ನವದೆಹಲಿ: ದೇಶದಲ್ಲಿನ ಯುವಜನತೆಯ ಅಭಿವೃದ್ಧಿಗಾಗಿ ‘ಮೇರಾ ಯುವ ಭಾರತ್’ (ಎಂವೈ ಭಾರತ್) ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪನೆ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಅ.31ರಂದು ಈ ವೇದಿಕೆಯನ್ನು ಜಾರಿ ಮಾಡಲಾಗುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಠಾಕೂರ್, ‘ಯುವಕರ ಅಭಿವೃದ್ಧಿಗಾಗಿ ಇಡೀ ಸರ್ಕಾರದ ಒಂದು ವೇದಿಕೆಯನ್ನು ಸ್ಥಾಪಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು. ಹೊಸ ವ್ಯವಸ್ಥೆಯಲ್ಲಿ ಸಂಪನ್ಮೂಲಗಳು ಮತ್ತು ಅವಕಾಶಗಳೊಂದಿಗೆ ಯುವಕರು ತೆರೆದುಕೊಳ್ಳಲಿದ್ದಾರೆ. ಈ ವೇದಿಕೆ ಸರ್ಕಾರ ಮತ್ತು ಯುವಕರ ನಡುವಿನ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು. ಅಮೃತಕಾಲದಲ್ಲಿ ಯುವಕರಲ್ಲಿ ಕರ್ತವ್ಯದ ಪ್ರಜ್ಞೆ ಮತ್ತು ಸೇವಾ ಪ್ರಜ್ಞೆಯನ್ನು ಬೆಳೆಸಲು ಇದು ಅನುಕೂಲ ಒದಗಿಸಲಿದೆ. 15ರಿಂದ 29 ವರ್ಷದ ಯುವಕರು ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇದು ಸಹಾಯ ಮಾಡಲಿದೆ. ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದು ಅವರಿಗೆ ನೆರವು ನೀಡಲಿದೆ ಎಂದು ಅವರು ಹೇಳಿದ್ದಾರೆ.