ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇ : ಯತ್ನಾಳ್ ವಿರುದ್ಧ ವಿಜಯೇಂದ್ರ ಟೀಂನಿಂದ ದೇಗುಲಯಾತ್ರೆ

Published : Nov 30, 2024, 07:41 AM IST
BY Vijayendra

ಸಾರಾಂಶ

ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇರಿದ್ದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂಗೆ ಟಾಂಗ್ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಂಡ ದೇಗುಲ ಯಾತ್ರೆ ಆರಂಭಿಸಿದೆ.

ಕೋಲಾರ : ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇರಿದ್ದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂಗೆ ಟಾಂಗ್ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಂಡ ದೇಗುಲ ಯಾತ್ರೆ ಆರಂಭಿಸಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ ವಿಜಯೇಂದ್ರ ಪರ ಬಣ ಶುಕ್ರವಾರ ವಿಶೇಷಪೂಜೆ ಸಲ್ಲಿಸುವ ಮೂಲಕ ತನ್ನ ಪ್ರವಾಸ ಪ್ರಾರಂಭಿಸಿತು. ಆ ಮೂಲಕ ವಕ್ಫ್‌ ವಿರುದ್ದ ಹೋರಾಟವನ್ನು ಮುಂದುವರಿಸಿರುವ ಯತ್ನಾಳ್‌ ಬಣಕ್ಕೆ ವಿಜಯೇಂದ್ರ ಬಣ ಸಡ್ಡು ಹೊಡೆದಿದೆ. ವಿಜಯೇಂದ್ರ ಬೆಂಬಲಕ್ಕೆ ನಿಂತಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ಹಾಗೂ ಕೆಲ ಮಾಜಿ ಶಾಸಕರು ಸೇರಿ 50 ನಾಯಕರ ಟೀಂ ಶುಕ್ರವಾರ ಕುರುಡುಮಲೆಗೆ ಭೇಟಿ ನೀಡಿತು.

ಕುರುಡುಮಲೆಗೆ ಆಗಮಿಸಿದ ನಾಯಕರಿಗೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಸಂಪಂಗಿ, ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಬಳಿಕ, ನಾಯಕರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಸದಸ್ಯರು ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಗೋಕರ್ಣಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ, ದಾವಣಗೆರೆಯಲ್ಲಿ ಸಮಾವೇಶ ನಡೆಸಲು ಟೀಂ ಸಿದ್ದತೆ ನಡೆಸುತ್ತಿದೆ.

ಯತ್ನಾಳ್‌ ವಿರುದ್ಧ ಕಿಡಿ:

ಈ ಮಧ್ಯೆ. ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಜಯೇಂದ್ರ ಬಣದ ಸದಸ್ಯರು ಯತ್ನಾಳ್ ವಿರುದ್ಧ ಟೀಕಾಪ್ರಹಾರ ನಡೆಸಿದರು.ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದವರೇ ಆದ ಯತ್ನಾಳ್ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ಪಕ್ಷದ ಹೈಕಮಾಂಡ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದೆ. ಅನಂತ್ ಕುಮಾರ್, ಶಿವಪ್ಪ, ಸದಾನಂದ ಗೌಡ, ರಾಮಚಂದ್ರ ಗೌಡ ಇವರೆಲ್ಲ ಸೇರಿ ಬಿಜೆಪಿ ಕಟ್ಟಿದ್ದಾರೆ. ತಮ್ಮನ್ನು ಹಿಂದು ಹುಲಿ ಎಂದು ಹೇಳಿಕೊಂಡಿರುವ ಯತ್ನಾಳ್, ಹುಲಿಯಲ್ಲ, ಇಲಿ. ಅವರ ಹಿಂದೆ ಕೇವಲ 4-5 ನಾಯಕರಿದ್ದರೆ, ವಿಜಯೇಂದ್ರ ಹಿಂದೆ ಇಡೀ ರಾಜ್ಯದ ಬಿಜೆಪಿಯಿದೆ. ಬಿಜೆಪಿ ಒಳಗೆ ಹಾಗೂ ಹೊರಗೆ ದುಷ್ಟಶಕ್ತಿಗಳ ಕೂಟ ರಚನೆಯಾಗಿದ್ದು ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ ಎಂದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯತ್ನಾಳ್‌ ಅವರು ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಇವರ ಆಟ ನಮ್ಮ ಮುಂದೆ ನಡೆಯುವುದಿಲ್ಲ ಎಂದರು.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಸದಾನಂದಗೌಡರು ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಅಂತವರ ವಿರುದ್ಧವೇ ಯತ್ನಾಳ್ ಮಾತನಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಬೆಂಗಳೂರು: ರಾಜ್ಯ ನಾಯಕರು ಸರಿ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಈಗ ಬಿಜೆಪಿಯಲ್ಲಿದೆ. ತಕ್ಷಣ ವರಿಷ್ಠರು ಮಧ್ಯೆ ಪ್ರವೇಶಿಸಿ ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಏಟು ಬೀಳಲಿದೆ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಮವಾಗಿ ಹೇಳಿದ್ದರು.

ಎರಡೂ ಬಣಗಳು ಬೀದಿಗೆ ಹೋಗಿ ಕೈ ಕೈ ಮಿಲಾಯಿಸಿಕೊಳ್ಳುವ ಬದಲು ವಿಮಾನ ಹತ್ತಿ ದೆಹಲಿಗೆ ಹೋಗಿ ವರಿಷ್ಠರ ಬಳಿ ಮಾತನಾಡಲಿ ಎಂದೂ ತಾಕೀತು ಮಾಡಿದ್ದಾರೆ. ಎರೆಹುಳುಗಳು ನಾಗರಹಾವುಗಳಾಗಿ ಪರಿ ವರ್ತನೆಯಾದ ರೀತಿಯಲ್ಲಿ ಇವತ್ತು ಬಿಜೆಪಿಯಲ್ಲಿ ಹಲವು ನಾಯಕರು ತಮ್ಮ ಶಕ್ತಿ ಇಲ್ಲದಿದ್ದರೂ ಪಕ್ಷಕ್ಕೆ ಧಕ್ಕೆ ಬರುವಂಥ ವಿದ್ಯಮಾನಗಳನ್ನು ನಡೆಸುತ್ತಿರುವುದು ಸರಿಯಲ್ಲ ಎಂದೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಹರಿಹಾಯ್ದಿದ್ದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಸ್ತಿನ ಪ್ರಯೋಗ ಆಗಲೇಬೇಕು. ಅಂದರೆ ಮಾತ್ರ ಪರಿಸ್ಥಿತಿ ಸರಿಯಾಗಲಿದೆ. ಒಂದಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಉಳಿದವರು ಸರಿದಾರಿಗೆ ಬರಲಿದ್ದಾರೆ. ವರಿಷ್ಠರು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌
ಸದನದಲ್ಲಿ ಅಶೋಕ್ ಆರೆಸ್ಸೆಸ್‌ ಬರೆದ ಭಾಷಣ ಓದ್ತಾರೆ-ಸಿಎಂ