ಗಿರೀಶ್ ಗರಗ
ಕನ್ನಡಪ್ರಭ ವಾರ್ತೆ ಬೆಂಗಳೂರುಕೇಂದ್ರ ಸರ್ಕಾರ ಮತ್ತು ಹೈಕೋರ್ಟ್ ಸೂಚನೆ ನಂತರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸುವ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು ದೇಶದ ಇತರ ಪ್ರಮುಖ 5 ನಗರಗಳಲ್ಲಿನ ಬೈಕ್ ಟ್ಯಾಕ್ಸಿ ಸೇವೆ ಮತ್ತು ನಿಯಮಗಳನ್ನು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದು, ಅದನ್ನು ಗುರುವಾರ ಹೈಕೋರ್ಟ್ಗೆ ಸಲ್ಲಿಸಲಿದ್ದಾರೆ.
ಆಟೋ, ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರು ಭಾರೀ ವಿರೋಧದಿಂದಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿತ್ತು. ಈ ಕುರಿತು ಹೈಕೋರ್ಟ್ಗೂ ಅಫಿಡವಿಟ್ ಸಲ್ಲಿಸಿ ಬೈಕ್ ಟ್ಯಾಕ್ಸಿ ಸೇವೆಗೆ ಸೂಕ್ತ ನಿಯಮ ರೂಪಿಸುವುದಿಲ್ಲ ಎಂದು ತಿಳಿಸಿತ್ತು. ಅದಾದ ನಂತರ ಕೇಂದ್ರ ಸರ್ಕಾರ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025ರಲ್ಲಿ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸೂಕ್ತ ನಿಯಮ ರೂಪಿಸಿ ಅನುಮತಿ ನೀಡಬಹುದು ಎಂದು ತಿಳಿಸಲಾಗಿತ್ತು.ಅದರ ಆಧಾರದಲ್ಲಿ ರ್ಯಾಪಿಡೋ, ಉಬರ್, ಒಲಾದಂತಹ ಅಗ್ರಿಗೇಟರ್ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸಿ, ಅನುಮತಿಸುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚಿಸಿ ಬೈಕ್ ಟ್ಯಾಕ್ಸಿ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ಈ ಸಮಿತಿಯ ಅಧಿಕಾರಿಗಳು ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳಿಗೆ ಭೇಟಿ ನೀಡಿ, ಆ ನಗರಗಳಲ್ಲಿ ಚಾಲ್ತಿಯಲ್ಲಿರುವ ಬೈಕ್ ಟ್ಯಾಕ್ಸಿ ಸೇವೆ ಮತ್ತು ಅಲ್ಲಿನ ನಿಯಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಆ ವರದಿಯನ್ನು ಕ್ರೋಢೀಕರಿಸಿ ಸಾರಿಗೆ ಇಲಾಖೆ ಗುರುವಾರ ಹೈಕೋರ್ಟ್ಗೆ ಸಲ್ಲಿಸಲಿದೆ.ಬೈಕ್ ಟ್ಯಾಕ್ಸಿ ಭವಿಷ್ಯ ಗುರುವಾರ ನಿರ್ಧಾರ:
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸರ್ಕಾರ ಅನುಮತಿಸುವ ಕುರಿತು ಗುರುವಾರ ನಿರ್ಧಾರವಾಗಲಿದೆ. 2021ರಲ್ಲಿ ರಚಿಸಲಾಗಿದ್ದ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯ ಅಂಶಗಳನ್ನು ಅಧ್ಯಯನ ನಡೆಸಲಾಗಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಸಾರಿಗೆ ಇಲಾಖೆ ಅಧಿಕಾರಿಗಳೂ ಸೇರಿ ಇನ್ನಿತರ ಅಧಿಕಾರಿಗಳ ತಂಡ ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳಿಗೆ ತೆರಳಿ ಅಲ್ಲಿನ ಬೈಕ್ ಟ್ಯಾಕ್ಸಿ ಸೇವೆಯ ನಿಯಮಗಳನ್ನು ಅಧ್ಯಯನ ನಡೆಸಿವೆ. ಆ ನಗರಗಳ ಬೈಕ್ ಟ್ಯಾಕ್ಸಿ ನಿಯಮಗಳಲ್ಲಿನ ಸಾಧಕ-ಬಾಧಕಗಳ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಈ 5 ನಗರಗಳ ನಿಯಮಗಳ ಮೇಲೆ ನಡೆಸಿರುವ ಅಧ್ಯಯನ ವರದಿಯನ್ನು ಕ್ರೋಢೀಕರಿಸಿ ಗುರುವಾರ ಹೈಕೋರ್ಟ್ಗೆ ಸಲ್ಲಿಸಲಾಗುತ್ತಿದೆ.ಮೂಲಗಳ ಪ್ರಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆಗಳಿವೆ. ಈಗಾಗಲೇ ದೇಶದ 10ಕ್ಕೂ ಹೆಚ್ಚಿನ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಚಾಲ್ತಿಯಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೆಲ ಷರತ್ತುಗಳನ್ನು ವಿಧಿಸಿ, ಬೈಕ್ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿಸುವ ಕುರಿತು ಸಾರಿಗೆ ಇಲಾಖೆ ಚಿಂತನೆಯನ್ನೂ ನಡೆಸಿದೆ.
11 ಮಂದಿಯ ಸಮಿತಿ ರಚಿಸಿದ್ದ ಸರ್ಕಾರ:ಬೈಕ್ ಟ್ಯಾಕ್ಸಿ ಸೇವೆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಕಳೆದ ಕೆಲದಿನಗಳ ಹಿಂದೆ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್ ನೇತೃತ್ವದಲ್ಲಿ 11 ಜನರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅದರಲ್ಲಿ ನಗರ ಭೂ-ಸಾರಿಗೆ ನಿರ್ದೇಶನಾಲಯ, ಕಾರ್ಮಿಕ ಇಲಾಖೆ, ಬಿಎಂಟಿಸಿ, ಸಂಚಾರ ಪೊಲೀಸ್ ಅಧಿಕಾರಗಳನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಈ ಸಮಿತಿ ಇದೀಗ ವರದಿ ಸಿದ್ಧಪಡಿಸಿ, ಗುರುವಾರ ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ.
ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳಲ್ಲಿನ ಬೈಕ್ ಟ್ಯಾಕ್ಸಿ ಸೇವೆಗಳ ನಿಯಮ ಕುರಿತು ಅಧ್ಯಯನ ಮಾಡಲಾಗಿದೆ. ಅಲ್ಲಿನ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ. ಬೈಕ್ ಟ್ಯಾಕ್ಸಿ ಸೇವೆ ಕುರಿತು ಸಾರಿಗೆ ಇಲಾಖೆ ನಿಲುವು ಮತ್ತು ಅಧ್ಯಯನ ವರದಿಯನ್ನು ಗುರುವಾರ ಹೈಕೋರ್ಟ್ಗೆ ಸಲ್ಲಿಸಲಾಗುವುದು- ಎ.ಎಂ. ಯೋಗೀಶ್, ಸಾರಿಗೆ ಆಯುಕ್ತ.