ಮಂಡ್ಯ:

ಮಂಡ್ಯ ಜಿಲ್ಲೆಗೆ ಮೂವರು ಸಚಿವ ಸ್ಥಾನಗಳನ್ನು ಕೇಳಿದ್ದೇವೆ. ಯಾರಿಗೇ ಸಿಕ್ಕರೂ ಸಂತೋಷ. ಆದರೆ, ನನಗೆ ಮುಂದಿನ ಎರಡೂ ವರ್ಷ ಮಂತ್ರಿ ಆಗೋಕೆ ಇಷ್ಟ ಇಲ್ಲ. ಬೇರೆಯವರಿಗೆ ಕೊಡಿ ಅಂತ ವಿಶಾಲ ಹೃದಯದಿಂದ ಹೇಳುತ್ತೇನೆ ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಬಹುದು. ಜೊತೆಗೆ ರಮೇಶ್ ಬಾಬು ಅವರು ಕೂಡ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ. ದಲಿತ ಕೋಟಾದಲ್ಲಿ ನರೇಂದ್ರಸ್ವಾಮಿ ಕೇಳ್ತಿದ್ದಾರೆ. ಚಲುವರಾಯಸ್ವಾಮಿ ಸಚಿವರಾಗೋ ಚಾನ್ಸ್ ಜಾಸ್ತಿ ಇದೆ‌ ಎಂದರು.

ನಾನು ಮಂತ್ರಿಗಿರಿ ಬೇಡ ಅಂತ ಹೇಳಿದ್ದೇನೆ‌. ಬೇರೆ ಯಾರಿಗಾದರೂ ಸಚಿವ ಸ್ಥಾನ ಕೊಡಲಿ. ಈ ಹಿಂದೆ ಮಂತ್ರಿ ಆಗದವರಿಗೆ ಅವಕಾಶ ಕೊಡಲಿ. ನನಗೆ ಈ ಎರಡೂ ವರ್ಷ ಮಂತ್ರಿ ಆಗೋಕೆ ಇಷ್ಟ ಇಲ್ಲ. ತಾಲೂಕು ಅಭಿವೃದ್ಧಿ ಮಾಡಬೇಕು, ಸಾಕಷ್ಟು ಕೆಲಸ ಇದೆ. ಮಂತ್ರಿಯಾಗಿ ರಾಜ್ಯ ಸುತ್ತಕ್ಕಾಗಲ್ಲ, ಕ್ಷೇತ್ರ ಅಭಿವೃದ್ಧಿ ಮುಖ್ಯ ಎಂದರು.

ಐವರು ಹೊಸಬರಿಗೆ ಮಂತ್ರಿ ಕೊಡಿ ಅಂತ ಕೇಳಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂಗೆ ಹೊಸಬರ ಕಷ್ಟ ಏನು ಅಂತ ಗೊತ್ತಿದೆ. ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.


ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾದವರಿಗೆ ಮರಣ ದಂಡನೆ ಶಿಕ್ಷೆ ಕೊಡಬೇಕು. ಬಡ ಮಕ್ಕಳಿಂದ ದುಡ್ಡು ತೆಗೆದುಕೊಂಡು ಎಕ್ಸಾಂ ಪಾಸ್ ಮಾಡೋರನ್ನು ಗಲ್ಲಿಗೆ ಹಾಕಬೇಕು. ಮೊದಲು ದುಡ್ಡು ಕೊಟ್ಟಿದ್ದು ತಪ್ಪು. ಪಿಎಸ್ಐ ಹಗರಣದಲ್ಲಿ ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡರು. ಜನರು ಗೊತ್ತಿದ್ದು ಗೊತ್ತಿದ್ದು ದುಡ್ಡು ಕೊಡೋದು ಸರಿಯಲ್ಲ ಎಂದರು.

ಜನಸಂಖ್ಯೆ ಜಾಸ್ತಿಯಾಗಿದೆ. ಉದ್ಯೋಗ ಕಡಿಮೆ ದುಡ್ಡು ಕೊಟ್ಟು ಕೆಲಸ ಪಡೆಯೋಣ ಎನ್ನುವಂತಾಗಿದೆ. ಈ ಬಗ್ಗೆ ಜನರು ಬದಲಾಗಬೇಕು. ಎಕ್ಸಾಂ ಬರೆದು ಮೆರಿಟ್ ಮೇಲೆ ಕೆಲಸ ತೆಗೆದುಕೊಳ್ಳಬೇಕು. ಈ ಹಗರಣದ ಬಗ್ಗೆ ಪಾಸ್ಟ್ ಟ್ರಾಕ್ ಕೋರ್ಟ್ ನಲ್ಲಿ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಇನ್ನೊಂದು ಬಾರಿ ಈ ರೀತಿ ಹಗರಣ ಆಗಲ್ಲ ಎಂದು ತಿಳಿಸಿದರು.