ಮಹಾಭಾರತದ ಶಕುನಿ ಮೋಸದ ಜೂಜಿನಾಟಕ್ಕೆ ಹೆಸರು : ಕರುನಾಡ ರಾಜಕೀಯದ ಕುತಂತ್ರ ಬುದ್ಧಿಯುಳ್ಳ ಶಕುನಿ ಯಾರು ?

Published : Aug 05, 2024, 11:19 AM IST
shakuni

ಸಾರಾಂಶ

ಮಹಾಭಾರತದ ಶಕುನಿ, ಸರ್ವಾಧಿಕಾರಿ ಹಿಟ್ಲರ್‌, ಆತನ ಮಂತ್ರಿಯಾಗಿದ್ದ ಗೋಬೆಲ್ಸ್‌ ಮುಂತಾದವರ ಹೆಸರನ್ನು ಇಂದಿನ ರಾಜಕಾರಣಿಗಳು ಸಾಕಷ್ಟು ನೆನಪು ಮಾಡಿಕೊಳ್ಳುತ್ತಾರೆ

ಮಹಾಭಾರತದ ಶಕುನಿ, ಸರ್ವಾಧಿಕಾರಿ ಹಿಟ್ಲರ್‌, ಆತನ ಮಂತ್ರಿಯಾಗಿದ್ದ ಗೋಬೆಲ್ಸ್‌ ಮುಂತಾದವರ ಹೆಸರನ್ನು ಇಂದಿನ ರಾಜಕಾರಣಿಗಳು ಸಾಕಷ್ಟು ನೆನಪು ಮಾಡಿಕೊಳ್ಳುತ್ತಾರೆ. ಅದರಲ್ಲೂ ಮಹಾಭಾರತದ ಶಕುನಿ ಮೋಸದ ಜೂಜಿನಾಟಕ್ಕೆ ಹೆಸರು, ಒಂದು ರೀತಿಯಲ್ಲಿ ಪಾಂಡವರು-ಕೌರವರ ನಡುವೆ ಮಹಾಯುದ್ಧಕ್ಕೆ ಈ ಜೂಜು ಸಹ ಒಂದು ಕಾರಣ. ಇಂತಹ ಶಕುನಿಯನ್ನು ಇಂದಿಗೂ ಕುತಂತ್ರ ಬುದ್ಧಿಯುಳ್ಳವರಿಗೆ ಹೋಲಿಸುತ್ತೇವೆ.

ಇಂತಹ ಶಕುನಿ ರಾಜಕೀಯ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆಯಂತೆ. ಹೀಗೆಂದು ಹೇಳಿದವರು, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮೇಡಂ. ಸುದ್ದಿಗಾರರ ಜೊತೆ ಮಾತನಾಡುತ್ತಾ, ಕರ್ನಾಟಕ ರಾಜಕಾರಣದಲ್ಲಿನ ಶಕುನಿ ರಾಜಕೀಯ ವಿಷಯದ ಬಗ್ಗೆ ಪ್ರಸ್ತಾಪಿಸಿ, ಬಿಜೆಪಿಯ ಕೆಲ ನಾಯಕರೇ ಶಕುನಿಗಳಂತಾಗಿದ್ದಾರೆ. ಬಿಜೆಪಿಯ ಕೆಲ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿಯೇ ಶಕುನಿಗಳಿದ್ದಾರೆ ಎಂದರು.

ಆಗ ಕರ್ನಾಟಕ ರಾಜಕಾರಣದಲ್ಲಿನ ಶಕುನಿ ಮಾಮಾ ಯಾರು ಎಂಬ ಪತ್ರಕರ್ತರ ಪ್ರಶ್ನೆಗೆ ಹೆಬ್ಬಾಳಕರ ನೇರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರನ್ನೂ ಪ್ರಸ್ತಾಪಿಸಿ ಶಕುನಿ ರಾಜಕಾರಣಿ ಎಂದೂ ಜರಿದರು.

-----

 ಏನಾದ್ರೂ ಮಾಡೋದಿದ್ರ ಹೇಳ್ರಿ. ಇಲ್ಲದಿದ್ರ ಹೋಗಿಬಿಡ್ರಿ 

ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಜನರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಜಾಸ್ತಿ ಮಳೆಯಾದರೆ ಇವರಿಗೆ ಸಂಕಷ್ಟ ಎದುರಾಗುತ್ತೆ. ಮನೆ ಬಿಟ್ಟು ಹೋಗಬೇಕಾಗುತ್ತದೆ. ಇಷ್ಟಾಗಿದ್ರೂ ಅವರ ಬದುಕಿಗೆ ಸರ್ಕಾರ ಯಾವ ದಾರಿಯನ್ನೂ ಮಾಡಿಕೊಟ್ಟಿಲ್ಲ. ಅದರಂತೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ಕುಂಬಾರ ಗಲ್ಲಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತೆ ರಶ್ಮಿ ಮಹೇಶ್‌ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್‌ ಭೇಟಿ ನೀಡಿದ್ದರು.

