ಮುನಿದ ಶಾಸಕರಿಗೆ ಇಂದು ಸಿಎಂ ಸಿದ್ದರಾಮಯ್ಯ ಮದ್ದು

KannadaprabhaNewsNetwork |  
Published : Jul 29, 2025, 01:00 AM ISTUpdated : Jul 29, 2025, 02:48 AM IST
Karnataka CM Siddaramaiah (Photo/ANI)

ಸಾರಾಂಶ

  ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಚಿವರು ಹಾಗೂ ಪಕ್ಷದ ಶಾಸಕರೊಂದಿಗೆ ಸರಣಿ ಸಭೆ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಖುದ್ದು ಜಿಲ್ಲಾವಾರು ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.

 ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಚಿವರು ಹಾಗೂ ಪಕ್ಷದ ಶಾಸಕರೊಂದಿಗೆ ಸರಣಿ ಸಭೆ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರದಿಂದ ನಾಲ್ಕು ದಿನಗಳ ಕಾಲ (ಜು.29 ರಿಂದ ಆ.1ರವರೆಗೆ) ಖುದ್ದು ಜಿಲ್ಲಾವಾರು ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಇತರೆ ಶಾಸಕರೊಂದಿಗೆ ಸಭೆ ಶುರು ಮಾಡಲಿದ್ದಾರೆ. ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಸಂಜೆ 5 ಗಂಟೆಗೆ ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಪಕ್ಷದ ಶಾಸಕರು, ಸಂಜೆ 5.30ಕ್ಕೆ ತುಮಕೂರು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಪಕ್ಷದ ಶಾಸಕರು, ಸಂಜೆ 6.45 ಗಂಟೆಯಿಂದ ರಾತ್ರಿ 7.45 ರವರೆಗೆ ಕೊಡಗು ಉಸ್ತುವಾರಿ ಎನ್‌.ಎಸ್‌.ಬೋಸುರಾಜು, ಹಾಸನ ಉಸ್ತುವಾರಿ ಕೆ.ಎನ್‌.ರಾಜಣ್ಣ, ದಕ್ಷಿಣ ಕನ್ನಡ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಆಯಾ ಜಿಲ್ಲೆಗಳ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಕುಂದು ಕೊರತೆ ಆಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಲಾ 50 ಕೋಟಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ತಲಾ 50 ಕೋಟಿ ರು. ಅನುದಾನ ಘೋಷಣೆ ಮಾಡಿ ಈಗಾಗಲೇ ಶಾಸಕರಿಗೆ ಖುದ್ದು ಪತ್ರ ಬರೆದಿದ್ದಾರೆ. ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯ ಕಾಮಗಾರಿಗಳಿಗೆ 37.50 ಕೋಟಿ ರು. ಹಾಗೂ ಶಾಸಕರ ವಿವೇಚನಾಧಿಕಾರದಡಿ 12.50 ಕೋಟಿ ರು. ಬಳಕೆಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಮಂಗಳವಾರದ ಸಭೆಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ, ಈ ವೇಳೆ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಬೇಡಿಕೆ ಸ್ವೀಕರಿಸಿ ಅನುದಾನ ಮಂಜೂರು ಮಾಡಲಿದ್ದಾರೆ. ಜತೆಗೆ ಸಚಿವರೊಂದಿಗಿನ ಸಮಸ್ಯೆಗಳು, ಸರ್ಕಾರ ಹಾಗೂ ಅಧಿಕಾರಿಗಳ ಹಂತದಲ್ಲಿರುವ ಸಮಸ್ಯೆಗಳ ಬಗ್ಗೆಯೂ ಅಹವಾಲು ಆಲಿಸಿ ಪರಿಹರಿಸಲು ಯತ್ನಿಸಲಿದ್ದಾರೆ. ತನ್ಮೂಲಕ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಅನುದಾನ ಕೊರತೆ, ಉಸ್ತುವಾರಿ ಸಚಿವರ ಬಗ್ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಬಳಿ ದೂರು ಸಲ್ಲಿಸಿದ್ದ ಕಾಂಗ್ರೆಸ್‌ನ ಹಲವು ಶಾಸಕರು

ಈ ಹಿನ್ನೆಲೆಯಲ್ಲಿ ದೂರಿನ ಕುರಿತ ಸಮಗ್ರ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮಕ್ಕೆ ಸಿಎಂ, ಡಿಸಿಎಂಗೆ ನೀಡಿದ್ದ ರಣದೀಪ್‌ ಸರ್ಜೇವಾಲಾ

ಅದರನ್ವಯ 4 ದಿನ ಜಿಲ್ಲಾವಾರು ಉಸ್ತುವಾರಿ ಸಚಿವರು, ಶಾಸಕರ ಸಭೆ ಸಿಎಂ ಸಭೆ. ಅವರ ಅಹವಾಲು ಆಲಿಸಿ ಸಮಸ್ಯೆ ಪರಿಹಾರದ ಯತ್ನ

PREV
Read more Articles on

Recommended Stories

ಯಶವಂತಪುರ ಟಿಕೆಟ್‌: ಬಿಎಸ್‌ವೈ ವಿರುದ್ಧ ಜವರಾಯಿಗೌಡ ಆಕ್ರೋಶ
ಖರ್ಗೆ ರಾಜಕೀಯ ಭವಿಷ್ಯ ಅವರೇ ನಿರ್ಧರಿಸ್ತಾರೆ : ಸಚಿವ ಪ್ರಿಯಾಂಕ್‌