ಕನ್ನಡಪ್ರಭ ವಾರ್ತೆ ಪಾಂಡವಪುರಪಟ್ಟಣದಲ್ಲಿ ಏ.14ರಂದು ನಡೆದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಜಯಂತಿ ವೇಳೆ ಬಾಬು ಜಗಜೀವನರಾಂ ಅವರ ಭಾವಚಿತ್ರ ಇರಿಸಿದ್ದಾರೆ ಎಂಬ ಕಾರಣಕ್ಕೆ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಗೊಂದಲ ಹಾಗೂ ಅಶಾಂತಿ ಸೃಷ್ಟಿಸಿ ರಾಷ್ಟ್ರ ನಾಯಕರಿಗೆ ಅಪಮಾನ ಮಾಡಿದ್ದಾರೆ. ಅಂತಹವರನ್ನು ಪೊಲೀಸ್ ಇಲಾಖೆ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ರವಿಕುಮಾರ್ ಹಾಗೂ ಮುಖಂಡ ಕಡಬ ಪುಟ್ಟರಾಜು ಆಗ್ರಹಿಸಿದರು.ರಾಜ್ಯ ಹಾಗೂ ರಾಷ್ಟ್ರದೆಲ್ಲೆಡೆ ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರಿಬ್ಬರು ನಾಯಕರ ಭಾವಚಿತ್ರವಿಟ್ಟು ಕಾರ್ಯಕ್ರಮ ನಡೆಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರುಗಳು ಕೂಡ ಇಬ್ಬರು ರಾಷ್ಟ್ರನಾಯಕರ ಭಾವಚಿತ್ರವಿರಿಸಿ ಅಂಬೇಡ್ಕರ್ ಜಯಂತಿ ಆಚರಿಸಿದ್ದಾರೆ. ಆದರೆ, ಪಾಂಡವಪುರದಲ್ಲಿ ಗೊಂದಲ ಸೃಷ್ಠಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಪಾದಿಸಿದರು.
ಕಳೆದ ಹಲವು ವರ್ಷಗಳಿಂದಲೂ ಪಾಂಡವಪುರದಲ್ಲಿ ಮಾಜಿ ಶಾಸಕರಾದ ಕೆ.ಕೆಂಪೇಗೌಡ, ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಸಿ.ಎಸ್.ಪುಟ್ಟರಾಜು ಹಾದಿಯಾಗಿ ಎಲ್ಲರೂ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರಿಬ್ಬರ ಭಾವಚಿತ್ರವಿರಿಸಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಜತೆಗೆ ಪೂರ್ವಭಾವಿ ಸಭೆಗಳಲ್ಲೂ ಇಬ್ಬರು ನಾಯಕರ ಭಾವಚಿತ್ರವಿರಿಸುವಂತೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗುತ್ತಿರುವ ಸಂದರ್ಭದಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಠಿ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಶಾಂತಿಸಭೆ ಏರ್ಪಡಿಸಿ ಅಶಾಂತಿ ತಿಳಿಗೊಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾದಾರ ಮಹಾಸಭಾದ ಮುಖಂಡರಾದ ಎಸ್.ರಾಚಯ್ಯ, ಬಸ್ತಿಹಳ್ಳಿ ಕುಮಾರ್, ಹನುಮಯ್ಯ, ಎನ್.ಎಸ್.ಸ್ವಾಮಿ, ಮುರಳೀಧರ್, ಶಶಿಕುಮಾರ್, ಮಲ್ಲಿಕಾರ್ಜುನ, ಡಿ.ಕೆ.ಜವರಾಯ, ಶಿವಲಿಂಗಯ್ಯ, ಗೋವಿಂದರಾಜು, ಬಸ್ತಿಹಳ್ಳಿ ನಾಗೇಶ್, ಎಂ.ರವಿಕುಮಾರ್, ಜೆ.ಸ್ವಾಮಿ, ವಸಂತಕುಮಾರ್, ಅಲ್ಪಹಳ್ಳಿ ಮಂಜು, ಗುರುಕುಮಾರ್, ವದೇಸಮುದ್ರ ಮೋಹನಕುಮಾರ್ ಇತರರಿದ್ದರು.