ಬೆಂಗಳೂರು : ಆ.14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದ ತಾವು ಆ.7ರಂದೇ ದಿಢೀರ್‌ ರಾಜೀನಾಮೆ ನೀಡಿದ್ದು ಏಕೆ ಎಂಬುದರ ಬಗ್ಗೆ ವಿವರಣೆ ನೀಡಿ ಬಸವರಾಜ ಹೊರಟ್ಟಿ ಅವರು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆದಿರುವುದು ರಾಜಕೀಯವಾಗಿ ಸಂಚಲನಕ್ಕೆ ಕಾರಣವಾಗಿದೆ.

ರಾಜೀನಾಮೆ ನೀಡುವಂತೆ ಪ್ರಸ್ತಾಪಿಸಿದರು

‘ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಬ್ಬರ ಪ್ರಮಾಣ ವಚನ ಆ.7ರಂದು ನಡೆಯಿತು. ಆ ಕಾರ್ಯಕ್ರಮದ ನಂತರ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಕೆಲವು ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ನನ್ನ ಕೊಠಡಿಗೆ ಆಗಮಿಸಿ, ಅಂದೇ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡುವಂತೆ ಪ್ರಸ್ತಾಪಿಸಿದರು. ಆದರೆ ರಾಜ್ಯಪಾಲರ ಸೂಚನೆಯ ಅನುಸಾರ ಮುಂಗಾರು ಅಧಿವೇಶನವನ್ನು ಕರೆದು, ಆ.14ರಂದು ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿ ರಾಜೀನಾಮೆ ಸಲ್ಲಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ನನಗೆ ಅಚ್ಚರಿ ಉಂಟುಮಾಡಿತು

‘ಆದಾಗ್ಯೂ ನಾಯಕರು ತಕ್ಷಣವೇ ರಾಜೀನಾಮೆ ನೀಡುವಂತೆ ನಿರ್ದೇಶಿಸಿದ್ದು ನನಗೆ ಅಚ್ಚರಿ ಉಂಟುಮಾಡಿತು. ಆ ಸಂದರ್ಭದಲ್ಲಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಮುಖ್ಯಮಂತ್ರಿಗಳ ವಿನಂತಿಗೆ ಗೌರವ ನೀಡಿ ರಾಜೀನಾಮೆ ನೀಡುವ ಹಂತಕ್ಕೆ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.


ಆ.14ರಂದು ರಾಜೀನಾಮೆ ನೀಡುವ ನಿರ್ಧಾರವನ್ನು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೆ. ಮಾಧ್ಯಮಗಳಲ್ಲೂ ಅದು ವರದಿಯಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.