ಮುಖ್ಯಮಂತ್ರಿ ಮಹತ್ವದ ಘೋಷಣೆ ಶಾಲೆ- ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಾಪಸ್‌: ಸಿಎಂ

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
ಹಿಜಾಬ್‌ | Kannada Prabha

ಸಾರಾಂಶ

ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ ವಿವಿಧ ಪೊಲೀಸ್ ಠಾಣೆ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ಹಿಜಾಬ್‌ಗೆ ಸಂಬಂಧಿಸಿ ಸಭಿಕರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಜಾಬ್‌ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ನಿರ್ಧಾರ ಹಿಂಪಡೆಯಲಾಗುವುದು ಎಂದರು.

ಇನ್ನು ಮುಂದೆ ರಾಜ್ಯದಲ್ಲಿ ಹಿಜಾಬ್ ಮೇಲೆ ಯಾವುದೇ ನಿರ್ಬಂಧ ಇರಲ್ಲ. ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಆಯ್ಕೆ. ಈ ವಿಚಾರದಲ್ಲಿ ಸರ್ಕಾರ ಯಾಕೆ ಅಡ್ಡಿ ಮಾಡಬೇಕು? ಯಾರು ಯಾವ ಬಟ್ಟೆಯನ್ನಾದರೂ ಧರಿಸಿ ಹೋಗಬಹುದು. ಯಾರು ಯಾವ ಊಟವನ್ನಾದರೂ ಮಾಡಬಹುದು. ನಾನು ಪಂಚೆ ಧರಿಸುತ್ತೇನೆ, ನೀವು ಪ್ಯಾಂಟ್‌ ಮತ್ತು ಶರ್ಟ್‌ ಧರಿಸುತ್ತೀರಿ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಧಿರಿಸು ಮತ್ತು ಊಟದಲ್ಲಿ ರಾಜಕಾರಣ ಮಾಡಬಾರದು. ಕಾಂಗ್ರೆಸ್ ಮತ್ತು ನಮ್ಮ ಸರ್ಕಾರ ದಲಿತರು, ಹಿಂದುಳಿದವರು, ಶೋಷಿತರು, ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಇದರಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಈ ವಿಚಾರವಾಗಿ ಟ್ವೀಟ್‌ ಕೂಡ ಮಾಡಿರುವ ಸಿದ್ದರಾಮಯ್ಯ, ಹಿಜಾಬ್ ನಿರ್ಬಂಧ ಆದೇಶ ಹಿಂಪಡೆಯುವ ವಿಚಾರವಾಗಿ ಶೀಘ್ರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಹೇಳಿಕೆ ಕೇವಲ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಸ್‌ ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಹಿಜಾಬ್‌ ವಿವಾದದ ಹಿನ್ನೆಲೆ:

ರಾಜ್ಯದಲ್ಲಿ ಕಳೆದ ವರ್ಷ ಜನವರಿ ತಿಂಗಳಲ್ಲಿ ಹಿಜಾಬ್‌ ವಿವಾದ ಭುಗಿಲೆದ್ದು, ಸಾರ್ವಜನಿಕವಾಗಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಅದು ಹಿಂದೂ-ಮುುಸ್ಲಿಂ ಧರ್ಮ ಸಂಘರ್ಷಕ್ಕೂ ಕಾರಣವಾಗಿತ್ತು.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಧರಿಸಿ ತರಗತಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಹಲವು ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ಶುರುಮಾಡಿದ್ದು ಸಂಘರ್ಷದ ವಾತಾವರಣ ನಿರ್ಮಿಸಿತ್ತು.

ಆ ಬಳಿಕ ಸರ್ಕಾರ ಕೂಡ ತರಗತಿಯೊಳಗೆ ಹಿಜಾಬ್‌ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಈ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿ ಇಸ್ಲಾಂನಲ್ಲಿ ಹಿಜಾಬ್‌ ಕಡ್ಡಾಯವಲ್ಲ ಎಂದು ಹೇಳಿ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಆ ಬಳಿಕ ವಿದ್ಯಾರ್ಥಿಗಳು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಹೋಗಿದ್ದು, ಅಲ್ಲಿ ಭಿನ್ನ ತೀರ್ಪು ಹೊರಬಿದ್ದಿತ್ತು. ಆ ಬಳಿಕ ಹಿಜಾಬ್‌ ಕುರಿತ ವಿಚಾರಣೆಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗಿತ್ತು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