ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಬಹಿರಂಗ ಸಮಾವೇಶ ಭರ್ಜರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಪರ ಘೋಣೆಗಳು ಮುಗಿಲು ಮುಟ್ಟಿದವು. ಕೇಸರಿ ಶಾಲು, ಕೇಸರಿ ಧ್ವಜಗಳು ರಾರಾಜಿಸಿದವು. ಜೈಶ್ರೀರಾಮ್, ಮತ್ತೊಮ್ಮೆ ಮೋದಿ ಘೋಷಣೆ ಕಾರ್ಯಕ್ರಮದ ಉದ್ದಕ್ಕೂ ಮಾರ್ದನಿಸಿತು.
ಅರಮನೆ ಮೈದಾನದಲ್ಲಿ ವಿಜಯ ಸಂಕಲ್ಪ ಹೆಸರಿನಲ್ಲಿ ಆಯೋಜಿಸಿದ್ದ ಈ ಬೃಹತ್ ಸಮಾವೇಶವು ಭಾರೀ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳಿಂದ ಭರ್ತಿಯಾಗಿತ್ತು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು.
‘ಬೆಂಗಳೂರಿನ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು. ತಾಯಿ ಭುವನೇಶ್ವರಿ, ತಾಯಿ ಅಣ್ಣಮ್ಮ, ದೇವಿ ಬನಶಂಕರಿ, ದೊಡ್ಡ ಗಣಪತಿ, ದೊಡ್ಡ ಬಸವಣ್ಣ ಚರಣಗಳಿಗೆ ಪ್ರಣಾಮಗಳು’ ಎಂದು ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು ಕೊನೆಯಲ್ಲಿ ‘ನೀವು ಒಂದು ನನ್ನ ಕೆಲಸ ಮಾಡಬೇಕು. ಇದು ವೈಯಕ್ತಿಕ ಕೆಲಸ. ಎಲ್ಲರೂ ನಿಮ್ಮ ಕ್ಷೇತ್ರದ ವ್ಯಾಪ್ತಿಯ ಮನೆ ಮನೆಗೆ ತೆರಳಿ ನನ್ನ ನಮಸ್ಕಾರಗಳನ್ನು ತಿಳಿಸಿ’ ಎಂದು ಮನವಿ ಮಾಡಿದರು.
ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ:
ಬೆಳಗ್ಗೆಯಿಂದಲೇ ಖಾಸಗಿ ಬಸ್ಗಳು, ಟೆಂಪೋ ಟ್ರಾವೆಲರ್ಗಳು, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪತಂಡವಾಗಿ ಕಾರ್ಯಕರ್ತರು ಅರಮನೆ ಮೈದಾನದತ್ತ ಧಾವಿಸಿದರು. ಮಧ್ಯಾಹ್ನದ ಬಳಿಕ ಕಾರ್ಯಕರ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಯಿತು. ಚಿಕ್ಕಬಳ್ಳಾಪುರದಲ್ಲಿ ನಡೆದ ಬಹಿರಂಗ ಸಮಾವೇಶ ಮುಗಿಸಿಕೊಂಡು ಪ್ರಧಾನಿ ಮೋದಿ ಅರಮನೆ ಮೈದಾನದ ಸಮಾವೇಶಕ್ಕೆ ಆಗಮಿಸಿದರು. ಈ ವೇಳೆಗೆ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ತುಂಬಿದ್ದರು.
ಮೋದಿ ಕಂಡು ಕಾರ್ಯಕರ್ತರು ಪುಳಕಿತ:
ಜೈ ಮೋದಿ, ಮತ್ತೊಮ್ಮೆ ಮೋದಿ, ಜೈ ಶ್ರೀರಾಮ್ ಘೋಷಣೆಗಳು ಸಮಾವೇಶದುದ್ದಕ್ಕೂ ಮಾರ್ದನಿಸಿದವು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಲು ಎದ್ದು ನಿಂತಾಗ ಕೆಲ ಕಾಲ ಘೋಷಣೆಗಳ ಮಳೆ ಸುರಿಯಿತು. ಅದರಲ್ಲೂ ಪ್ರಧಾನಿ ಮೋದಿ ಅವರು ವೇದಿಕೆಯಲ್ಲಿ ನಿಂತು ಕಾರ್ಯಕರ್ತರತ್ತ ಕೈ ಬೀಸಿದಾಗ ಸಭಾಂಗಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪುಳಕಿತರು. ಜೈ ಶ್ರೀರಾಮ್, ಜೈ ಮೋದಿ ಘೋಷಣೆ ಕೂಗುತ್ತಾ ಕೆಲ ಕಾಲ ಭಾವಪರವಶತೆಗೆ ಒಳಗಾದರು.
