ವಿಕಸಿತ ಭಾರತ ನಿರ್ಮಾಣದ ಆಯವ್ಯಯವನ್ನು ಕೇಂದ್ರ ಸರ್ಕಾರ ನೀಡಿದೆ : ಸಂಸದ ಡಾ.ಕೆ.ಸುಧಾಕರ್‌

KannadaprabhaNewsNetwork |  
Published : Feb 02, 2025, 01:03 AM ISTUpdated : Feb 02, 2025, 04:21 AM IST
ಸಿಕೆಬಿ-9 ಸಂಸದ ಡಾ.ಕೆ.ಸುಧಾಕರ್‌ | Kannada Prabha

ಸಾರಾಂಶ

ರೈತರು, ಮಹಿಳೆಯರು, ಯುವಜನರ ಕ್ಷೇಮವನ್ನು ಕೇಂದ್ರೀಕೃತವಾಗಿಸಿಕೊಂಡು ವಿಕಸಿತ ಭಾರತ ನಿರ್ಮಾಣದ ಆಯವ್ಯಯವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

  ಚಿಕ್ಕಬಳ್ಳಾಪುರ : ರೈತರು, ಮಹಿಳೆಯರು, ಯುವಜನರ ಕ್ಷೇಮವನ್ನು ಕೇಂದ್ರೀಕೃತವಾಗಿಸಿಕೊಂಡು ವಿಕಸಿತ ಭಾರತ ನಿರ್ಮಾಣದ ಆಯವ್ಯಯವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ವಿಕಸಿತ ಭಾರತದ ನಿರ್ಮಿಸುವ ಈ ಬಜೆಟ್‌ ಅನ್ನು ರಾಜ್ಯ ಸರ್ಕಾರಗಳು ಮಾದರಿಯಾಗಿ ಪರಿಗಣಿಸಬಹುದು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ದಾಖಲೆಯಂತೆ 8 ನೇ ಬಾರಿಗೆ ಬಜೆಟ್‌ ಮಂಡಿಸಿದ್ದು, ಬಡವರು ಹಾಗೂ ಮಧ್ಯಮವರ್ಗದ ಜನರ ನಿರೀಕ್ಷೆಗಳನ್ನು ಮುಟ್ಟಲಾಗಿದೆ. ಮುಖ್ಯವಾಗಿ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರೈತಾಪಿ ವರ್ಗಕ್ಕೆ ಇದು ಹೆಚ್ಚು ಲಾಭ ನೀಡಲಿದೆ ಎಂದು ಹೇಳಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ಅನೇಕ ರೈತರ ಆರ್ಥಿಕಾಭಿವೃದ್ಧಿ ಸಾಧ್ಯವಾಗಿದೆ. ಭಾರತದಲ್ಲಿ 7 ಕೋಟಿಗೂ ಅಧಿಕ ರೈತರ ಬಳಿ ಈ ಕಾರ್ಡ್‌ ಇದೆ. ಇದರಡಿ ಸಾಲದ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ. ಪಿಎಂ ಧನ್ ಧಾನ್ಯ್ ಕೃಷಿ ಯೋಜನೆ ಘೋಷಿಸಿದ್ದು, ಇದರಡಿ ಆಯ್ದ 100 ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಬೇಳೆಕಾಳು ಕೃಷಿಯಲ್ಲಿ ಸ್ವಾವಲಂಬನೆ ತರಲು 6 ವರ್ಷದ ಮಿಷನ್ ಯೋಜನೆ ತರಲಾಗಿದೆ. 

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೇರೆ ಬೇರೆ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆಯ ಅನೇಕ ಅವಕಾಶಗಳನ್ನು ಪಡೆಯಬಹುದು ಎಂದು ಶ್ಲಾಘಿಸಿದ್ದಾರೆ.ಆದಾಯ ತೆರಿಗೆ ಮಿತಿಯನ್ನು ವರ್ಷಕ್ಕೆ 12 ಲಕ್ಷ ರೂ. ಗೆ ಏರಿಕೆ ಮಾಡಿರುವುದು ಮಧ್ಯಮ ವರ್ಗದ ಜನರಿಗೆ ಸಂಭ್ರಮ ತಂದಿದೆ. ಇದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಆ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಮನ್ನಣೆ ನೀಡಿದ್ದಾರೆ. ಕ್ಯಾನ್ಸರ್‌ ಸೇರಿದಂತೆ 36 ಬಗೆಯ ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಆರೋಗ್ಯಕ್ಕಾಗಿ ಮಾಡುತ್ತಿರುವ ವೆಚ್ಚದ ಪ್ರಮಾಣ ಇದರಿಂದಾಗಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.ಪರಿಶಿಷ್ಟ ಮಹಿಳೆಯರಿಗೆ ನೆರವು

ಪರಿಶಿಷ್ಟ ಜಾತಿ, ಪಂಗಡಕ್ಕೆ ಕೇಂದ್ರ ಸರ್ಕಾರ ಸದಾ ಬೆಂಬಲ ನೀಡಿದೆ. ಮೊದಲ ಬಾರಿಗೆ ಉದ್ಯಮಗಳನ್ನು ಆರಂಭಿಸುವ ಈ ವರ್ಗದ 5 ಲಕ್ಷ ಮಹಿಳೆಯರಿಗೆ ಟರ್ಮ್‌ ಲೋನ್‌ ನೀಡುವ ಯೋಜನೆ ಪರಿಚಯಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮ ವಲಯಕ್ಕೆ (ಎಂಎಸ್‌ಎಂಇ) ಕ್ರೆಡಿಟ್ ಗ್ಯಾರಂಟಿಯನ್ನು 5 ಕೋಟಿ ರೂ.ನಿಂದ 10 ಕೋಟಿ ರೂ. ಗೆ ಏರಿಸಲಾಗಿದೆ.

ನವೋದ್ಯಮಗಳಿಗೆ ಹೂಡಿಕೆ ನೆರವನ್ನು 10 ಕೋಟಿ ರೂ. ನಿಂದ 20 ಕೋಟಿ ರೂ. ಗೆ ಏರಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ, ಮೈಕ್ರೋ ಕಂಪನಿಗಳಿಗೆ 5 ಲಕ್ಷ ರೂ.ವರೆಗೆ ಕ್ರೆಡಿಟ್ ಕಾರ್ಡ್ ದೊರೆಯಲಿದೆ. ಈ ಎಲ್ಲ ಕ್ರಮಗಳು ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಯ ಮತ್ತೊಂದು ಹಂತಕ್ಕೆ ಒಯ್ಯಲಿದೆ ಎಂದು ಅವರು ಹೇಳಿದ್ದಾರೆ. ಪ್ರವಾಸೋದ್ಯಮಕ್ಕೆ ಒತ್ತು

ಒಂದು ಕೋಟಿ ತಾಯಂದಿರು ಹಾಗೂ 8 ಕೋಟಿಗೂ ಹೆಚ್ಚು ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, 2028 ರವರೆಗೆ ಜಲಜೀವನ್‌ ಮಿಷನ್‌ ವಿಸ್ತರಣೆ, 50 ಪ್ರವಾಸಿ ತಾಣಗಳ ಅಭಿವೃದ್ಧಿ ಮೊದಲಾದ ಕ್ರಮಗಳು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲಿದೆ ಎಂದು ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಚರಿತ್ರೆ ತಿಳಿದಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ: ಸಿಎಂ
ಜಲ ನಿರ್ವಹಣೆಗೆ ಸಹಕಾರ ನೀಡಲು ಬದ್ಧ : ಸಿಎಂ