ತುಮಕೂರು : ಸಮಾಜದಲ್ಲಿ ಅಸಮಾನತೆಗೆ ನಾವು ಕಾರಣರಲ್ಲ. ಬಹುತ್ವ ಸಮಾಜವನ್ನು ದೂರ ಇಟ್ಟಿರುವುದು, ಚಾತುವರ್ಣ ವ್ಯವಸ್ಥೆಯೂ ಸಹ ಅಸಮಾನತೆಗೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟನೆ ಹಾಗೂ ‘ಸಹಕಾರ ಸಾರ್ವಭೌಮ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ದ್ವೇಷ, ಸೇಡಿನಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಎಲ್ಲರಲ್ಲೂ ಮನುಷ್ಯತ್ವ ಇರಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ, ಸಾಮಾಜಿಕ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯ ಪಿಡುಗನ್ನು ತೊಲಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ರಾಜಕಾರಣಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮನುಷ್ಯನಿಗೆ ಜಾತಿ ಮುಖ್ಯವಲ್ಲ, ಸ್ನೇಹ ಮುಖ್ಯ. ಮನುಷ್ಯ ಸಂಬಂಧ ಮುಖ್ಯ. ಇದನ್ನು ನಾವೆಲ್ಲಾ ಅರಿತು ಬದುಕು ನಡೆಸಬೇಕು. ಹೀಗಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ರಾಜಕಾರಣದಲ್ಲಿ ಇರುವವರು ಬದ್ಧತೆ, ನಂಬಿಕೆಯಿಂದ ನಡೆದುಕೊಳ್ಳಬೇಕು. ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಹುಟ್ಟು ಸಾವಿನ ನಡುವೆ ಸಾರ್ಥಕ ಬದುಕು ನಡೆಸಬೇಕು. ಈ ನಿಟ್ಟಿನಲ್ಲಿ ಸಹಕಾರ ಸಚಿವ ರಾಜಣ್ಣ ಅವರು ಬದುಕನ್ನು ಸಾರ್ಥಕತೆ ಮಾಡಿಕೊಂಡಿದ್ದಾರೆ ಎಂದರು.
ರಾಜಣ್ಣ ನೇರ ನಡೆ-ನುಡಿ, ನಿಷ್ಠೂರವಾದಿ: ನೇರ ನಡೆ, ನಿಷ್ಠೂರವಾದಿತನ ಸ್ವಾಭಿಮಾನದ ಸಂಕೇತ. ಸ್ವಾಭಿಮಾನ ಇಲ್ಲದೇ ಹೋದರೆ ದಾಸ್ಯ ಮನೆ ಮಾಡುತ್ತದೆ. ಈ ದಾಸ್ಯವನ್ನು ಮನೆ ಮಾಡಲು ಅವಕಾಶ ನೀಡದೆ ಕಿತ್ತೊಗೆಯಬೇಕು ಎಂದು ಅವರು ಕರೆಯಿತ್ತರು. ರಾಜಕಾರಣದಲ್ಲಿ ಹಲವು ಜನ ಬರುತ್ತಾರೆ, ಹೋಗುತ್ತಾರೆ. ಅವರ ಕಷ್ಟದಲ್ಲಿ ಭಾಗಿಯಾಗಬೇಕು ಎಂಬ ಕಾಳಜಿ ರಾಜಣ್ಣನವರಿಗಿದೆ. ಇದು ಅವರ ದೊಡ್ಡ ಗುಣ. ಈ ಗುಣ ಎಲ್ಲ ರಾಜಕಾರಣಿಗಳಲ್ಲೂ ಇರಬೇಕು ಎಂದು ಹೇಳಿದರು.
ಸಹಕಾರಿ ಕ್ಷೇತ್ರ ಎಂದರೆ ಜನ ಸೇವೆ ಎಂದು ತಿಳಿದುಕೊಂಡಿರುವ ರಾಜಕಾರಣಿ ರಾಜಣ್ಣ. ಇವರಿಗೆ ಬಡವರ ಬಗ್ಗೆ ಅಪಾರ ಕಾಳಜಿ, ಅನುಕಂಪ ಇದೆ. ಇವರ ಈ ಗುಣ ನನಗೆ ಬಹಳ ಇಷ್ಟವಾಗುತ್ತದೆ. ಹಾಗಾಗಿಯೇ ನಾನು ಅವರ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸ ಹೊಂದಿದ್ದೇನೆ ಎಂದರು.
