'ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನನ್ನನ್ನೂ ಸೇರಿ ಹಲವರು ಆರ್‌ಎಸಿ ಟಿಕೆಟ್‌ ಪಡೆದು ಕಾಯುತ್ತಿದ್ದಾರೆ'a

Published : Mar 29, 2025, 11:36 AM IST
satish jarkiholi

ಸಾರಾಂಶ

ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ರಾಜಕೀಯ ಉದ್ದೇಶವಿದ್ದಿದ್ದರೆ ಮುಸುಕು ಹಾಕಿಕೊಂಡು ಗೌಪ್ಯವಾಗಿ ಭೇಟಿಯಾಗುತ್ತಿದ್ದೆವು. ಫೋಟೋ ತೆಗೆಸಿಕೊಂಡು ಮಾಧ್ಯಮಗಳ ಜತೆಗೆ ಹಂಚಿಕೊಳ್ಳುತ್ತಿರಲಿಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟ

 ಬೆಂಗಳೂರು : ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ರಾಜಕೀಯ ಉದ್ದೇಶವಿದ್ದಿದ್ದರೆ ಮುಸುಕು ಹಾಕಿಕೊಂಡು ಗೌಪ್ಯವಾಗಿ ಭೇಟಿಯಾಗುತ್ತಿದ್ದೆವು. ಫೋಟೋ ತೆಗೆಸಿಕೊಂಡು ಮಾಧ್ಯಮಗಳ ಜತೆಗೆ ಹಂಚಿಕೊಳ್ಳುತ್ತಿರಲಿಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ದೆಹಲಿ ಭೇಟಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದರು. ಇದೇ ವೇಳೆ, ಮುಖ್ಯಮಂತ್ರಿ ರೇಸ್‌ ಬಗ್ಗೆ ಮಾತನಾಡಿದ ಸತೀಶ್‌, ‘ಪ್ರಸ್ತುತ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆರ್‌ಎಸಿ (ರಿಸರ್ವೇಷನ್‌ ಅಗೈನ್ಸ್ಟ್ ಕ್ಯಾನ್ಸಲೇಷನ್‌) ನಲ್ಲಿದ್ದೇನೆ. ನನ್ನ ಜತೆ ಹಲವರು ಆರ್‌ಎಸಿ ಪಡೆದು ಕಾಯುತ್ತಿದ್ದಾರೆ. ಯಾರಾದರೂ ಮೆಜೆಸ್ಟಿಕ್‌ನಲ್ಲಿ ಸಂಚಾರದಟ್ಟಣೆ ಆಗಿ ಬಾರದಿದ್ದರೆ ನಮಗೆ ಅವಕಾಶ ಸಿಗಬಹುದು ಎಂದು ಹೇಳಿದರು.

ನೀವು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲವೇ ಎಂಬ ಪ್ರಶ್ನೆಗೆ, ‘ಕ್ಲೇಮು ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದ ಮೇಲೆ ನಮ್ಮದೇನಿದೆ? ಎಂದರು.

ಶಿಂಧೆ ರೀತಿ ಶಕ್ತಿ ಯಾರಿಗೂ ಇಲ್ಲ: ಕುಮಾರಸ್ವಾಮಿ ಅವರನ್ನೂ ಭೇಟಿ ಆಗಿದ್ದೀರಲ್ಲ. ಮಹಾರಾಷ್ಟ್ರದ ಶಿಂಧೆ ರೀತಿ ಬೆಳವಣಿಗೆ ಆಗುತ್ತಾ? ಎಂಬ ಪ್ರಶ್ನೆಗೆ, ಜೆಡಿಎಸ್‌ನ 14 ಮಂದಿ ಶಾಸಕರನ್ನು ಕರೆದುಕೊಂಡು ನಾವೇನು ಮಾಡಬೇಕು. ಶಿಂಧೆಯ ರೀತಿ ಇಲ್ಲಿ ಯಾರಿಗೂ ಆ ಶಕ್ತಿ ಇಲ್ಲ. ಕುಮಾರಸ್ವಾಮಿ ಅಥವಾ ದೇವೇಗೌಡರ ಸಹಾಯ ಬೇಕಿದ್ದರೆ ರಾತ್ರಿ ವೇಳೆ ಭೇಟಿ ಮಾಡುತ್ತಿದ್ದೆವು ಎಂದು ಸತೀಶ್ ಸ್ಪಷ್ಟನೆ ನೀಡಿದರು.

