;Resize=(412,232))
ಬೆಂಗಳೂರು : ನಿರ್ಗಮಿಸುವ ಸಾಧ್ಯತೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ 9ಕ್ಕೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಿಗೆ ಉಪಾಹಾರ ಕೂಟ ಹಮ್ಮಿಕೊಂಡಿದ್ದಾರೆ. ಬಳಿಕ ಮಧ್ಯಾಹ್ನದ ನಂತರ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಣತಿಯಂತೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.
ಗುರುವಾರ ಮಧ್ಯಾಹ್ನದ ನಂತರ ರಾಜ್ಯಪಾಲರ ಭೇಟಿಗೆ ಈಗಾಗಲೇ ಸಮಾಯಾವಕಾಶ ಕೋರಿದ್ದಾರೆ. ಅಲ್ಲದೆ, ರಾಜೀನಾಮೆ ಪತ್ರವನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ. ಹೀಗಾಗಿ ಅವರ ರಾಜೀನಾಮೆ ಬಹುತೇಕ ಖಚಿತ ಎನ್ನಲಾಗುತ್ತಿದೆ.ಇದಕ್ಕೂ ಮುನ್ನ ಅವರು ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಉಪಹಾರ ಕೂಟ ನಡೆಸಲಿದ್ದಾರೆ. ಈ ಬಗ್ಗೆ ಎಲ್ಲ ಸಚಿವರಿಗೂ ಸಂದೇಶ ನೀಡಲಾಗಿದ್ದು, ಗುರುವಾರ ಬೆಳಗ್ಗೆ 9ಕ್ಕೆ ಮನೆಗೆ ಬರಲು ಆಹ್ವಾನಿಸಿದ್ದಾರೆ. ಈ ಕೂಟದಲ್ಲಿ ಭಾಗಿ ಆಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಬುಧವಾರ ತಡರಾತ್ರಿ ನಗರಕ್ಕೆ ಆಗಮಿಸಿದ್ದಾರೆ.
ದೆಹಲಿ ಸರಣಿ ಸಭೆ ಹಾಗೂ ರಾಹುಲ್ ಗಾಂಧಿ ಅವರ ಆಣತಿ ಪಡೆದು ನಗರಕ್ಕೆ ಆಗಮಿಸಿದ ನಂತರ ದೆಹಲಿ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಮೌನವಾಗಿದ್ದಾರೆ. ಸಭೆಯಲ್ಲಿ ವರಿಷ್ಠರ ಜತೆ ಏನು ಚರ್ಚೆ ನಡೆಯಿತು ಎಂದುಸಂಪುಟದ ಸದಸ್ಯರಿಗೆ ಸ್ಪಷ್ಟವಾಗಿ ವಿವರಿಸುವ ಸಾಧ್ಯತೆಯಿದೆ.