ಕೋಲಾರ ಕಾಂಗ್ರೆಸ್‌ನಲ್ಲಿ ಕಿತ್ತಾಟ: ವೇದಿಕೆಯಿಂದ ಜಿಲ್ಲಾಧ್ಯಕ್ಷರನ್ನು ತಳ್ಳಿದ ಕಾರ್ಯಕರ್ತರು

KannadaprabhaNewsNetwork |  
Published : Sep 29, 2024, 01:33 AM ISTUpdated : Sep 29, 2024, 04:23 AM IST
೨೮ಕೆಎಲ್‌ಆರ್-೧೭-೧ಕೋಲಾರದಲ್ಲಿ ಕಾಂಗ್ರೆಸ್ ವಿವಿಧ ಘಟಕಕಗಳ ಪದಾಧಿಕಾರಿಗಳ ಸಭೆಯಲ್ಲಿ ವೇದಿಕೆಯಿಂದ ನಗರಸಭಾ ಸದಸ್ಯ ಪ್ರಸಾದ್‌ರನ್ನು ತಳ್ಳುತ್ತಿರುವ ಚಿತ್ರ. | Kannada Prabha

ಸಾರಾಂಶ

ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಡೆದ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಗುಂಪುಗಾರಿಕೆ ತಾರಕಕ್ಕೇರಿದೆ. ಪರಸ್ಪರ ಕೈಕೈಮಿಲಾಯಿಸಿದ ಕಾರ್ಯಕರ್ತರು ಜಿಲ್ಲಾಧ್ಯಕ್ಷರನ್ನೇ ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ.

 ಕೋಲಾರ : ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಸ್ಫೋಟಗೊಂಡಿದ್ದು, ನಗರದಲ್ಲಿ ಶನಿವಾರ ನಡೆದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಬೀದಿರಂಪಾಟಕ್ಕೆ ಸಾಕ್ಷಿಯಾಯಿತು. ಪರಸ್ಪರ ಕೈಕೈಮಿಲಾಯಿಸಿದರಲ್ಲದೆ, ಪಕ್ಷದ ಜಿಲ್ಲಾಧ್ಯಕ್ಷರನ್ನೇ ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆ ನಡೆಯಿತು.ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ಸಭೆಯ ಆರಂಭದಲ್ಲೇ ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ಪ್ರಶ್ನಿಸಿದರು.

ವೇದಿಕೆಯಲ್ಲಿದ್ದ ಹೂ ಕುಂಡ ನೆಲಕ್ಕೆ

ಪಕ್ಷದ ಕಾರ್ಯಕ್ರಮವನ್ನು ನಗರದಿಂದ ಹೊರಗೆ ಆಯೋಜನೆ ಮಾಡಿದರೆ ಇಲ್ಲಿಗೆ ಕಾರ್ಯಕರ್ತರು ಹೇಗೆ ಬರಲು ಸಾಧ್ಯ, ಕನಿಷ್ಠ ಒಂದು ಬ್ಯಾನರ್ ಸಹ ಕಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ವೇದಿಕೆ ಮೇಲಿದ್ದ ಹೂ ಕುಂಡಗಳನ್ನು ಕೆಳಗೆ ತಳ್ಳಿ, ನೀರಿನ ಬಾಟಲ್ ಎಸೆದರು.

ಆಗ ಮಧ್ಯ ಪ್ರವೇಶಿಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಪ್ರಸಾದ್‌ಬಾಬು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರ ಮಾತು ಕೇಳದ ಪ್ರಸಾದ್ ಬಾಬು, ಮತ್ತೊಂದು ಗುಂಪಿನ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಇಳಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮೀಲಾಯಿಸಿಕೊಂಡರು.ರಮೇಶ್‌ಕುಮಾರ್‌ಗೆ ಆಹ್ವಾನ ಏಕಿಲ್ಲ?

ಇದಕ್ಕೆ ರಮೇಶ್ ಕುಮಾರ್ ಬೆಂಬಲಿಗರು ವೇದಿಕೆ ಮೇಲೆ ಹತ್ತಿ ಕೇಳಲು ನೀವ್ಯಾರು, ಪಕ್ಷ ಕಟ್ಟಿದವರಿಗೆ ಸಭೆಗೆ ಆಹ್ವಾನ ನೀಡಿಲ್ಲ. ಯಾಕೆ ತಾರತಮ್ಯ ಮಾಡಿದ್ದೀರ ಎಂದು ಪ್ರಶ್ನಿಸಿದರು. ಆಗ ವೇದಿಕೆಯ ಮೇಲಿದ್ದ ಕೆಲ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪಟ್ಟ ಪ್ರಯತ್ನ ವಿಫಲವಾಯಿತು.

ಜಿಲ್ಲಾಧ್ಯಕ್ಷರನ್ನೇ ಕೆಳಗೆ ತಳ್ಳಿದರು

ರಮೇಶ್ ಕುಮಾರ್ ಬೆಂಬಲಿಗರು ವೇದಿಕೆ ಮೇಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಕೆಳಗೆ ತಳ್ಳಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಇದ್ದಕ್ಕಿದ್ದಂತೆ ಲಕ್ಷ್ಮೀನಾರಾಯಣ, ಪ್ರಸಾದ್ ಬಾಬು ಅವರನ್ನು ಬಲವಂತವಾಗಿ ಕೆಳಗೆ ತಳ್ಳಿದರು. ಆಗ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮದಿಂದ ಸ್ವಲ್ಪ ಹೊತ್ತು ಹೊರನಡೆದರು. ಪ್ರಸಾದ್ ಬಾಬು ಎದುರು ಗುಂಪಿನವರ ಮೇಲೆ ಪ್ರತಿರೋಧ ವ್ಯಕ್ತಪಡಿಸಿದರಾದರೂ ಅವರನ್ನೂ ವೇದಿಕೆಯಿಂದ ಕೆಳ ತಳ್ಳಲಾಯಿತು.

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೋಲಾರದಲ್ಲಿರುವ ವಿವಿಧ ಘಟಕಗಳ ಪದಾಧಿಕಾರಿಗಳಿಗೂ ಸಭೆಯ ಮಾಹಿತಿ ನೀಡಿಲ್ಲ. ಇಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಕೆಲವರು ವೇದಿಕೆಗೆ ಹತ್ತಿ ಪ್ರತಿಭಟನೆ ನಡೆಸಿದರು. ಆಗ ಎರಡು ಗುಂಪುಗಳ ಕಾರ್ಯಕರ್ತರ ನಡುವೆ ನುಕ್ಕುನುಗ್ಗಲಾಯಿತು. ಇದು ವೇದಿಕೆಯ ಮೇಲಿದ್ದ ಮುಖಂಡರನ್ನು ಮುಜುಗರಕ್ಕೀಡು ಮಾಡಿತು.ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯ ಅನಿಲ್ ಕುಮಾರ್ ಆಗಮಿಸಿದ್ದು, ಅವರ ಸಮ್ಮುಖದಲ್ಲೇ ಘರ್ಷಣೆ ನಡೆಯಿತು. ನಸೀರ್‌ಅಹ್ಮದ್ ಅವರು ಎರಡೂ ಗುಂಪಿನ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ನಂತರ ಸಭೆ ಮುಂದುವರೆಯಿತು.

PREV

Recommended Stories

ಸವದತ್ತಿ ಕ್ಷೇತ್ರ ₹230 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಎಚ್‌ಕೆಪಿ
2028ಕ್ಕೂ ಗೆಲ್ತೀವಿ, ನಾನು ಸಿಎಂ ಆಗಲ್ಲ: ಸಿದ್ದರಾಮಯ್ಯ!