ಎಚ್ಡಿಕೆ ಗೃಹ, ವಾಣಿಜ್ಯಕ್ಕೆ ನಿವೇಶನ ಪಡೆದಿಲ್ಲ, ಉದ್ಯಮಕ್ಕೆ: ಸಾ.ರಾ. ಮಹೇಶ್

KannadaprabhaNewsNetwork |  
Published : Jul 25, 2024, 01:19 AM IST
5 | Kannada Prabha

ಸಾರಾಂಶ

ಸಿನಿಮಾ ರಂಗ ಒಂದು ಉದ್ಯಮವಲ್ಲವೇ? ಕುಮಾರಸ್ವಾಮಿ ಅವರು ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಎಂಡಿಎ ಹಗರಣ ಬೆಳಕಿಗೆ ಬಂದ ಬಳಿಕ ಸಾರ್ವಜನಿಕರ ಯಾವುದೇ ಕೆಲಸ ಕೂಡ ಅಲ್ಲಿ ಆಗುತ್ತಿಲ್ಲ. ಆದ್ದರಿಂದ ಈ ಸಂಬಂಧ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಾಣಿಜ್ಯ ಅಥವಾ ಗೃಹ ನಿವೇಶನವನ್ನು ಎಂಡಿಎ ವತಿಯಿಂದ ಪಡೆದಿಲ್ಲ. ಉದ್ಯಮ ಸ್ಥಾಪನೆಗೆ ಹಣ ಪಾವತಿಸಿ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಜೆಡಿಎಸ್ ಕಾರ್ಯಾದ್ಯಕ್ಷರೂ ಆದ ಮಾಜಿ ಸಚಿವ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1985 ರಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಹಣ ಪಾವತಿಸಿ ನಿವೇಶನ ಪಡೆದಿದ್ದಾರೆ. ಈ ವಿಷಯದಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ ನಿರಾಧಾರ. ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತದಲ್ಲಿ ನಿವೇಶನ ಪಡೆದುಕೊಂಡಿದ್ದರು. ಅದಕ್ಕೆ ಅವರು 37,334 ರೂ. ಪಾವತಿಸಿದ್ದರು. ಬಳಿಕ ಉದ್ಯಮ ಸ್ಥಾಪನೆಗೆ ನಿವೇಶನದ ಬಳಿ ಹೋದಾಗ ಒತ್ತುವರಿಯಾಗಿತ್ತು. ಈ ವಿಷಯವನ್ನು ಎಂಡಿಎ ಗಮನಕ್ಕೆ ತಂದಾಗ ಅವರು ಪರಿಶೀಲಿಸಿ ಇದಕ್ಕೆ ಬದಲಿ ನಿವೇಶನ ನೀಡಬೇಕು ಎಂದು ಶಿಫಾರಸ್ಸು ಮಾಡಿದ್ದಾಗಿ ಹೇಳಿದರು.

ಈ ವಿಷಯ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆಗೊಂಡಿದೆ. ಆದರೂ ಈವರೆಗೂ ಕುಮಾರಸ್ವಾಮಿ ಅವರಿಗೆ ಬದಲಿ ನಿವೇಶನ ನೀಡಿಲ್ಲ. ಅಲ್ಲದೇ ಅವರು ನಿವೇಶನಕ್ಕಾಗಿ ಪಾವತಿಸಿರುವ ಹಣ ಕೂಡ ಅಷ್ಟು ವರ್ಷದಿಂದಲೂ ಪ್ರಾಧಿಕಾರದ ಬಳಿಯೇ ಇದೆ ಎಂದು ಅವರು ವಿವರಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ತಮ್ಮ ಪ್ರಭಾವ ಬಳಸಿಕೊಂಡು ನಿವೇಶನ ಪಡೆದುಕೊಂಡಿಲ್ಲ. ಅವರ ಕುಟುಂಬದ ಯಾವ ಸದಸ್ಯರಿಗೂ ನಿವೇಶನ ಕೊಡಿಸಿಲ್ಲ. ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡಬಾರದು ಎಂದರು.

ಸಿನಿಮಾ ರಂಗ ಒಂದು ಉದ್ಯಮವಲ್ಲವೇ? ಕುಮಾರಸ್ವಾಮಿ ಅವರು ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಎಂಡಿಎ ಹಗರಣ ಬೆಳಕಿಗೆ ಬಂದ ಬಳಿಕ ಸಾರ್ವಜನಿಕರ ಯಾವುದೇ ಕೆಲಸ ಕೂಡ ಅಲ್ಲಿ ಆಗುತ್ತಿಲ್ಲ. ಆದ್ದರಿಂದ ಈ ಸಂಬಂಧ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಆರ್ಟಿಐ (ಮಾಹಿತಿ ಹಕ್ಕು ಕಾಯ್ದೆ) ಕಾರ್ಯಕರ್ತ ಎನ್ನುವುದು ಒಂದು ಹುದ್ದೆಯಲ್ಲ. ಸಾಮಾನ್ಯ ಜನರು ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದು. ಪ್ರಾಮಾಣಿಕವಾಗಿ ಸತ್ಯ ಬಯಲಿಗೆ ಎಳೆಯಲು ಹೋರಾಟ ಮಾಡುವವರಿಗೆ ನಮ್ಮ ಬೆಂಬಲವಿದೆ. ಆದರೆ ಅದನ್ನೇ ಕಸುಬು ಮಾಡಿಕೊಂಡು, ಜೀವನ ಸಾಗಿಸುತ್ತಿರುವವರಿಗೆ ನಮ್ಮ ವಿರೋಧವಿದೆ. ಪದೇ-ಪದೇ ಆರ್ಟಿಐ ಅಡಿಯಲ್ಲಿ ಅರ್ಜಿ ಹಾಕಿ, ಅವುಗಳನ್ನು ಮೇಲಿಂದ ಮೇಲೆ ವಾಪಸ್ ತಗೆದುಕೊಳ್ಳುವವರನ್ನು ಪೊಲೀಸ್ ತನಿಖೆಗೆ ಒಳಪಡಿಸಬೇಕು ಹಾಗೂ ಅವರ ಜೀವನಮಟ್ಟವನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.

ರೈತರನ್ನು ಶಿಕ್ಷಿಸಬೇಡಿ:

ನಾಲೆಗಳಿಂದ ಅನಧಿಕೃತವಾಗಿ ನೀರೆತ್ತುವವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ವಿಧೇಯಕವನ್ನು ಕಾಯ್ದೆಯಾಗಿ ಜಾರಿಗೆ ತರಬಾರದು. ನಾಲೆ ಅಥವಾ ಕಾಲುವೆ ಕೊನೆಯಲ್ಲಿ ಇರುವ ರೈತರಿಗೆ ಯಾವ ಕಾಲದಲ್ಲೂ ಸರಿಯಾಗಿ ನೀರೇ ಸಿಗುವುದಿಲ್ಲ. ಇಂತಹ ಗಂಭೀರ ಸಮಸ್ಯೆ ಪರಿಹಾರ ಮಾಡುವುದನ್ನು ಬಿಟ್ಟು ಸರ್ಕಾರ ಈ ರೀತಿಯ ಕಾನೂನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ವಕ್ತಾರ ಎನ್.ಆರ್. ರವಿಚಂದ್ರೇಗೌಡ, ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಎಸ್ಬಿಎಂ ಮಂಜು, ಪ್ರೇಮಾ ಶಂಕರೇಗೌಡ ಮೊದಲಾದವರು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