ಡಾ.ಸುಧಾಕರ್‌ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ

KannadaprabhaNewsNetwork | Updated : Apr 07 2024, 04:47 AM IST

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ ಅವರ ಜನಪ್ರಿಯ ನಾಯಕರಾಗಿದ್ದು, ಅವರು ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ. ಅವರು ಖಂಡಿತವಾಗಿಯೂ ಸಂಸದರಾಗಲಿದ್ದಾರೆ. ಎಲ್ಲ ಕಾರ್ಯಕರ್ತರು ಪೂರ್ತಿ ಶಕ್ತಿಯಿಂದ ಡಾ.ಕೆ.ಸುಧಾಕರ್‌ ಅವರನ್ನು ಗೆಲ್ಲಿಸುವಂತೆ ಅರುಣ್‌ಸಿಂಗ್‌ ಮನವಿ

 ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ಹೆಚ್ಚು ಜನ ಬೆಂಬಲ ಹಾಗೂ ಜನಪ್ರಿಯತೆಯಿದ್ದು, ಅವರು ಹೆಚ್ಚು ಮತಗಳಿಂದ ವಿಜಯ ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೇಳಿದರು. ಶನಿವಾರ ದೇವನಹಳ್ಳಿಯಲ್ಲಿ ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಖಜಾಂಚಿ ನಾಗೇಶ್ ಅವರ ನಿವಾಸದಲ್ಲಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹಾಗೂ ಅರುಣ್‌ ಸಿಂಗ್‌ ಅವರು ಪಕ್ಷದ ಬಾವುಟ ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಡಾ.ಸುಧಾಕರ್‌ ಗೆಲ್ಲುವ ವಿಶ್ವಾಸ

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ ಅವರ ಜನಪ್ರಿಯತೆಯನ್ನು ನಾನು ಖುದ್ದಾಗಿ ನೋಡಿದ್ದು, ಅವರು ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ. ಅವರು ಖಂಡಿತವಾಗಿಯೂ ಸಂಸದರಾಗಲಿದ್ದಾರೆ. ಎಲ್ಲ ಕಾರ್ಯಕರ್ತರು ಪೂರ್ತಿ ಶಕ್ತಿಯಿಂದ ಡಾ.ಕೆ.ಸುಧಾಕರ್‌ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

 ಸಿಎಂ ಮನೆ ಮಕ್ಕಳಿಗೂ ಮೋದಿ ಇಷ್ಟ

ಈ ಬಾರಿಯೂ ಮೋದಿಜಿ ಪ್ರಧಾನಿಯಾಗಲಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮನೆಯ ಮಕ್ಕಳಿಗೆ ಕೇಳಿದರೂ ಇದನ್ನೇ ಹೇಳುತ್ತಾರೆ. ಕರ್ನಾಟಕದ ಎಲ್ಲಾ 28 ಸಂಸದ ಸ್ಥಾನಗಳು ಬಿಜೆಪಿಗೆ ಸಿಗಲಿದೆ. ದೇಶದ ನಾಯಕತ್ವವನ್ನು ಮೋದಿಜಿಯವರೇ ವಹಿಸಿಕೊಳ್ಳಬೇಕು ಎಂದು ಎಲ್ಲರಿಗೂ ಅನ್ನಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮನಸ್ಸಿನೊಳಗೆ ಅದೇ ಭಾವನೆ ಇದೆ ಎಂದರು. 

14 ರಂದು ಪ್ರಧಾನಿ ಮೋದಿ ಪ್ರಚಾರಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜಯಂತಿಯ ದಿನವಾದ ಏಪ್ರಿಲ್‌ 14 ರಂದು ಪ್ರಧಾನಿ ನರೇಂದ್ರ ಮೋದಿ ಅ‍ವರು ದೇವನಹಳ್ಳಿಗೆ ಚುನಾವಣಾ ಪ್ರಚಾರಕ್ಕಾಗಿ ಬರಲಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಉತ್ತರ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವಾರು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಹಿಂದುಳಿದ ವರ್ಗದ ಜನರು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಬಲಹೀನ ವರ್ಗದವರಿಗೆ ಹೆಚ್ಚು ಅನುಕೂಲ ಕಲ್ಪಿಸಕೊಡಲಾಗಿದೆ ಇದು ಸಬಲೀಕರಣದಲ್ಲಿ ವಿಭಿನ್ನವಾದ ಪ್ರಯತ್ನವಾಗಿದೆ ಎಂದರು. 

ಬಿಜೆಪಿ ಸ್ಥಾಪನೆಯಾಗಿ 45 ವರ್ಷ ಕಳೆದಿದೆ. ಎರಡು ಸ್ಥಾನಗಳಿಂದ ಆರಂಭವಾದ ಹೋರಾಟ, ಕಾರ್ಯಕರ್ತರ ಶಕ್ತಿ, ಸಂಘಟನೆಯಿಂದ 400 ತನಕ ಬರುವ ವಿಶ್ವಾಸವಿದೆ. ಪಕ್ಷದ ಆಶಯ, ರಾಷ್ಟ್ರೀಯತೆ, ಸಮಗ್ರತೆ, ದೇಶವನ್ನು ಇಡೀ ವಿಶ್ವದಲ್ಲಿ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ತತ್ವ, ಸಿದ್ಧಾಂತದಿಂದಾಗಿ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಬೇರೆಲ್ಲ ಪಕ್ಷಕ್ಕಿಂತಲೂ ಬಿಜೆಪಿ ಭಿನ್ನವಾಗಿದೆ ಎಂದರು.ಸಿಕೆಬಿ-5 ದೇವನಹಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ರವರು ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚನೆ ಮಾಡಿದರು.

Share this article