ಇಡಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವೆ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

KannadaprabhaNewsNetwork | Updated : Jan 23 2025, 04:14 AM IST

ಸಾರಾಂಶ

ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿರುವ ಇ.ಡಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವುದಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

  ಮೈಸೂರು : ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿರುವ ಇ.ಡಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವುದಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಇ.ಡಿ ಮಾಹಿತಿ ಹಂಚಿಕೊಂಡಿರುವುದಕ್ಕೆ ನ್ಯಾಯಾಲಯದ ನಿರ್ದೇಶನವಿತ್ತೆ?. ಇದಕ್ಕೆ ಅವಕಾಶ ಇದೆಯೇ ಎಂಬುದನ್ನು ಇ.ಡಿ ಅಧಿಕಾರಿಗಳು ತಿಳಿಸಬೇಕು. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ದುರುದ್ದೇಶದಿಂದ ಈ ರೀತಿ ಪ್ರಕಟಣೆ ಹೊರಡಿಸಲಾಗಿದೆ ಎಂದರು.

142 ನಿವೇಶನಗಳ ಸಂಖ್ಯೆ ಬಿಡುಗಡೆಗೊಳಿಸಿರುವ ಇ.ಡಿ ಅಧಿಕಾರಿಗಳು ಯಾರ ಹೆಸರಲ್ಲಿದೆ ಎಂಬ ಮಾಹಿತಿಯನ್ನೂ ನೀಡಬೇಕು. ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ನಿವೇಶನದ ಉಲ್ಲೇಖವಿಲ್ಲ. ಬೆಂಗಳೂರಿನ ಮಂಜುನಾಥ್, ಮೈಸೂರಿನ ಜಯರಾಮ್, ಕ್ಯಾಥಡ್ರೆಲ್ ಪ್ಯಾರಲ್ ಸೊಸೈಟಿ 63, ಬಿಜೆಪಿ, ಜೆಡಿಎಸ್ ಮುಖಂಡರು 97 ನಿವೇಶನಗಳನ್ನು ಬೇನಾಮಿ ಹೆಸರಲ್ಲಿ ಪಡೆದುಕೊಂಡಿರುವ ಮಾಹಿತಿ ನಮ್ಮ ಬಳಿ ಇದೆ ಎಂದರು.

ಇ.ಡಿ ಬಿಜೆಪಿ, ಆರ್‌ಎಸ್‌ಎಸ್ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಹೆಸರಲ್ಲಿ ನಿವೇಶನ ಇತ್ತೇ? ಪ್ರಕಟಣೆಯಲ್ಲಿ ಉದ್ದೇಶ ಪೂರ್ವಕವಾಗಿ ಸಿದ್ದರಾಮಯ್ಯ ಹೆಸರು ಸೇರಿಸುವುದು ನಿಮ್ಮ ಉದ್ದೇಶ ಏನು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ 14 ನಿವೇಶನ ಒಟ್ಟು 56 ಕೋಟಿ ರು. ಎಂದು ಇ.ಡಿ ಅಂದಾಜು ಮಾಡಿದೆ. ಇ.ಡಿ ಲೆಕ್ಕಚಾರದ ಪ್ರಕಾರ ಚದರಡಿ 17 ಸಾವಿರ ರು.ಗಳಾಯಿತು. ವಿಜಯನಗರದಲ್ಲಿ ಚದರಡಿಗೆ 17 ಸಾವಿರ ರು. ದರ ಇದೆಯೇ? ಇದ್ದರೆ ನನ್ನ ಸಂಬಂಧಿಕರದೊಂದು ನಿವೇಶನವನ್ನು ಇ.ಡಿ ಅಧಿಕಾರಿಗಳು ಮಾರಿಸಿ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದರು.

300 ಕೋಟಿ ಆಸ್ತಿ ವಶ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಟ್ಟು ಕಿರುಕುಳ ಕೊಡಲು ಮುಂದಾಗಿದೆ. ಮುಡಾದಿಂದ ಪಡೆದಿದ್ದ ನಿವೇಶನವನ್ನು ಹಿಂದಕ್ಕೆ ನೀಡಿದ್ದರೂ ಪ್ರಕರಣವನ್ನು ಸಿದ್ದರಾಮಯ್ಯ ಅವರ ತಲೆ ಕಟ್ಟಲಾಗುತ್ತಿದೆ. ರಾಷ್ಟ್ರೀಯ ವಾಹಿನಿಗಳಲ್ಲಿ ದಿನಪೂರ್ತಿ ತಪ್ಪು ಮಾಹಿತಿ ಪ್ರಕಟಿಸಿ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ನಾವು ಹೋರಾಟ ನಡೆಸುವುದಾಗಿ ಹೇಳಿದರು.

ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸುತ್ತಿರುವ ವಕೀಲರಿಗೆ ಒಂದು ಕಲಾಪದಲ್ಲಿ ಭಾಗವಹಿಸಲು 25 ಲಕ್ಷ ರು. ಕೊಡಬೇಕು. ನಾಲ್ವರು ವಕೀಲರಿಗೆ ಕೊಡಲು ಹಣ ಎಲ್ಲಿಂದ ಬರುತ್ತಿದೆ. ಇದನ್ನು ಇಡಿ ಯಾಕೇ ತನಿಖೆ ಮಾಡುತ್ತಿಲ್ಲ. ಸ್ವಯಂ ಪ್ರೇರಿತ ದೂರು ಯಾಕೇ ದಾಖಲಿಸಿಲ್ಲ. ಈ ಬಗ್ಗೆ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಹೇಳಿಕೆ ಕೊಡುತ್ತಿರುವ ವಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಪ್ರಚಾರದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸುತ್ತಿರುವ ವಿಪಕ್ಷ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ ಅವರು, 2019ರಿಂದ 23ರವರೆಗೆ ರಾಜ್ಯದಲ್ಲಿ ಅಪಹರಣ, ಲೂಟಿ, ದೌರ್ಜನ್ಯ ಸೇರಿದಂತೆ ಅಪರಾಧದ ಅಂಕಿ-ಸಂಖ್ಯೆಯನ್ನು ಬಿಡುಗಡೆಗೊಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಎಂಎಲ್ಸಿ ಎಚ್.ವಿಶ್ವನಾಥ್ ಅವರ ಹೆಸರೇಳದೆ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಉಸಾಬರಿ ನಿಮಗ್ಯಾಕೆ?. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಕಂದಕ ತರಲು ಮುಂದಾಗಿದ್ದಾರೆ. ಅವಕಾಶ ಸಿಕ್ಕರೆ ಸಿದ್ದರಾಮಯ್ಯ ಮನೆಗೂ ಹೋಗುತ್ತಾರೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಏನೆಲ್ಲಾ ಮಾಡಿದರು ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆ. ಅವರೊಬ್ಬ ಅತ್ಯಂತ ಅಪಾಯಕಾರಿ ಮನುಷ್ಯ ಎಂದು ಟೀಕಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಧ್ಯಮ ವಕ್ತಾರ ಕೆ. ಮಹೇಶ್ ಇದ್ದರು.

Share this article