ದಕ್ಷಿಣ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ ನಾಮಪತ್ರ ಮಾನ್ಯ, 14 ತಿರಸ್ಕೃತ

KannadaprabhaNewsNetwork |  
Published : Apr 07, 2024, 01:47 AM ISTUpdated : Apr 07, 2024, 05:00 AM IST
ಚುನಾವಣೆ | Kannada Prabha

ಸಾರಾಂಶ

  14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ವೇಳೆ  ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 24 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿವೆ.  

 ಬೆಂಗಳೂರು :  ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ವೇಳೆ ಬಾಕಿ ಇದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 24 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 358 ಅಭ್ಯರ್ಥಿಗಳ ಪೈಕಿ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಇನ್ನುಳಿದ ಅಭ್ಯರ್ಥಿಗಳ ನಾಮಪತ್ರ ಅಮಾನ್ಯಗೊಂಡಿವೆ.

ಶುಕ್ರವಾರ 13 ಲೋಕಸಭಾ ಕ್ಷೇತ್ರಗಳ ಉಮೇದುವಾರಿಕೆ ಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರ ಪರಿಶೀಲನೆ ಕಾರ್ಯ ಶುಕ್ರವಾರ ತಡರಾತ್ರಿಯಾದರೂ ಮುಕ್ತಾಯಗೊಳ್ಳದ ಕಾರಣ ಶನಿವಾರ ಪೂರ್ಣಗೊಳಿಸಲಾಯಿತು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 34 ಅಭ್ಯರ್ಥಿಗಳ 49 ನಾಮಪತ್ರಗಳ ಪೈಕಿ 35 ನಾಮಪತ್ರಗಳು ಪುರಸ್ಕೃತವಾಗಿದ್ದು, 14 ನಾಮಪತ್ರಗಳು ತಿರಸ್ಕೃತಗೊಂಡಿವೆ. 24 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.

ರಾಜ್ಯದಲ್ಲಿ ಒಟ್ಟಾರೆ 358 ಅಭ್ಯರ್ಥಿಗಳು 492 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದರು. ಈ ಪೈಕಿ ಶುಕ್ರವಾರ 276 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. 384 ನಾಮಪತ್ರಗಳು ಸ್ವೀಕೃತಗೊಂಡಿದ್ದರೆ, 60 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಶನಿವಾರ ನಾಮಪತ್ರ ಪರಿಶೀಲನೆ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಾಗ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 419 ನಾಮಪತ್ರಗಳು ಪುರಸ್ಕೃತಗೊಂಡಿದ್ದು, 74 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ಸೋಮವಾರ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಸಂಜೆಯ ಬಳಿಕ ರಾಜ್ಯದ ಮೊದಲ ಹಂತದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ನಿಖರವಾಗಿ ತಿಳಿದುಬರಲಿದೆ. ಇದೇ ತಿಂಗಳು 26ರಂದು ಮತದಾನ ನಡೆಯಲಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಚಾಟ್‌ ಜಿಪಿಟಿಯಲ್ಲಿ ಐದು ಪ್ರಶ್ನೆ ಕೇಳಿದರೆ 500 ಲೀ. ನೀರು ಬಳಕೆ
ಕಾರಂತ ಬಡಾವಣೆ ರೈತರಿಗೆ ನಿವೇಶನ ನೀಡಲು ಕ್ರಮ: ಡಿ.ಕೆ.ಶಿವಕುಮಾರ್‌ ಭರವಸೆ