ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕಾದ ಅನುದಾನದಲ್ಲಿ ಅನ್ಯಾಯ ಮಾಡಿರುವ ಕಾರಣವನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಈ ಪ್ರತಿಭಟನೆಗೆ ಬರಲು ಬಿಜೆಪಿ ಸಂಸದರಿಗೆ ತಾಕತ್ತಿದೆಯಾ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕಾದ ಅನುದಾನದಲ್ಲಿ ಅನ್ಯಾಯ ಮಾಡಿರುವ ಕಾರಣವನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಈ ಪ್ರತಿಭಟನೆಗೆ ಬರಲು ಬಿಜೆಪಿ ಸಂಸದರಿಗೆ ತಾಕತ್ತಿದೆಯಾ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ಮೋದಿ ಎದುರು ನಿಲ್ಲೋಕೇ ರಾಜ್ಯ ಬಿಜೆಪಿಯವರು ಹೆದರುತ್ತಾರೆ. ಇನ್ನು ಪ್ರತಿಭಟನೆಗೆ ಬರುತ್ತಾರೆಯೇ..?, ಒಮ್ಮೆ ಅವರು ಪ್ರತಿಭಟನೆ ಬಂದರೆ ಸಂತೋಷ. ನಮ್ಮ ಜೊತೆ ಬರಲಾಗದಿದ್ದರೆ ಅವರೇ ಹೋಗಿ ಸತ್ಯಾಗ್ರಹ ಮಾಡುತ್ತೇವೆ ಎಂದು ಕುಳಿತರೂ ಸಂತೋಷ.
ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಸುಮಲತಾ ಅವರೂ ಬರಲಿ. ಸ್ವಾಭಿಮಾನಿ ಸಂಸದೆ ಆಗಿದ್ದರೆ ನಮಗಿಂತ ಮೊದಲೇ ಪ್ರತಿಭಟನೆಯಲ್ಲಿ ಇರಬೇಕು ಎಂದು ಸುದಿಗಾರರೊಂದಿಗೆ ಮಾತನಾಡುತ್ತಾ ಛೇಡಿಸಿದರು.
ನಮ್ಮ ಪ್ರತಿಭಟನೆ ವಿರೋಧ ಮಾಡುವುದಕ್ಕೆ ಬಿಜೆಪಿಯವರಿಗೆ ಏನು ಹಕ್ಕಿದೆ. ನಮ್ಮ ಹಕ್ಕನ್ನು ಅವರನ್ನು ಕೇಳಿಕೊಂಡು ಪಡೆಯಬೇಕಾ. ಅವರೇನು ನಮ್ಮ ಯಜಮಾನರಾ. ನಮ್ಮ ಯಜಮಾನರು ರಾಜ್ಯದ ಜನರು. ಜನರು ಹೇಳಿದ್ದನ್ನು ನಾವು ಕೇಳಬೇಕು, ಬಿಜೆಪಿ, ಜೆಡಿಎಸ್ ಹೇಳಿದ್ದನ್ನಲ್ಲ. ನಮಗೆ ಬರಪರಿಹಾರ ನೀಡದೇ ವಿಳಂಬ ಮಾಡುತ್ತಿದ್ದಾರೆ.
ಕರ್ನಾಟಕಕ್ಕೆ ಆರ್ಥಿಕ ಸಹಕಾರವನ್ನೂ ನೀಡುತ್ತಿಲ್ಲ. ಈ ಕಾರಣಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ನಾಚಿಕೆ ಇದ್ದರೆ ಬಿಜೆಪಿ ನಾಯಕರು ರಾಜಕೀಯ ಹೊರತುಪಡಿಸಿ ಮಾತನಾಡಲಿ ಎಂದು ಆಕ್ರೋಶದಿಂದ ನುಡಿದರು.