ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸದನದಲ್ಲೂ ನಾಗೇಂದ್ರ ಪರ ಡಿ.ಕೆ. ಶಿವಕುಮಾರ್ ಬ್ಯಾಟಿಂಗ್‌

KannadaprabhaNewsNetwork | Updated : Jul 16 2024, 04:57 AM IST

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸದನದಲ್ಲೂ ಸಮರ್ಥಿಸಿಕೊಂಡಿದ್ದಾರೆ.

 ವಿಧಾನಸಭೆ :  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸದನದಲ್ಲೂ ಸಮರ್ಥಿಸಿಕೊಂಡಿದ್ದಾರೆ.

 ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೋಮವಾರ ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣ ಕುರಿತು ಮಾತನಾಡುವಾಗ, ನಿಗಮದ 187 ಕೋಟಿ ರು. ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆ ನಡೆಯುತ್ತಿರುವಾಗಲೇ ಡಿ.ಕೆ.ಶಿವಕುಮಾರ್‌ ಅವರು ಈ ಪ್ರಕರಣದಲ್ಲಿ ನಾಗೇಂದ್ರ ಪಾತ್ರ ಏನೂ ಇಲ್ಲ. ಅವರ ಮೇಲೆ ಇಡಿ ದಾಳಿ ಅಗತ್ಯವಿರಲಿಲ್ಲ. ಅವರು ಆರಾಮಾಗಿ ಹೊರಬರುತ್ತಾರೆ ಎಂದು ಹೇಳಿದ್ದಾರೆ. ಅವರು ಬಹಳ ಕ್ಲೆವರ್‌ ರಾಜಕಾರಣಿ. ಈ ರೀತಿ ಹೇಳುವ ಮೂಲಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಲ್ಲ, ಪೊಲೀಸರಿಗೆ ಏನು ಸಂದೇಶ ನೀಡಬೇಕೋ ಅದನ್ನು ನೀಡಿದ್ದಾರೆ ಎಂದು ಟೀಕಿಸಿದರು.

ಈ ವೇಳೆ, ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್‌, ನಾನು ಸದನದಲ್ಲೇ ಆನ್‌ ರೆಕಾರ್ಡ್‌ ಮತ್ತೆ ಹೇಳುತ್ತಿದ್ದೇನೆ. ಈ ಪ್ರಕರಣದಲ್ಲಿ ಅವನು (ನಾಗೇಂದ್ರ) ಏನೂ ತಪ್ಪು ಮಾಡಿಲ್ಲ. ನಾನು ಅವನನ್ನು ಕೂರಿಸಿಕೊಂಡು ಕೇಳಿದ್ದೇನೆ. ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ನಿನ್ನ ಪಾತ್ರ ಇರುವುದು ನಿಜವಾಗಿದ್ರೆ ಒಪ್ಪಿಕೋ ಎಂದು ಹೇಳಿದ್ದೆ. ತನ್ನ ಪಾತ್ರ ಇಲ್ಲ ಎಂದು ಹೇಳಿದ್ದಾನೆ. ಆದರೂ, ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ನಾವು ಕೇಳಿರಲಿಲ್ಲ. ಆರೋಪ ಮುಕ್ತನಾಗಿ ಬಂದ ಮೇಲೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದಿದ್ದಾನೆ ಎಂದು ಹೇಳಿದರು.

ಆಗ ಆರ್‌.ಅಶೋಕ್‌ ಮಾತನಾಡಿ, ನಾನು ಮುಖ್ಯಮಂತ್ರಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಅವರು ಎಲ್ಲೂ ಸಮರ್ಥಿಸಿಕೊಂಡಿಲ್ಲ. ಆದರೆ, ನಿಮ್ಮ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ದಲಿತರ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಬಿಜೆಪಿಯವರು ತಾರ್ಕಿಕ ಅಂತ್ಯ ಕಾಣಿಸಬೇಕು, ಒಂದು ವೇಳೆ ಬಿಜೆಪಿಯವರು ಬಿಟ್ಟರೂ ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಛೇಡಿಸಿದರು.