ಕಾವೇರಿಗಾಗಿ 13ಕ್ಕೆ ಕರ್ನಾಟಕ ಬಂದ್‌

Published : Aug 01, 2026, 04:53 AM IST
Vatal Nagaraj

ಸಾರಾಂಶ

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶ ವಿರೋಧಿಸಿ ಆ.13ರಂದು ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟ ಕರೆ ನೀಡಿದೆ.

ಬೆಂಗಳೂರು :  ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶ ವಿರೋಧಿಸಿ ಆ.13ರಂದು ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟ ಕರೆ ನೀಡಿದೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅಧ್ಯಕ್ಷತೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕರ್ನಾಟಕ ಬಂದ್‌ ಕುರಿತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ನಾಗರಾಜ್‌, ಕಾವೇರಿಯಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್‌ ನೀರು (ಒಟ್ಟು ಸುಮಾರು 4.5 ಟಿಎಂಸಿ) ಬಿಡುಗಡೆ ಮಾಡುವಂತೆ ನೀಡಿರುವ ಆದೇಶ ಖಂಡನೀಯ. ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ನೀಡಿರುವ ಆದೇಶ ಖಂಡಿಸಿ ‘ಕರ್ನಾಟಕ ಬಂದ್‌’ಗೆ ತೀರ್ಮಾನ ಕೈಗೊಂಡಿದ್ದೇವೆ. ಆ.13ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ರಾಜ್ಯವ್ಯಾಪಿ ಬಂದ್‌ ನಡೆಯಲಿದೆ ಎಂದು ಹೇಳಿದರು.

ನಗರದಲ್ಲಿ ಬೃಹತ್‌ ರ್‍ಯಾಲಿ:

ಅಂದು ಬೆಳಗ್ಗೆ 11ಕ್ಕೆ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ರ್‍ಯಾಲಿ ನಡೆಸಲಾಗುವುದು. ಇದರಲ್ಲಿ ಕನ್ನಡಪರ ಸಂಘಟನೆಗಳು, ಆಟೋ ಚಾಲಕರ ಸಂಘಗಳು, ಬೀದಿಬದಿ ವ್ಯಾಪಾರಿಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿ ನೂರಾರು ಸಂಘಟನೆಗಳು ಬಂದ್‌ ಬೆಂಬಲಿಸಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಬಂದ್‌ ದಿನದಂದು ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ಆಸ್ಪತ್ರೆ, ಔಷಧ, ಹಾಲು, ತರಕಾರಿ ಇತ್ಯಾದಿಗಳ ಮಾರಾಟ, ಸರಬರಾಜು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ, ವಹಿವಾಟು ಬಂದ್‌ ಆಗಲಿದೆ. ಅಖಂಡ ಕರ್ನಾಟಕದ ಜನತೆ ಇದಕ್ಕೆ ಸಹಕರಿಸಬೇಕು. ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಮತ್ತು ನಾವು ಸ್ನೇಹಿತರು. ಅವರು ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಬಂದ್‌ ಬೆಂಬಲಿಸುವಂತೆ ಅಭಿಯಾನ:

ಹಿರಿಯ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ ಚಲನಚಿತ್ರ ಮಂಡಳಿ, ಹೋಟೆಲ್‌ ಮಾಲೀಕರ ಸಂಘ, ಆಟೋ ಚಾಲಕರು, ಕನ್ನಡಪರ ಹೋರಾಟಗಾರರು ಸೇರಿ ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಲಿವೆ. ಈ ಬಗ್ಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಡ್ಯ, ಬೆಳಗಾವಿ, ದಾವಣಗೆರೆ, ಕೋಲಾರ, ತುಮಕೂರು ಸೇರಿ ಎಲ್ಲೆಡೆ ಹೋಗಿ ಬಂದ್‌ ಬೆಂಬಲಿಸುವಂತೆ ಅಭಿಯಾನ ನಡೆಸುತ್ತೇವೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದನ್ನು ಸ್ವಾಗತಿಸುತ್ತೇವೆ. ರೈತರ ಹಿತ ಕಾಪಾಡುವುದು ಅಗತ್ಯ. ಇದೇ ನಿಲುವನ್ನು ಸರ್ವ ಪಕ್ಷಗಳ ಸಭೆಯಲ್ಲೂ ತೆಗೆದುಕೊಳ್ಳಬೇಕು. ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶದ ವಿರುದ್ಧ. ಮೇಲ್ಮನವಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ, ವಾಸ್ತವಾಂಶ ತಿಳಿದು ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ, ಪ್ರಾಧಿಕಾರ ಕಣ್ಣುಮುಚ್ಚಿಕೊಂಡು ಆದೇಶ ನೀಡಿರುವುದು ಖಂಡನೀಯ. ಅದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.