ಬಿಗಿ ಪೊಲೀಸ್ ಬಂದೋಬಸ್ತ್:
ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ ಸೇರಿದಂತೆ ಅರಮನೆ ಮೈದಾನದ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾನೆಯಿಂದಲೇ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನು ಲೋಹ ಪತ್ತೆ ಶೋಧಕದಲ್ಲಿ ಪರಿಶೀಲಿಸಿ ಸಭಾಂಗಣಕ್ಕೆ ಪ್ರವೇಶ ಕಲ್ಪಿಸಿದರು. ಅಂತೆಯೇ ಪ್ರಧಾನಿ ಮೋದಿ ಮೈದಾನ ಪ್ರವೇಶಿಸುವ ದ್ವಾರದ ಬಳಿ ಭಾರೀ ಕಟ್ಟೆಚ್ಚರ ವಹಿಸಿದ್ದರು.
ಮೋದಿ ಆಗಮನಕ್ಕಾಗಿ ಕಾದ ಗಣ್ಯರು
ಅರಮನೆ ಮೈದಾನದಲ್ಲಿ ಸಂಜೆ 5.30ಕ್ಕೆ ಬಹಿರಂಗ ಸಮಾವೇಶ ನಿಗದಿಯಾಗಿತ್ತು. ಹೀಗಾಗಿ ಮಧ್ಯಾಹ್ನದಿಂದಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸೇರಿದಂತೆ ಸ್ಥಳೀಯರು ಶಾಸಕರು, ಮುಖಂಡರು ವೇದಿಕೆಯಲ್ಲಿ ಬೀಡುಬಿಟ್ಟಿದ್ದರು. ಸಂಜೆ 5.5ಕ್ಕೆ ಸರಿಯಾಗಿ ಪ್ರಧಾನಿ ಮೋದಿ ಅವರು ಚಿಕ್ಕಬಳ್ಳಾಪುರದಿಂದ ಅರಮನೆ ಮೈದಾನದ ಸಮಾವೇಶದ ವೇದಿಕೆ ಆಗಮಿಸಿದರು. ಈ ವೇಳೆ ಇಡೀ ಸಭಾಂಗಣದಲ್ಲಿ ಮೋದಿ ಪರ ಘೋಷಣೆ ಜತೆಗೆ ಹರ್ಷೋದ್ಘಾರವಾಯಿತು.
ಮೋದಿಗೆ ‘ಕರಗದ ಶಾಲು’ ನೀಡಿ ಗೌರವ
ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕರಗದ ಶಾಲು ಹೊದಿಸಿ, ಶ್ರೀರಾಮನ ವಿಗ್ರಹ ನೀಡಿ ಗೌರವಿಸಲಾಯಿತು. ಇದೇ ವೇಳೆ ನಾರಿಶಕ್ತಿ ಹೆಸರಿನಲ್ಲಿ ಕೆಲ ಮಹಿಳೆಯರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು. ಈ ವೇಳೆ ವೇದಿಕೆಯ ಮೇಲಿದ್ದ ನಾಯಕರು ಹಾಗೂ ಮುಖಂಡರು ಪ್ರಧಾನಿ ಮೋದಿ ಜತೆಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.
ಸಂಚಾರ ದಟ್ಟಣೆ: ಸವಾರರಿಗೆ ಕಿರಿಕಿರಿ
ಅರಮನೆ ಮೈದಾನದಲ್ಲಿ ಬಿಜೆಪಿ ಬಹಿರಂಗ ಸಮಾವೇಶ ನಡೆದ ಹಿನ್ನೆಲೆಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನದಿಂದಲೇ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದರಾದರೂ ಬಳ್ಳಾರಿ ರಸ್ತೆ, ಸದಾಶಿವನಗರ, ಆರ್.ಟಿ.ನಗರ. ಜೆ.ಸಿ.ನಗರ, ಹೆಬ್ಬಾಳ, ಕಾವೇರಿ ಜಂಕ್ಷನ್ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ ಪರಿಣಾಮ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ಸಂಜೆ ಸಮಾವೇಶ ಮುಗಿದ ಬಳಿಕ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಹೊರಗೆ ಬಂದಿದ್ದರಿಂದ ಸಂಚಾರ ದಟ್ಟಣೆ ತುಸು ಹೆಚ್ಚೇ ಇತ್ತು.