ಸಿದ್ದರಾಮಯ್ಯಗೆ ಸಂವಿಧಾನ, ಕಾನೂನು ಭಯವಿಲ್ಲ- ಅವರನ್ನು ನಾವು ಏನೆಂದು ಕರೆಯಬೇಕು? : ಸಿ.ಟಿ.ರವಿ

KannadaprabhaNewsNetwork |  
Published : Oct 06, 2024, 01:25 AM ISTUpdated : Oct 06, 2024, 04:28 AM IST
ct ravi

ಸಾರಾಂಶ

ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಕಾನೂನು ಬಗ್ಗೆ ಭಯವಿಲ್ಲ. ನೈತಿಕ ಪ್ರಜ್ಞೆಯೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

 ಚಿಕ್ಕಮಗಳೂರು : ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರಲ್ಲ ಎಂದು ಹೇಳುತ್ತಿದ್ದರಂತೆ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಯಾರಿಗೂ ಹೆದರಲ್ಲ. ಬಿಜೆಪಿ-ಜೆಡಿಎಸ್‌ಗೂ ಹೆದರಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ನಾವು ಏನೆಂದು ಕರೆಯಬೇಕು? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಕಾನೂನು ಬಗ್ಗೆ ಭಯವಿಲ್ಲ. ನೈತಿಕ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಆದರೆ ಸಿದ್ದರಾಮಯ್ಯ ಜನರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದರು.

ರಾಯಚೂರಿನಲ್ಲಿ ನಡೆದ ಸಿದ್ದರಾಮಯ್ಯ ಅವರ ಸ್ವಾಭಿಮಾನ ಸಮಾವೇಶ ಕುರಿತು ಮಾತನಾಡಿದ ಅವರು ಅಧಿಕಾರ, ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಅದು ಪ್ರಕೃತಿ ಧರ್ಮ ಎಂದು ಹೇಳಿದರು.

ಮತ್ತೆ ಮುನ್ನೆಲೆಗೆ ಬಂದ ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರೆದರೆ ಸಮಸ್ಯೆ ಇಲ್ಲ. ಆದರೆ ಸಮಾಜ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯಕ್ಕಾಗಿ ಜಾತಿಗಣತಿ ಮಾಡುವುದಾದರೆ ಯಾರೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಎಚ್.ಎಂ.ರೇವಣ್ಣ ಮೀಸಲಾತಿಗೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರೋಧವಿದೆ ಎಂದು ಆರೋಪಿಸಿದ್ದಾರೆ. ಆದರೆ ಮೀಸಲಾತಿಗೆ ವಿರೋಧ ಮಾಡಿದ್ದು ಆರ್‌ಎಸ್‌ಎಸ್ ಅಥವಾ ಬಿಜೆಪಿ ಅಲ್ಲ ಬದಲಾಗಿ ನೆಹರು. ಅವರು ರಾಹುಲ್ ಗಾಂಧಿ ಅವರ ಮುತ್ತಜ್ಜ, ಇಂದಿರಾಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ. ಅಭಿವೃದ್ಧಿ, ದಕ್ಷತೆಗೆ ಮೀಸಲಾತಿ ಅಡ್ಡಿಯಾಗುತ್ತೆಂದು ರಾಜ್ಯದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!