ಕಾಂಗ್ರೆಸ್ ಸರ್ಕಾರ ಬೀಳಿಸೋದು ಖಚಿತ: ಈಶ್ವರಪ್ಪಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆಂದು ಭವಿಷ್ಯ । ಹಿಂದೂಗಳ ವಿರುದ್ಧ ಬೇಕಿದ್ದೆಲ್ಲ ಮಾಡ್ತಿದ್ದಾರೆ
ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆಂದು ಭವಿಷ್ಯ । ಹಿಂದೂಗಳ ವಿರುದ್ಧ ಬೇಕಿದ್ದೆಲ್ಲ ಮಾಡ್ತಿದ್ದಾರೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಬೇಡವಾಗಿದೆ. ಕಾಂಗ್ರೆಸ್ ಸರ್ಕಾರ ಬೇಡ ಎಂದು ಅವರ ಶಾಸಕರೆ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಈ ಸರ್ಕಾರವನ್ನು ಬೀಳಿಸುವುದು ಖಚಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು. ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾಕೆ ಕಾಂಗ್ರೆಸ್ ಸರ್ಕಾರ ಬೀಳಿಸಬಾರದು. ಬಿಜೆಪಿ ಸರ್ಕಾರ ಯಾಕೆ ಬರಬಾರದು. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋದರೆ ಒಬ್ಬ ಶಾಸಕ ಇಲ್ಲ. ಜನರಿಗೆ ಮಾತ್ರವಲ್ಲ ಕಾಂಗ್ರೆಸ್ ಶಾಸಕರಿಗೂ ಈ ಸರ್ಕಾರ ಬೇಡವಾಗಿದೆ. ಹೀಗಾಗಿ ಅವರೆಲ್ಲರೂ ಈ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ನಿಜ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಯಾವ ಇಲಾಖೆಯ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರವನ್ನು ಬೀಳುವುದೇ ಸರಿ ಎಂದು ಕಿಡಿಕಾರಿದರು. ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ: ಡಿಕೆಶಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಮೆರವಣಿಗೆಯಲ್ಲಿ ಬಂದಿದ್ದು ನೋಡಿ ಕೇಸ್ ಖುಲಾಸೆಯಾಗಿದೆ ಅಂದುಕೊಂಡಿದ್ದೆ. ಇಷ್ಟು ಭಂಡತನ ನಾನು ನೋಡಿರಲಿಲ್ಲ. ಡಿ.ಕೆ.ಶಿವಕುಮಾರ್ ಅಕ್ರಮ ದಾಖಲೆಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಎಂಬುದು ದಾಳಿ ನಡೆದಾಗ ಬೆಳಕಿಗೆ ಬಂತು. ಅಮೇಲೆ ಜೈಲಿಗೆ ಹೋಗಿದ್ದರು. ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದರೆ ಯಾಕೆ ಸಿಟ್ಟು ಬರುತ್ತದೆ. ಇವತ್ತಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು. ಡಿಕೆಶಿ ಎಷ್ಟರ ಮಟ್ಟಿಗೆ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಇದೇ ಕೇಸ್ ವಿಚಾರಕ್ಕೆ ಅವರು ಜೈಲಲ್ಲಿ ಇದ್ದರು. ಈಗ ಬೇಲ್ ಮೇಲೆ ಹೊರಗಿದ್ದಾರೆ. ಇವರಂತೆ ಕೆಲವರೂ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಬಂದಾಗ ವಿರೋಚಿತವಾಗಿ ಮೆರವಣಿಗೆ ನಡೆಸಿದ್ದು ನಾಚಿಕೆಗೇಡಿನ ಸಂಗತಿ. ಸರ್ಕಾರ ಬಂದು ನಾಲ್ಕೈದು ತಿಂಗಳಲ್ಲಿ ನೂರು ಕೋಟಿ ಹಣ ಸಿಕ್ಕಿದೆ. ಇದರ ಬಗ್ಗೆ ತನಿಕಖೆ ಮಾಡಿ ಎಂದು ವಿರೋಧ ಪಕ್ಷದವರು ಒತ್ತಾಯ ಮಾಡೋದು ತಪ್ಪಾ? ಇದರಲ್ಲಿ ಸಿಎಂ, ಡಿಸಿಎಂ ಕಳ್ಳರು ಎಂದು ನಾವು ಹೇಳಿಲ್ಲ. ನಮಗಿದ್ದ ಅನುಮಾನವನ್ನು ನಾವು ಹೇಳಿದ್ದೇವೆ. ಇದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಸರ್ಕಾರ ಹೇಳಬೇಕಿತ್ತು. ಆಗ ನಾವು ಇದರಲ್ಲಿ ಇವರ ಪಾತ್ರ ಇಲ್ಲ ಎಂದು ನಂಬುತ್ತಿದ್ದೇವು ಎಂದು ವಾಗ್ದಾಳಿ ನಡೆಸಿದರು. ಪರ್ಯಾಯವಾಗಿ ಹಿಂದೂ ಆಚರಣೆಗಳಿಗೆ ಕಡಿವಾಣ: ಪಾರಂಪರಿಕ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ಅರಿಶಿಣ-ಕುಂಕುಮ ಬಳಸಬಾರದು ಎಂದ ರಾಜ್ಯ ಸರ್ಕಾರ ಸುತ್ತೋಲೆ ವಿಚಾರಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ರಾಸಾಯನಿಕ ಪದಾರ್ಥ ಇರುವ ಅರಿಶಿಣ -ಕುಂಕುಮ ಬಳಸಬಾರದು ಎಂದು ಹೇಳಿದೆ. ರಾಜ್ಯ ಸರ್ಕಾರ ಬಹಳ ಜಾಣತನದಿಂದ ಸುತ್ತೋಲೆ ಹೊರಡಿಸಿದ್ದು, ಹಿಂದೂಗಳ ವಿರುದ್ಧ ಏನೇನು ಮಾಡಬೇಕೋ ಅವೆಲ್ಲವೂ ಮಾಡುತ್ತಿದೆ ಎಂದು ಕುಟುಕಿದರು. ಆಯನೂರುರಂಥ ತಲೆಗೆಟ್ಟ ವ್ಯಕ್ತಿ ಪ್ರಶ್ನೆಗೆ ಉತ್ತರಿಸಲ್ಲ: ಇನ್ನು ರೇಣುಕಾಚಾರ್ಯ ವಿರುದ್ಧ ಪಕ್ಷ ನೋಟಿಸ್ ಕೊಟ್ಟಿದೆ. ನೋಟಿಸ್ ಕೊಟ್ಟವರ ಬಗ್ಗೆ ನಾನು ಮಾತನಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್.ಚನ್ನಬಸಪ್ಪ, ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು. - - - ಬಾಕ್ಸ್.... ವಿವಿಧ ಯೋಜನೆಯಡಿ ಬಡವರಿಗೆ ಸೂರು ಕೊಡಬೇಕು. ಬಡವರ ಆಶ್ರಯ ಮನೆಗಳಿಗೆ ಅನೇಕರು ತಾಳಿ, ಪಾತ್ರೆ ಮಾರಿ ಹಣ ಕಟ್ಟಿದ್ದಾರೆ. ಕೆಲವೆಡೆ ಕೆಲಸ ಆರಂಭವಾದರೆ, ಇನ್ನು ಕೆಲವಡೆ ಆರಂಭವಾಗಿಲ್ಲ. ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಬಿಜೆಪಿ ಸರ್ಕಾರ ಇದ್ದಾಗ ಹಲವರಿಗೆ ಮನೆ ಕಟ್ಟಿಸಿಕೊಟ್ಟು, ಬೀಗವೂ ಕೊಟ್ಟಿದ್ದೆವು. ಇನ್ನು ಕೆಲವರಿಗೆ ಕೊಡಬೇಕು ಎನ್ನುವಷ್ಟರಲ್ಲಿ ಚುನಾವಣೆ ಬಂತು, ಆಮೇಲೆ ಸರ್ಕಾರ ಬದಲಾಯಿತು. ಆದರೆ, ಈಗಿನ ಸರ್ಕಾರ ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಮನೆಗಳಿಗೆ ಈಗಾಗಲೇ ಜನ ಹಣ ಕಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದಲೂ ಹಣ ಬಂದಿದೆ. ಈಗಿನ ಸರ್ಕಾರ ಇದರ ಬಗ್ಗೆ ಆಸಕ್ತಿ ವಹಿಸಿ ಇರುವ ಹಣದಲ್ಲಿ ಕಾಮಗಾರಿ ಆರಂಭ ಮಾಡಬೇಕು. ಮುಂದೆ ಅವರಿಗೆ ಬ್ಯಾಂಕ್ ಲೋನ್ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. - - - -
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.