ಹನಿಟ್ರ್ಯಾಪ್‌ ಕುರಿತ ದೂರಿನ ಬಗ್ಗೆ ಮಾತನಾಡಿ, ರಾಜೇಂದ್ರ ನೀಡಿರುವ ದೂರು ಸುಪಾರಿಗೆ ಸಂಬಂಧಿಸಿದ್ದು. ಕೆ.ಎನ್‌.ರಾಜಣ್ಣ ನೀಡಿರುವ ಮನವಿ ಹನಿಟ್ರ್ಯಾಪ್‌ಗೆ ಸಂಬಂಧಿಸಿದ್ದು. ಎರಡಕ್ಕೂ ಸಂಬಂಧವಿಲ್ಲ ಎಂದಷ್ಟೇ ಹೇಳಿದರು.

ಮುಂದಿನ ವಾರ ಸುರ್ಜೇವಾಲ ಜತೆ ಚರ್ಚೆ:

ದಲಿತ ಸಮಾವೇಶದ ಕುರಿತು ಮುಂದಿನ ವಾರ ರಾಜ್ಯಕ್ಕೆ ಬರಲಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರೊಂದಿಗೆ ಚರ್ಚಿಸಲಾಗುವುದು. ಚರ್ಚೆ ಬಳಿಕ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.

ನಮ್ಮ ಗಾಡಿಯೇ ಫುಲ್‌ ಆಗಿದೆ,

ದಳದವರಿಗೆ ಜಾಗವಿಲ್ಲ: ಸತೀಶ್‌

ಎಚ್.ಡಿ.ದೇವೇಗೌಡ ಅವರ ಭೇಟಿ ಆಕಸ್ಮಿಕ. ಒಂದೊಮ್ಮೆ ರಾಜಕೀಯ ಭೇಟಿಗೆ ಹೋಗಿದ್ದರೆ ಭೂತಯ್ಯನ ಮಗ ಅಯ್ಯು ಸಿನಿಮಾದಂತೆ ರಾತ್ರಿ ವೇಳೆ ಮುಸುಕು ಹಾಕಿಕೊಂಡು ಹೋಗಿ ಭೇಟಿ ಮಾಡಬೇಕಿತ್ತು. ನಾನು ಸಂಸತ್‌ ಭವನದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲು ಹೋಗುವಾಗ ದಾರಿಯಲ್ಲೇ ಎಚ್.ಡಿ.ದೇವೇಗೌಡ ಅವರ ಕೊಠಡಿ ಇತ್ತು. ಅವರು ನಮ್ಮ ಹಿರಿಯರು ಹಾಗೂ ಹಳೆಯ ಸಂಬಂಧ. ಹೀಗಾಗಿ ಹೋಗಿ ಮಾತನಾಡಿದೆ. ಹಾಸನ ಹೊರವರ್ತುಲ ರಸ್ತೆ ಹಾಗೂ ಶಿರಾಡಿ ಘಾಟ್‌ ರಸ್ತೆ ಬಗ್ಗೆ ನಾವು ಮಾತನಾಡಿದೆವು ಎಂದರು.

ನಮ್ಮ ಪಕ್ಷವೇ 140 ಮಂದಿ ಶಾಸಕರಿಂದ ಓವರ್‌ ಲೋಡ್‌ ಆಗಿದೆ. ಹೀಗಿರುವಾಗ ಜೆಡಿಎಸ್‌ನ 14 ಮಂದಿ ಶಾಸಕರನ್ನು ಕರೆದುಕೊಂಡು ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು