** ಮಹುವಾ ವಿವಾದ: ವಿಪಕ್ಷ-ಬಿಜೆಪಿ ವಾಕ್ಸಮರ

KannadaprabhaNewsNetwork | Published : Dec 9, 2023 1:15 AM

ಮಹುವಾ ಮೊಯಿತ್ರಾಗೆ ತಮ್ಮ ಸದಸ್ಯತ್ವ ರದ್ದತಿ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌/ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ

- ಇದು ಕರಾಳ ದಿನ, ಪ್ರಜಾಸತ್ತೆಗೆ ಅವಮಾನ: ದೀದಿ ಕಿಡಿ

- 2005ರಲ್ಲಿ ಕಾಂಗ್ರೆಸ್‌ ಇದನ್ನೇ ಮಾಡಿತ್ತು: ಬಿಜೆಪಿ ತಿರುಗೇಟು

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದತಿ ಬಗ್ಗೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ಜೋರಾಗಿ ನಡೆದಿದೆ. ಟಿಎಂಸಿ ನಾಯಕಿ ಹಾಗೂ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರವು ಮಹುವಾರನ್ನು ಸದಸ್ಯತ್ವ ರದ್ದತಿಯನ್ನು ಸಮರ್ಥಿಸಿಕೊಂಡಿದ್ದು, ‘2005ರಲ್ಲಿ ಮನಮೋಹನ ಸಿಂಗ್‌ ಸರ್ಕಾರ ಇದ್ದಾಗ ಪ್ರಶ್ನೆಗಾಗಿ ಲಂಚ ಪಡೆದ 11 ಸಂಸದರನ್ನು ವಜಾ ಮಾಡಲಾಗಿತ್ತು’ ಎಂದಿದೆ.

ಮಮತಾ ಬ್ಯಾನರ್ಜಿ ಮಾತನಾಡಿ,‘ ಸಂಸದೀಯ ಪ್ರಜಾಪ್ರಭುತ್ವಕ್ಕೆ ಇದು ಬಹುದೊಡ್ಡ ಅವಮಾನವಾಗಿದ್ದು. ಮಹುವಾರನ್ನು ಸಂಸತ್‌ನಿಂದ ಸದಸ್ಯತ್ವ ರದ್ದತಿಯನ್ನು ನಾವು ವಿರೋಧಿಸುತ್ತೇವೆ. ನಮ್ಮನ್ನು ಗೆಲ್ಲಲಾಗದ ಬಿಜೆಪಿ ಪ್ರತತೀಕಾರದ ರಾಜಕಾರಣ ಮಾಡುತ್ತಿದೆ. ಇದು ಸಂಸತ್ತಿಗೆ ಮಾಡಿದ ವಂಚನೆ’ ಎಂದು ಆರೋಪಿಸಿದ್ದಾರೆ.ಕೋಲ್ಕತಾದಲ್ಲಿ ಮಾತನಾಡಿದ ಸಿಪಿಎಂ ನಾಯಕ ಸುಜನ್‌ ಚಕ್ರಬೋರ್ತಿ ಮಾತನಾಡಿ,‘ ಇದು ಸಂಸತ್ತಿನಲ್ಲಿ ಕಪ್ಪು ದಿನವಾಗಿದೆ. ಮಹುವಾರನ್ನು ಉಚ್ಚಾಟನೆ ಮಾಡಿರುವುದು ಅನ್ಯಾಯವಾಗಿದ್ದು, ಈ ಪ್ರಕ್ರಿಯೆ ಓವರ್‌ ಆ್ಯಕ್ಟಿವ್‌ನೆಸ್‌ ಆಗಿದೆ. ಲೋಕಸಭೆಯಲ್ಲಿ ತಮ್ಮ ಬಹುಮತವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ’ ಎಂದರು.

ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ ‘2005ರಲ್ಲಿ ಸ್ಪೀಕರ್‌ ಆಗಿದ್ದ ಸೋಮನಾಥ ಚಟರ್ಜಿ ಪ್ರಶ್ನೆಗಾಗಿ ಲಂಚ ಪಡೆದ ಆರೋಪ ಹೊಂದಿದ್ದ 10 ಸಂಸದರಿಗೆ ಸದನ ಪ್ರವೇಶ ನಿರಾಕರಿಸಿದರು. ಈ ಕುರಿತ ನೈತಿಕ ಸಮಿತಿ ವರದಿ ಬಂದ ದಿನವೇ ಆಗ ಸದನದ ನಾಯಕರಾಗಿದ್ದ ಪ್ರಣಬ್‌ ಮುಖರ್ಜಿ 10 ಜನರನ್ನು ಉಚ್ಚಾಟನೆ ಮಾಡಲು ನಿರ್ಣಯ ಮಂಡಿಸಿದ್ದರು. ಅದಕ್ಕೆ ಅಂಗೀಕಾರವೂ ದೊರೆತಿತ್ತು. ಒಬ್ಬ ರಾಜ್ಯಸಭೆ ಸದಸ್ಯ ಸೇರಿ 11 ಸಂಸದರ ಸದಸ್ಯತ್ವ ರದ್ದಾಗಿತ್ತು’ ಎಂದಿದ್ದಾರೆ