ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿ ಯಾವುದೇ ತಂಟೆ-ತಕರಾರುಗಳಿಗೆ ಹೋಗದೆ, ದೇವರು-ದಿಂಡರು ಎಂದು ಮನೆಯಲ್ಲಿರುತ್ತಾರೆ. ಆ ತಾಯಿಗೆ (ಸಿಎಂ ಪತ್ನಿ) ತೊಂದರೆ ಆಗದಂತೆ ನೋಡಿಕೊಳ್ಳಪ್ಪ ಎಂದು ಪ್ರಾರ್ಥಿಸುವೆ. ಕಾರಣ ಸಿದ್ದರಾಮಯ್ಯ ಅವರು ಹೇಳಿದ ಕಡೆ ಪತ್ನಿ ಸಹಿ ಮಾಡಿರುತ್ತಾರೆ. ಎಲ್ಲರ ಮನೆಯಲ್ಲೂ ಗಂಡಸರು ಹೇಳಿದಲ್ಲಿ ಹೆಣ್ಣು ಮಕ್ಕಳು ಸಹಿ ಮಾಡುತ್ತಾರೆ. ಅದೇ ರೀತಿ ಸಿಎಂ ಪತ್ನಿಯೂ ಗೊತ್ತಿಲ್ಲದೆ ಸಹಿ ಮಾಡಿರುತ್ತಾರೆ. ಹಾಗಾಗಿ ಮುಡಾ ಪ್ರಕರಣದಲ್ಲಿ ಆ ತಾಯಿಗೆ ಯಾವುದೇ ಅನ್ಯಾಯ ಆಗಬಾರದು ಎಂದರು.
ನನ್ನ ಮೇಲೆ ಆರೋಪ ಬಂದಾಗ ಐದೇ ನಿಮಿಷದಲ್ಲಿ ರಾಜೀನಾಮೆ ಕೊಡುತ್ತೇನೆಂದು ಹೈಕಮಾಂಡ್ಗೆ ಫೋನ್ ಕರೆ ಮಾಡಿದ್ದೆ. ಅಷ್ಟರಲ್ಲೇ ನನ್ನ ರಾಜೀನಾಮೆಗೆ ಆಗ್ರಹಿಸಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮೆರವಣಿಗೆ ಮಾಡಿದರು. ಈಗ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೂ ಸಿಎಂ ರಾಜೀನಾಮೆ ಕೊಟ್ಟಿಲ್ಲ. ಅವರಿಗೊಂದು ಕಾನೂನು?, ನನಗೊಂದು ಕಾನೂನಾ? ಎಂದು ಪ್ರಶ್ನಿಸಿದರು.ಬಿಜೆಪಿಯವರೇ ಮೊಸ ಮಾಡಿದರು: ನನ್ನ ಮೇಲೆ ಆರೋಪ ಬಂದಾಗ ನಮ್ಮ ಪಕ್ಷದ ನಾಯಕರೇ ಮೋಸ ಮಾಡಿದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಇನ್ನೊಂದು ವಾರದಲ್ಲಿ ಈಶ್ವರಪ್ಪ ಅವರನ್ನು ಮತ್ತೆ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಮಂತ್ರಿಮಂಡಲದಲ್ಲಿ 6 ಸ್ಥಾನ ಖಾಲಿ ಇದ್ದರೂ ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.