ಕಲಬುರಗಿ/ಬೆಂಗಳೂರು : ಲಂಚ ನೀಡಿದವರಿಗೆ ಮಾತ್ರವೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗಿದೆ ಎಂಬ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರ ಆಡಿಯೋ ಸಂಚಲನ ಸೃಷ್ಟಿಸಿದ್ದು, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿವೆ.
ಶಾಸಕ ಬಿ.ಆರ್.ಪಾಟೀಲ್ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಅವರಿಗೆ ದೂರವಾಣಿ ಕರೆ ಮಾಡಿ, ಹಣ ನೀಡಿದವರಿಗೆ ಮಾತ್ರ ವಸತಿ ನೀಡಲಾಗುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದರು. ಈ ಆಡಿಯೋ ಬಹಿರಂಗ ಆಗುತ್ತಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ಸದಸ್ಯ ಶರವಣ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿಶ್ವ ರೂಪ ಪ್ರದರ್ಶನ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಇದೀಗ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೆ ಕೆಲಸಗಳು ಆಗುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಆಡಿಯೋ ಬಹಿರಂಗದಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಎಂಎಲ್ಸಿ ಶರವಣ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವ ನೃತ್ಯ ಆಡುತ್ತಿದೆ ಎನ್ನುವುದಕ್ಕೆ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಸ್ಫೋಟಕ ಆರೋಪವೇ ಸಾಕ್ಷಿ ಎಂದಿದ್ದಾರೆ.
ಇತ್ತ ಕಾಂಗ್ರೆಸ್ ಸಚಿವ ಸತೀಶ ಜಾರಕಿಹೊಳಿ ಅವರು, ಬಿ.ಆರ್.ಪಾಟೀಲ್ ಅವರ ಹೇಳಿಕೆ ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪವನ್ನು ಮೃದುವಾಗಿಸುವ ಯತ್ನ ನಡೆಸಿದ್ದಾರೆ.
ಆಡಿಯೋ ಬಗ್ಗೆ ಮಾಹಿತಿ ಕೇಳಿದ ಹೈಕಮಾಂಡ್?ಬೆಂಗಳೂರು: ವಸತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ನನ್ನಲ್ಲಿರುವ ಮಾಹಿತಿ ಹೊರ ಬಂದರೆ ಸರ್ಕಾರ ನಡಗುತ್ತದೆ ಎಂದಿರುವ ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ಕುರಿತು ಹೈಕಮಾಂಡ್ ಮಾಹಿತಿ ಕೇಳಿದೆ ಎಂದು ಹೇಳಲಾಗುತ್ತಿದೆ.--ಆ ಆಡಿಯೋ ನನ್ನದೇವಸತಿ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಜತೆ ಮಾತನಾಡಿರುವ ಆಡಿಯೋ ನನ್ನದೇ. ನಾನು ಹೇಳಬೇಕಿರುವುದನ್ನೆಲ್ಲಾ ಅಲ್ಲೇ ಹೇಳಿದ್ದೇನೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.-ಬಿ.ಆರ್. ಪಾಟೀಲ್, ಯೋಜನಾ ಆಯೋಗದ ಉಪಾಧ್ಯಕ್ಷ
ಕಮಿಷನ್ ಮಿತಿ ಮೀರಿದೆಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಇದರಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ. ರಾಜ್ಯ ಸರ್ಕಾರದ ಪ್ರತೀ ಹಂತದಲ್ಲಿಯೂ ಕಮಿಷನ್ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿಮೀರಿದೆ.- ಎಚ್.ಡಿ.ಕುಮಾರಸ್ವಾಮಿ,
ಕೇಂದ್ರ ಸಚಿವ-ಸಚಿವರ ರಾಜೀನಾಮೆ ಪಡೀರಿಸ್ಪಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿರುವಾಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ತಮ್ಮ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ? ಮುಖ್ಯಮಂತ್ರಿಗಳು ಈ ಕೂಡಲೇ ರಾಜೀನಾಮೆ ಪಡೆಯಬೇಕು.- ಆರ್. ಅಶೋಕ್, ವಿಪಕ್ಷ ನಾಯಕ--
ರಾಜ್ಯ ಸರ್ಕಾರ ಎಟಿಎಂಮುಖ್ಯಮಂತ್ರಿ ಸೇರಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರ ಆಡಿಯೋ ಒಂದು ಸಣ್ಣ ನಿದರ್ಶನ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ನ ಎಟಿಎಂ ಆಗಿದೆ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಆರ್. ಪಾಟೀಲ್ ವಿವಾದಗಳು
1. ಶಾಸಕರ ಕೆಲಸಗಳಾಗುತ್ತಿಲ್ಲ, ಸಚಿವರು ಮರ್ಯಾದೆ ನೀಡುತ್ತಿಲ್ಲ ಎಂದು 10ಕ್ಕೂ ಹೆಚ್ಚು ಶಾಸಕರ ಸಹಿ ಸಂಗ್ರಹದ ಪತ್ರ ಬರೆದಿದ್ದ ಬಿ.ಆರ್.ಪಾಟೀಲ್. ಬಳಿಕ ಆ ಪತ್ರ ತಾವು ಬರೆದಿಲ್ಲ ಎಂದು ಸ್ಪಷ್ಟನೆ
2. ಶಾಸಕರಿಗೆ ಸಚಿವರಿಂದ ಕಿಮ್ಮತ್ತಿಲ್ಲ ಎಂಬ ಕಾರಣ ನೀಡಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಪತ್ರ ಬರೆದಿದ್ದ ಶಾಸಕ
3. ಪ್ರಿಯಾಂಕ್ ಖರ್ಗೆಗೆ ಕೇಳಿದ್ದ ಪ್ರಶ್ನೆಗೆ ಸದನದಲ್ಲಿ ಕೃಷ್ಣ ಬೈರೇಗೌಡರು ಉತ್ತರಿಸಲು ನಿಂತಿದ್ದಕ್ಕೆ ಆಕ್ರೋಶ
4. ಕಲಬುರಗಿಯಲ್ಲಿ 2024ರ ಸೆಪ್ಟೆಂಬರ್ನಲ್ಲಿ ನಡೆದ ಸಂಪುಟ ಸಭೆ ಬಗ್ಗೆ ಅತೃಪ್ತಿ. ಸಂಪುಟ ಸಭೆ ನಿರ್ಣಯಗಳು ಸಮಾಧಾನ ತಂದಿಲ್ಲ ಎಂದು ಬಹಿರಂಗ ಹೇಳಿಕೆ.
5. ಕೆಕೆಆರ್ಡಿಬಿಯಲ್ಲಿ ಪ್ರಭಾವಿ ಸಚಿವರು, ಶಾಸಕರಿಗೇ ಅನುದಾನ ಸಿಂಹಪಾಲು ಹೋಗುತ್ತಿದೆ ಎಂದು ಅಸಮಾಧಾನ