ರಾಜಣ್ಣ ಅವರು ಮೀಸಲು ಕ್ಷೇತ್ರವನ್ನು ಬಿಟ್ಟು ಮಧುಗಿರಿ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸುತ್ತಿದ್ದಾರೆ. ಇದು ಅವರಿಗೆ ಎಲ್ಲ ವರ್ಗದ ಜನರ ಮೇಲೆ ಇರುವ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆವು. ಈ ಅನ್ನಭಾಗ್ಯ ಎಂದು ಹೆಸರು ಇಟ್ಟವರು ಸಾಹಿತಿ ಬರಗೂರು ರಾಮಚಂದ್ರನವರು ಎಂದು ಹೇಳಿದ ಅವರು, ಸಚಿವ ರಾಜಣ್ಣನವರು ನೂರು ವರ್ಷಗಳಿಗೂ ಹೆಚ್ಚು ಕಾಲ ಬಾಳಲಿ, ಬಡವರು, ದೀನ ದಲಿತರ ಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಹಕಾರಿ ರಂಗದಲ್ಲಿ ಕೆ.ಎನ್.ರಾಜಣ್ಣನವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳೆದ 40 ವರ್ಷದಲ್ಲಿ ಸಹಕಾರಿ ರಂಗ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಮತ್ತು ಜಿಲ್ಲೆಗೆ ಇನ್ನು ದೀರ್ಘಾವಧಿ ಸೇವೆ ಸಲ್ಲಿಸಲು ಇವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ಹೇಳಿದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೆ.ಎನ್. ರಾಜಣ್ಣ ಅವರು ಒಬ್ಬ ಅತ್ಯುತ್ತಮ ರಾಜಕಾರಣಿ. ರೈತರು, ಬಡವರ ಪರ ಹೋರಾಟಗಾರ. ಸದಾ ಬಡವರ ಸಂಕಷ್ಟಕ್ಕೆ ಮಿಡಿಯುವ ನಾಯಕ ಎಂದು ಬಣ್ಣಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜಕಾರಣದಲ್ಲಿ ಸಹಜವಾಗಿ ವಯಸ್ಸಾಗುತ್ತಿದ್ದಂತೆ ಜನಪ್ರಿಯತೆ ಕಡಿಮೆಯಾಗುತ್ತದೆ. ಆದರೆ ರಾಜಣ್ಣನವರ ವಿಚಾರದಲ್ಲಿ ಇದು ಸುಳ್ಳಾಗಿದ್ದು, ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದರು.
ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ನಂಬಿಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರು ರಾಜಣ್ಣ. ನೇರ, ನಿಷ್ಠೂರತೆ ಅವರ ಸ್ವಭಾವ. ಸಹಕಾರ ಕ್ಷೇತ್ರ ಹಾಗೂ ರಾಜಕಾರಣದಲ್ಲಿ ಅವರು ಅಪಾರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ.ಎನ್. ರಾಜಣ್ಣನವರ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.
ತುಮಕೂರಿಗೆ ಮೆಟ್ರೋ, ಇಂಟರ್ಸಿಟಿ ರೈಲು: ಡಿಕೆಶಿ
ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟ್ಲೈಟ್ ಟೌನ್ ಜತೆಗೆ ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದಲ್ಲಿ ಮಾತನಾಡಿದರು. ಬೆಂಗಳೂರಿನಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ ರೂಪಿಸುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ ಎಂದರು.
ನೇರ ನುಡಿ ಸ್ವಾಭಿಮಾನದ ನಾಯಕ ರಾಜಣ್ಣ ಅವರದ್ದು ಇದು ಐತಿಹಾಸಿಕ ಜನ್ಮದಿನ ಕಾರ್ಯಕ್ರಮ. ನೇರ ನುಡಿ ಸ್ವಾಭಿಮಾನದ ನಾಯಕ ರೈತಾಪಿ ಜನರ ಬದುಕು ಸುಧಾರಣೆಯ ಗುರಿ ಹೊಂದಿರುವ, ಆತ್ಮೀಯ ಸ್ನೇಹಿತನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ರಾಜಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ರೈತನಿಗೆ ಲಂಚ, ಬಡ್ತಿ, ನಿವೃತ್ತಿ, ಪಿಂಚಣಿ ಇಲ್ಲ. ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ನೀಡುತ್ತಿದ್ದೇವೆ. ರಾಜಣ್ಣ ಅವರು ಬಹಳ ಆಸಕ್ತಿಯಿಂದ ಈ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾರೆ. ನಾನು ಕೂಡ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದಾಗ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಹಾಗೂ ಷಡಕ್ಷರಿ ಅವರನ್ನು ಎಸ್.ಎಲ್.ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದರು.
ತುಳಿತಕ್ಕೆ ಒಳಗಾದ ಸಮಾಜದ ಧೀಮಂತ ನಾಯಕನಿಗೆ ಶುಭ ಹಾರೈಸಲು ನಾವು ಇಲ್ಲಿ ಸೇರಿದ್ದೇವೆ. ನಾನು ಹಾಗೂ ರಾಜಣ್ಣ ಅವರು ಜಪಾನ್ ಹಾಗೂ ದಕ್ಷಿಣ ಕೊರಿಯಾ ಇತರೆ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಹಕಾರ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಆ ಮೂಲಕ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದೆವು. ಈಗ ನಾವು ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.
ಕೊಟ್ಟ ಮಾತಿನಂತೆ ನಡೆದಿದ್ದೇವೆ:
ರೈತರ ಬದುಕು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದು ಜನರ ಆಶೋತ್ತರ ಈಡೇರಿಸಿದ್ದೇವೆ. 2027ರ ಒಳಗಾಗಿ ಎತ್ತಿನ ಹೊಳೆ ನೀರನ್ನು ತುಮಕೂರು ಮಾರ್ಗವಾಗಿ ಹರಿಸಲು ತೀರ್ಮಾನಿದ್ದೇವೆ ಎಂದ ಅವರು, ಕುಡಿಯುವ ನೀರು ಪೂರೈಸಿದ ನಂತರ ಕೆರೆ ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಬಡವರಿ ಏಳಿಗೆಗಾಗಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಬೇಕು: ರಾಜಣ್ಣ
ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಬಡವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಹೀಗಾಗಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಾಟಾಗಿದ್ದ ತಮ್ಮ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಾನು ರಾಜಕೀಯದಿಂದ ದೂರ ಉಳಿಯುವ ಮನಸ್ಸು ಮಾಡಿದ್ದೇನೆ. ಆದರೆ ಬಡವರ ಏಳಿಗೆಗಾಗಿ ಸದಾ ಶ್ರಮಿಸುತ್ತೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಇರಬೇಕು. ಅಧಿಕಾರ ಇದ್ದಾಗ ಮಾತ್ರವೇ ಬಡವರಿಗೆ ಅನುಕೂಲ ಮಾಡಲು ಸಾಧ್ಯ. ಬಡವರ ಸೇವೆಗಾಗಿ ಮತ್ತು ಅವರ ಏಳಿಗೆಗಾಗಿ ನೀವು ಅಧಿಕಾರದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.
ಮಧುಗಿರಿ ಕ್ಷೇತ್ರ ಮಿಡಿಗೇಶಿಯಲ್ಲಿ ಈ ಹಿಂದೆ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಶೂ ಭಾಗ್ಯಕ್ಕಾಗಿ ಮನವಿ ಮಾಡಿದ್ದೆ. ಅದನ್ನು ಜಾರಿಗೆ ತಂದು ಬಡ ಮಕ್ಕಳಿಗ ಅನುಕೂಲ ಕಲ್ಪಿಸಿದರು. ಅನ್ನಭಾಗ್ಯದಂತಹ ಕ್ರಾಂತಿಕಾರಕ ಯೋಜನೆ ರೂಪಿಸಿದರು. ಈ ಯೋಜನೆ ಯಾವುದೇ ಒಂದು ಸಮುದಾಯಕ್ಕೆ ಮತ್ತು ವರ್ಗಕ್ಕೆ ಸೀಮಿತವಲ್ಲ. ಎಲ್ಲ ಬಡವರಿಗೂ ಈ ಯೋಜನೆ ಅನುಕೂಲವಾಗಿದೆ. ಇಷ್ಟಾದರೂ ಟೀಕೆಗಳು ನಿಂತಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದರು.
ಮಧ್ಯಮ ಕುಟುಂಬದಿಂದ ಬಂದ ನಾನು ಬಾಲ್ಯದಿಂದಲೂ ಬಡವರ ಪರ ಹೋರಾಡುತ್ತಾ ಬಂದಿದ್ದೇನೆ. ಬಡವರಿಗೆ ದೌರ್ಜನ್ಯ ಆದರೆ ನಾನು ಸಹಿಸುವುದಿಲ್ಲ. 50 ವರ್ಷಗಳಿಂದಲೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಲೇ ನಾನೀಗ ಸಚಿವನಾಗಿ ನಿಂತಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿದರು.
ಪತ್ರಿಕೆಯವರು ಕೇಳಿದ್ದಕ್ಕೆ ತುಮಕೂರನ್ನು ಬೆಂ.ಉತ್ತರ ಮಾಡ್ತೀನಿ ಅಂದಿದ್ದೆ: ಪರಂ
ತುಮಕೂರು ಹೆಸರನ್ನು ಬದಲಾಯಿಸುತ್ತೇನೆ ಎಂದು ನಾನು ಹೇಳಿಲ್ಲ. ಪತ್ರಿಕೆಯವರು ಕೇಳಿದ್ದರು. ಅದಕ್ಕೆ ಬೆಂಗಳೂರು ಉತ್ತರ ಮಾಡುತ್ತೇನೆ ಅಂತಷ್ಟೇ ಹೇಳಿದ್ದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸಚಿವ ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತಿ ಬರಗೂರು ರಾಮಚಂದ್ರ ಅವರು ನಮ್ಮ ಅಚ್ಚುಮೆಚ್ಚಿನ ಮೇಷ್ಟ್ರು. ತುಮಕೂರು ಇತಿಹಾಸ ಹಾಗೂ ಅಸ್ಮಿತೆ ಬಗ್ಗೆ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ತುಮಕೂರು ಹೆಸರು ಬದಲಾಯಿಸುವುದಿಲ್ಲ. ಇದನ್ನು ಬರಗೂರು ಅವರಿಗೆ ತಿಳಿಸಲು ಬಯಸುತ್ತೇನೆ ಎಂದರು.