ಕಳೆದ 10 ವರ್ಷದಲ್ಲಿ ಜನರ ಕಷ್ಟ 10 ಪಟ್ಟು ಹೆಚ್ಚಳ: ಸಿದ್ದು ತಿವಿತ

KannadaprabhaNewsNetwork |  
Published : Feb 11, 2024, 01:46 AM ISTUpdated : Feb 11, 2024, 07:43 AM IST
Siddaramaiah

ಸಾರಾಂಶ

ಕಳೆದ 10 ವರ್ಷಗಳ ಬಿಜೆಪಿ ಆಡಳಿತವನ್ನು ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ನಾಯಕರು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿವಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ 10 ವರ್ಷಗಳ ಬಿಜೆಪಿ ಆಡಳಿತವನ್ನು ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ನಾಯಕರು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. 

ಈ ಅವಧಿಯಲ್ಲಿ ಎಲ್ಲಾ ವರ್ಗಗಳ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಹತ್ತು ವರ್ಷಗಳ ಅನ್ಯಾಯದ ಕಾಲ’ ಹೆಸರಿನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಳೆದ 10 ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯಕಾಲದ ವಿವರಗಳನ್ನು ಅಂಕಿ-ಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ದೇಶ ಇಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ’ ಎಂದಿದ್ದಾರೆ.

ಒಂದೂ ಭರವಸೆ ಈಡೇರಿಸಿಲ್ಲ:10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಈ ದೇಶದ ಮತದಾರರಿಗೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಲ್ಲ ಎಂದು ಹರಿಹಾಯ್ದಿದ್ದಾರೆ.

ರೈತರ ಆದಾಯದ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳಿಗೆ ರಕ್ಷಣೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಮೊದಲಾದ ಬಣ್ಣ ಬಣ್ಣದ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. 

ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಟೀಕರಣದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೂಕರಾಗಿದ್ದಾರೆ: ಕಳೆದ 10 ವರ್ಷಗಳಿಂದ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ. 

ನರೇಂದ್ರ ಮೋದಿ ಅವರ ಉದ್ಯಮಮಿತ್ರರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಶರವೇಗದಲ್ಲಿ ಮುಂದಕ್ಕೆ ಹೋಗುತ್ತಿದ್ದರೆ, ಈ ದೇಶದ ಜನಸಾಮಾನ್ಯರು ಕೇಂದ್ರ ಸರ್ಕಾರದ ದುರಾಡಳಿತ, ವೈಫಲ್ಯಗಳ ಭಾರ ಹೊತ್ತು ಕುಸಿದು ಬಿದ್ದಿದ್ದಾರೆ ಎಂದಿದ್ದಾರೆ.

ಅನ್ಯಾಯ ಕಾಲ ಏಕೆ?

  • ನಿರುದ್ಯೋಗ ಪ್ರಮಾಣ 4 ಕೋಟಿಗೆ ಏರಿಕೆ
  • ಎಲ್ಪಿಜಿ ದರ 410 ರು.ನಿಂದ 903 ರು.ಗೆ ಹೆಚ್ಚಳ
  • ಪೆಟ್ರೋಲ್‌ ಶೇ.37, ಡೀಸೆಲ್‌ ಶೇ.64, ಅಡುಗೆ ಎಣ್ಣೆ ಶೇ.59 ದುಬಾರಿ
  • ರೈತರ ಆದಾಯ ದುಪ್ಪಟ್ಟು, ಯುವಜನರಿಗೆ 2 ಕೋಟಿ ಉದ್ಯೋಗ ಭರವಸೆ ಹುಸಿ
  • ಬಡವರು, ಶೋಷಿತರಿಗೆ ಅಗ್ಗದ ದರದ ಅಗತ್ಯವಸ್ತು ಪೂರೈಕೆ ಭರವಸೆ ಹುಸಿ

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