ಒಂದು ದೇಶ, ಒಂದು ಚುನಾವಣೆ ಪದ್ಧತಿ ಅನುಷ್ಠಾನದಿಂದ ಭಾರತ ದೇಶದ ವಿಕಾಸಕ್ಕೆ ವೇಗ ದೊರಕಲಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಕಲಬುರಗಿ : ಒಂದು ದೇಶ, ಒಂದು ಚುನಾವಣೆ ಪದ್ಧತಿ ಅನುಷ್ಠಾನದಿಂದ ಭಾರತ ದೇಶದ ವಿಕಾಸಕ್ಕೆ ವೇಗ ದೊರಕಲಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂ ಬಳಿಯ ಬೀರನಹಳ್ಳಿಯ 240 ಎಕರೆ ವಿಶಾಲ ಭೂಪ್ರದೇಶದಲ್ಲಿ ಬುಧವಾರದಿಂದ 9 ದಿನ ನಡೆಯಲಿರುವ ಭಾರತ ಸಾಂಸ್ಕೃತಿ ಉತ್ಸವ- 7 ಹಾಗೂ ಕೊತ್ತಲ ಸ್ವರ್ಣ ಜಯಂತಿ ಸಂಭ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಒಂದು ದೇಶ, ಒಂದು ಚುನಾವಣೆ ಪದ್ಧತಿ ನಮ್ಮ ದೇಶಕ್ಕೆ ಅಗತ್ಯವಾಗಿದೆ. ಇಲ್ಲಿನ ಅನೇಕ ಸಂಗತಿಗಳನ್ನು ಅಧ್ಯಯನ ಮಾಡಿಯೇ ತಮ್ಮ ನೇತೃತ್ವದಲ್ಲಿ 18,524 ಪುಟಗಳ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು. ಲೋಕಸಭೆ ಹಾಗೂ ರಾಜ್ಯದ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಅನ್ನೋದೇ ಈ ಯೋಜನೆಯ ಮೂಲ ಉದ್ದೇಶ. ಇದರಿಂದ ಸಾಕಷ್ಟು ಸುಧಾರಣೆ ಸಾಧ್ಯ ಎಂದರು.
ದೇಶದಲ್ಲೀಗ ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಲಾಗುತ್ತದೆ. ಚುನಾವಣೆ ಕೆಲಸಕ್ಕೆ ಶಿಕ್ಷಕರನ್ನು ಪದೇ ಪದೇ ಬಳಸೋದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬರುತ್ತಿದೆ. ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲವೆಂಬ ದೂರುಗಳು ನಾವೇ ಹೇಳುತ್ತೇವೆ. ಚುನಾವಣೆ ಪದ್ಧತಿಯಲ್ಲಿಯೇ ಅಮೂಲಾಗ್ರ ಬದಲಾವಣೆ ಆದಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.
ಲೋಕಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗೆ ಚುನಾವಣೆಗಳು ನಡೆಸಬೇಕು. ನಂತರ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ ಮುಗಿಸಬೇಕು. ಈಗಾಗಲೇ ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನಿವೃತ್ತ ನ್ಯಾಯಮೂರ್ತಿಗಳು ಸೇರಿ ಅನೇಕ ಕ್ಷೇತ್ರಗಳ ಪರಿಣಿತರು ಇದಕ್ಕೆ ಸಹಮತಿಸಿದ್ದಾರೆ. ದೇಶಾದ್ಯಂತ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಿ ಎಂದರು.