;Resize=(412,232))
ಬೆಂಗಳೂರು : ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ನನ್ನ ವಿರುದ್ಧವೂ ಆಗಲಿ. ಆದರೆ, ಕ್ರಮ ಕೈಗೊಳ್ಳಲು ರೀತಿ ನೀತಿ ಇದೆ. ನೋಟಿಸ್ ನೀಡಿ ವಿವರಣೆ ಪಡೆದು ಬಳಿಕ ಕ್ರಮ ಆಗಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಗುರುವಾರ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರವಾಗಿ ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಇದೇ ವೇಳೆ, ಮುಸ್ಲಿಂ ಧರ್ಮಗುರುಗಳಿಗೆ ಬೇಸರ ಆಗಿರುವುದು ನಿಜ. ದಾವಣೆಗೆರೆ ದಕ್ಷಿಣದ ಟಿಕೆಟ್ ಕೊಟ್ಟಿಲ್ಲ ಎಂದು ಸಮುದಾಯಕ್ಕೆ ಅಸಮಾಧಾನ ಆಗಿದೆ. ಧರ್ಮಗುರುಗಳ ಬಳಿ ಶುಕ್ರವಾರ ನಮಾಜ್ ಬಳಿಕ ಮಾತನಾಡಿ ಬಗೆಹರಿಸುತ್ತೇನೆ ಎಂದೂ ಹೇಳಿದರು. ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಅಗಿದೆ ಎಂದು ಬೇಸರ ಅಗಿರುವುದು ನಿಜ. ಅದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆ ನೀಡಲಾಗಿದೆ ಎಂದರು.
ನಾನೊಬ್ಬ ಜನಸೇವಕ ಅಷ್ಟೇ
ಪಕ್ಷದಲ್ಲಿ ನಾನೊಬ್ಬನೇ ಮುಸ್ಲಿಂ ನಾಯಕ ಇಲ್ಲ. ನಾನೊಬ್ಬ ಜನಸೇವಕ ಅಷ್ಟೇ. ನನ್ನ ವಿರುದ್ಧ ಯಾರೂ ಹೆಸರು ಹೇಳಿ ನಮ್ಮ ಪಕ್ಷದಲ್ಲಿ ಆರೋಪ ಮಾಡಿಲ್ಲ. ಧರ್ಮಗುರುಗಳು ಏನು ಹೇಳಿದರು? ಯಾಕೆ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಅದನ್ನು ನೀವು ಅವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.