ಸಚಿವ ಎಂಬಿಪಾ ನಿವಾಸದಲ್ಲಿ ಲಿಂಗಾಯತ ಸಚಿವರ ಸಭೆ : ಶೀಘ್ರ ಲಿಂಗಾಯತ ಶಾಸಕರ ಸಭೆ ನಡೆಸಲು ನಿರ್ಧಾರ

Sujatha NR | Published : Mar 23, 2025 10:44 AM

ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸಂಬಂಧ ಚರ್ಚಿಸಿ, ನಿರ್ಧಾರಕ್ಕೆ ಬರಲು ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಶುಕ್ರವಾರ ಸಮುದಾಯದ ಸಚಿವರು ಸಭೆ ನಡೆಸಿದ್ದಾರೆ.

 ಬೆಂಗಳೂರು : ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸಂಬಂಧ ಚರ್ಚಿಸಿ, ನಿರ್ಧಾರಕ್ಕೆ ಬರಲು ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಶುಕ್ರವಾರ ಸಮುದಾಯದ ಸಚಿವರು ಸಭೆ ನಡೆಸಿದ್ದಾರೆ. ಈ ವೇಳೆ ಶೀಘ್ರ ಲಿಂಗಾಯತ ಶಾಸಕರ ಸಭೆ ನಡೆಸುವುದು ಸೇರಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್‌, ಶಾಸಕರು ಊಟಕ್ಕೆ ಸೇರಿದರೆ ಯಾವುದೇ ತಪ್ಪಿಲ್ಲ. ಶುಕ್ರವಾರ ನಮ್ಮ ಮನೆಯಲ್ಲಿ ಸಚಿವರು ಊಟಕ್ಕೆ ಸೇರಿದ್ದೆವು. ಹಿಂದೆ ಅಶೋಕ್‌, ಬಸವರಾಜ ಬೊಮ್ಮಾಯಿ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಅವರ ಮನೆಗೆ ನಾನು ಹೋಗಿದ್ದೆ. ನಾವು 37 ಲಿಂಗಾಯತ ಶಾಸಕರಿದ್ದೇವೆ. ಮುಂದೆ ನಮ್ಮ ಸಮುದಾಯದ ಶಾಸಕರು ಊಟಕ್ಕೆ ಸೇರುತ್ತೇವೆ. ಬಸವಣ್ಣ ಅವರ ವಿಚಾರ, ಸಮಾಜದ ಕುರಿತು ಚರ್ಚೆ ಮಾಡುತ್ತೇವೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಸ್ವಯಂಘೋಷಿತ ಸಿಎಂ ಆಗಲು ಆಸ್ಪದವಿಲ್ಲ: ವೀರೇಂದ್ರ ಪಾಟೀಲ್‌ ಬಳಿಕ ಲಿಂಗಾಯತ ಸಮುದಾಯದವರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿಲ್ಲ. ಲಿಂಗಾಯತ ಸೇರಿ ಎಲ್ಲ ಸಮುದಾಯದವರಿಗೂ ತಮ್ಮವರು ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ಈಗ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಅಲ್ಲದೆ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ನಾಯಕರು ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಸ್ವಯಂ ಘೋಷಿತವಾಗಿ ಮುಖ್ಯಮಂತ್ರಿಯಾಗುತ್ತೇನೆ ಎನ್ನುವುದಕ್ಕೆ ಕಾಂಗ್ರೆಸ್‌ನಲ್ಲಿ ಆಸ್ಪದವಿಲ್ಲ ಎಂದು ಎಂ.ಬಿ. ಪಾಟೀಲ್‌ ತಿಳಿಸಿದರು.