ಬಂದ್‌ಗೆ ಸಹಕಾರ ಬೇಕು-ಪ್ರವೀಣ್‌ ಶೆಟ್ಟಿ:

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ಮಾತನಾಡಿ, ಜಲಾಶಯಗಳಿಗೆ ಸಮರ್ಪಕ ನೀರಿನ ಹರಿವು ಇಲ್ಲದಿರುವುದು, ಕುಡಿಯುವ ನೀರು ಹಾಗೂ ನೀರಾವರಿಗೆ ತೊಂದರೆಯಾಗುವ ಆತಂಕದ ನಡುವೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ರೈತರು ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ರಾಜ್ಯದ ಜನ ಸಂಪೂರ್ಣ ಸಹಕಾರ ನೀಡಬೇಕು. ಬೆಳಗಾವಿಯಿಂದ ಚಾಮರಾಜನಗರ ವರೆಗೆ ಕರ್ನಾಟಕ ಬಂದ್ ಅನ್ನು ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.

ಸಭೆಯಲ್ಲಿ ಕರವೇ ಅಧ್ಯಕ್ಷ ಶಿವರಾಮೇಗೌಡ, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್‌ ದೇವ್‌, ಕನ್ನಡ ಒಕ್ಕೂಟದ ಕಾರ್ಯದರ್ಶಿ ಗಿರೀಶ್‌ ಗೌಡ. ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್‌, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಆಮ್‌ ಆದ್ಮಿ ಪಕ್ಷದ ಕಾರ್ಯದರ್ಶಿ ಉಷಾ ಮೋಹನ್‌ ಸೇರಿ ಇತರರು ಇದ್ದರು.

 ಸರ್ವ ಪಕ್ಷ ಸಭೆಗೆ ಕೇವಲ ರಾಜಕೀಯ ಪಕ್ಷಗಳನ್ನು ಮಾತ್ರವಲ್ಲ ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ನೀರಾವರಿ ತಜ್ಞರನ್ನು, ನಿವೃತ್ತ ನ್ಯಾಯಮೂರ್ತಿಗಳು ಮತ್ತು ನಾಡಿನ ವಿವಿಧ ಕ್ಷೇತ್ರದ ಗಣ್ಯರನ್ನು ಸಹ ಆಹ್ವಾನಿಸಬೇಕು. ಕೇವಲ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳನ್ನು ಇಟ್ಟುಕೊಂಡು ಸಭೆ ನಡೆಸುವುದು ಸರಿಯಲ್ಲ.

- ವಾಟಾಳ್‌ ನಾಗರಾಜ್‌, ಅಧ್ಯಕ್ಷರು, ಕನ್ನಡ ಒಕ್ಕೂಟ

ವಿಮಾನ ನಿಲ್ದಾಣಕ್ಕೆ ಮುತ್ತಿಗೆ!

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಆ.3ರಂದು ಬೆಂಗಳೂರಿಗೆ ಆಗಮಿಸಿದರೆ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಬೇಕು. ಅದಕ್ಕೆ ಕನ್ನಡಪರ ಹೋರಾಟಗಾರರು ಸಿದ್ಧರಾಗಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಸಮುದ್ರ ಮಂಥನ’ಕ್ಕೆ ಕೇಂದ್ರ ₹84,084 ಕೋಟಿ ಮಂಜೂರು
ಡಿಕೆಶಿ ದೇಶದ ಅತಿ ಸಿರಿವಂತ ಸಿಎಂ