ಅಧಿಕಾರಿಗಳು ಬರುತ್ತಿದ್ದಂತೆ ನಿರಾಶ್ರಿತರು ‘ನೀವು ಹಾಗೇ ಸುಮ್ಮನೆ ಬಂದು ಹೋಗಬ್ಯಾಡ್ರಿ, ನಮಗೊಂದು ಏನಾದ್ರೂ ಪರಿಹಾರ ಕೊಡಿಸೋದಿದ್ರ ಮಾತಾಡ್ರಿ. ಯಾಕಂದ್ರ ನಿಮ್ಮಂತವ್ರು ಸಾಕಷ್ಟು ಜನ ಅಧಿಕಾರಿಗಳು ಬಂದು ಹೋಗ್ಯಾರಿ. ಆದ್ರ ಏನೂ ಪ್ರಯೋಜನ ಆಗಿಲ್ಲಾ. ನಾವು ಈಗಾಗ್ಲೇ ನೀರಲ್ಲಿ ಮುಳಗಿ ಹೋಗಿ ಬಿಟ್ಟಿವ್ರಿ. ನಮ್ಮ ಬದ್ಕು ಹೇಗೆ ಕಟ್ಟಿಕೊಳ್ಳಬೇಕು ಅಂತಾ ನಮ್ಗ ಗೊತೈತ್ರಿ. ನೀವು ಏನಾದ್ರೂ ಮಾಡೋದಿದ್ರ ಹೇಳ್ರಿ. ಇಲ್ಲದಿದ್ರ ಹೋಗಿಬಿಡ್ರಿ’ ಎಂದು ಕಡ್ಡಿ ಮುರಿದಂತೆ ಹೇಳಿದರು.

ನಿರಾಶ್ರಿತರ ಆಕ್ರೋಶ ಬಹುತೇಕ ಅಲ್ಲಿದ್ದ ಅಧಿಕಾರಿಗಳಿಗೆ ಅರ್ಥವಾದಂತೆ ಕಾಣಿಸಿದ್ದರಿಂದಲೋ ಏನೋ ಮರು ಮಾತಾಡದೇ ಅಧಿಕಾರಿಗಳು ಮೌನಕ್ಕೆ ಜಾರಿದ್ದರು.

---

ಬಾಯಿಗೆ ಬರದ ಗೌನು

ಎರಡು ವರ್ಷದಿಂದ ಮೇಯರ್‌ ಹಾಕಿರಲಿಲ್ಲ. ನೀವು ಹಾಕಿರಿ.. ಇದು ಬಹಳ ಖುಷಿ ಆತು ನೋಡ್ರಿ..!

ಇದು ಕಳೆದ ಎರಡು ದಿನಗಳ ಹಿಂದೆಯಷ್ಟೇ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಇಡೀ ಸಭೆಯನ್ನೇ ನಗೆಗಡಲಲ್ಲಿ ತೇಲಾಡಿಸಿದ ಡೈಲಾಗು..

ಆಗಿದ್ದೇನಪಾ ಅಂದರೆ ಎರಡು ವರ್ಷದ ಹಿಂದೆ ಮೇಯರ್‌ ಆಗಿದ್ದ ಈರೇಶ ಅಂಚಟಗೇರಿ, ಗೌನು ಧರಿಸುವುದು ಬ್ರಿಟಿಷ್‌ ಆಡಳಿತದ ಸಂಸ್ಕೃತಿ ಎಂದು ಮೇಯರ್‌ಗಿರಿಯ ಗೌನು ತಿರಸ್ಕರಿಸಿದ್ದರು. ಮುಂದೆ ಎಲ್ಲ ಸಾಮಾನ್ಯ ಸಭೆಗಳಲ್ಲೂ ಗೌನು ಇಲ್ಲದೇ ಸಭೆಗಳಿಗೆ ಹಾಜರಾಗಿದ್ದರು. ಅದೇ ಸಂಪ್ರದಾಯವನ್ನು ಅಂಚಟಗೇರಿ ನಂತರ ಮೇಯರ್‌ ವೀಣಾ ಬರದ್ವಾಡ ಮುಂದುವರಿಸಿದ್ದರು. ಅವರೂ ತಮ್ಮ ಅವಧಿಯಲ್ಲಿ ಒಂದೇ ಒಂದು ಬಾರಿ ಕೂಡ ಗೌನು ಧರಿಸಲಿಲ್ಲ.

ಆದರೆ ಇದೀಗ ನೂತನ ಮೇಯರ್‌ ಆಗಿರುವ ರಾಮಣ್ಣ ಬಡಿಗೇರ ಗೌನು ಧರಿಸುವುದು ಮೇಯರ್‌ ಪೀಠಕ್ಕೆ ಕೊಡುವ ಗೌರವ. ಹೀಗಾಗಿ ಅದನ್ನು ಧರಿಸುತ್ತೇನೆ ಎಂದು ಘೋಷಿಸಿದ್ದರು. ಜತೆಗೆ ಕಳೆದ 2 ದಿನದ ಹಿಂದೆ ನಡೆದ ಸಾಮಾನ್ಯಸಭೆಯಲ್ಲಿ ಗೌನು ಧರಿಸಿದ್ದರು. ಇದನ್ನು ವಿರೋಧ ಪಕ್ಷದ ಸದಸ್ಯರೆಲ್ಲರೂ ಸ್ವಾಗತಿಸಿ ಅಭಿನಂದಿಸಿದ್ದರು. ಇನ್ನು ಎಐಎಂಐಎಂ ಸದಸ್ಯ ನಜೀರ್‌ ಅಹ್ಮದ ಹೊನ್ಯಾಳ ಕೂಡ ಅಭಿನಂದಿಸುತ್ತಿದ್ದರು. ಅವರಿಗೆ ಸ್ವಲ್ಪ ಕನ್ನಡ ಅಷ್ಟಕ್ಕಷ್ಟೇ. ಆದರೆ ಹೀಗಾಗಿ ಗೌನು ಎಂದು ಹೇಳೋಕೆ ಆಗದೇ 2 ವರ್ಷದಿಂದ ಅದನ್ನು ಯಾರು ಹಾಕಿರಲಿಲ್ಲ. ನೀವು ಹಾಕಿರ್ರಿ. ನೋಡಿ ಖುಷಿ ಆತು ಎಂದರು. ನಜೀರ್‌ ಏನು ಹೇಳುತ್ತಿದ್ದಾರೆ ಎನ್ನುವುದು ಮೇಯರ್‌ ಸಾಹೇಬ್ರಿಗೆ ಸರಿಯಾಗಿ ಗೊತ್ತಾಗಲೇ. ಏನ್ರಿ ನಾನೇನು ಹಾಕೇನ್ರಿ.. ಏನು ನೀವು ಹೇಳ್ತಾ ಇರೋದು.. ಎಂದುಬಿಟ್ಟರು. ಅದೇ ರ್ರಿ ನೀವು ಹಾಕಿರಲ್ಲಾ ಅದೇ ಎಂದ್ಹೇಳುತ್ತಾ ಗೌನಿನತ್ತ ಬೊಟ್ಟು ತೋರಿಸಿದರು. ಆಗ ಸದಸ್ಯರೊಬ್ಬರು, ಗೌನು ಎಂದು ಹೇಳುತ್ತಿದ್ದಾರೆ. ಆದರೆ ಅವರಿಗೆ ಹೇಳೋಕೆ ಬರ್ತಾ ಇಲ್ಲ ಅಷ್ಟೇ.. ಎಂದು ಸಮಜಾಯಿಷಿ ನೀಡಿದರು.

ಹೋ ಅದಾ ಸರಿ ಬಿಡಿ ಎಂದು ಮೇಯರ್‌ ಹೇಳಿದರೆ, ಇತ್ತ ಇಡೀ ಸಭೆಯಲ್ಲಿದ್ದ ಸದಸ್ಯರೆಲ್ಲರೂ ನಗೆಗಡಲಲ್ಲಿ ತೇಲುತ್ತಾ, ಅದಕ್ಕೆ ಗೌನು ಅಂತ ಹೇಳ್ತಾರೆ ನಜೀರ್‌ ಸಾಬ್‌ ಎಂದು ತಿಳಿ ಹೇಳಿದರು. ಅದಕ್ಕೆ ನಜೀರ್‌ ಕೂಡ ನಕ್ಕು ಸುಮ್ಮನಾದರು.

-ಶ್ರೀಶೈಲ ಮಠದ

-ವಿಶ್ವನಾಥ ಮುನವಳ್ಳಿ

-ಶಿವಾನಂದ ಗೊಂಬಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು