ಕನ್ನಡಪ್ರಭ ವಾರ್ತೆ ಯಲಹಂಕ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವುದರ ಬದಲಿಗೆ ಯುವ ನಾಯಕ ಅಲೋಕ್ ವಿಶ್ವನಾಥ್ ಅವರಿಗೆ ನೀಡಬೇಕೆಂದು ಚಿಕ್ಕಬಳ್ಳಾಪುರ ಬಿಜೆಪಿ ಮುಖಂಡರು ಒಕ್ಕೂರಲಿನಿಂದ ಬಿಜೆಪಿ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ಯಲಹಂಕದ ಸಿಂಗನಾಯಕನ ಹಳ್ಳಿಯ ಶಾಸಕರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ದೊಡ್ಡಬಳ್ಳಾಪುರ ಶಾಸಕ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಗೌರಿಬಿದನೂರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವಿ ನಾರಾಯಣರೆಡ್ಡಿ, ಬಿಜೆಪಿ ಮುಖಂಡ ಡಾ। ಶಶಿಧರ್, ಬೆಂ.ನಗರ ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿರಾಜು, ಬಿಜೆಪಿ ಮುಖಂಡ ಮಲ್ಲಣ್ಣ, ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್, ಕಡತನಮಲೆ, ಎಚ್.ಬಿ.ಹನುಮಯ್ಯ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಎಸ್.ಜಿ.ನರಸಿಂಹ ಮೂರ್ತಿ(ಎಸ್ಟಿಡಿ ಮೂರ್ತಿ), ಎಸ್.ಜಿ.ಪ್ರಶಾಂತ್ ರೆಡ್ಡಿ, ಅದ್ದೆ ವಿಶ್ವನಾಥಪುರ ಮಂಜುನಾಥ್ ಇನ್ನಿತರರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇದುವರೆಗೂ ನಡೆಸಿರುವ ಎಲ್ಲಾ ಸಮೀಕ್ಷೆಗಳಲ್ಲೂ ಅಲೋಕ್ ವಿಶ್ವನಾಥ್ ಗೆಲುವಿನ ಮುಂಚೂಣಿ ಅಭ್ಯರ್ಥಿ ಎಂಬುದು ವ್ಯಕ್ತವಾಗಿದೆ ಎಂದು ಹೇಳಿದರು.
ಗೆಲ್ಲುವ ಅಭ್ಯರ್ಥಿಯನ್ನು ಬಿಟ್ಟು ಕ್ಷೇತ್ರದಲ್ಲಿ ವರ್ಚಸ್ಸು ಕಳೆದು ಕೊಂಡಿರುವ ವ್ಯಕ್ತಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದು, ಇದಕ್ಕೆ ಇಂಬು ನೀಡುವಂತೆ ಅಲೋಕ್ ವಿಶ್ವನಾಥ್ ಅವರ ಹೊರತಾದ ವ್ಯಕ್ತಿಯ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.
ಬಿಜೆಪಿ ಹೈಕಮಾಂಡ್ ನಾಯಕರು ಈ ಕೂಡಲೇ ಜಾಗೃತರಾಗಿ ಗೆಲ್ಲುವ ಅಭ್ಯರ್ಥಿ ಎಂದೇ ಕ್ಷೇತ್ರದಲ್ಲಿ ಮನೆ ಮಾತಾಗಿರುವ, ಯುವಕರಿಗೆ ಆದ್ಯತೆ ನೀಡುವ ದಿಸೆಯಲ್ಲಿ ಅಲೋಕ್ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಟಿಕೆಟ್ ನೀಡುವ ಸಂಬಂಧ ಪಕ್ಷದ ಹಿರಿಯರಿಗೂ ನಾನು ಪತ್ರ ಬರೆದಿದ್ದೇನೆ. ಪತ್ರಿಕಾಗೋಷ್ಠಿಗೆ ಹೋಗಬಾರದು, ಸಭೆಗಳಲ್ಲಿ ಭಾಗವಹಿಸಬಾರದು ಅಂತೆಲ್ಲ ಕೆಲವರಿಗೆ ಪೋನ್ ಮೂಲಕ ಧಮಕಿ ಹಾಕಿದ್ದಾರೆ. ಪಕ್ಷದ ಬೆಳವಣಿಗೆ ವಿಚಾರವಾಗಿ ಇದೆಲ್ಲ ಒಳ್ಳೆಯದಲ್ಲ.-ಎಸ್.ಆರ್.ವಿಶ್ವನಾಥ್, ಯಲಹಂಕ ಶಾಸಕ.