು ಕೇಂದ್ರ ಗೃಹಸಚಿವ ಅಮಿತ್ ಸಾ ಅವರು ಪುರಸ್ಕರಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ಜನಪರ ಕಾರ್ಯಗಳು ಯಶಸ್ವಿಯಾಗಿ ಜಾರಿಗೊಂಡಿವೆ ಎಂದರು.