ಸಿಎಎ ಹಿಂಪಡೆಯುವ ಮಗ ದೇಶದಲ್ಲಿ ಹುಟ್ಟಿಲ್ಲ: ಮೋದಿ

KannadaprabhaNewsNetwork |  
Published : May 17, 2024, 01:34 AM ISTUpdated : May 17, 2024, 04:47 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

ಅಧಿಕಾರಕ್ಕೆ ಬಂದರೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ರದ್ದು ಮಾಡುವುದಾಗಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ವಾಪಸ್‌ ಪಡೆಯುವಂತಹ ಮಗ ಈ ದೇಶದಲ್ಲಿ ಹುಟ್ಟಿದ್ದಾನಾ? ಎಂದು ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.

ಆಜಂಗಢ/ಭದೋಹಿ: ಅಧಿಕಾರಕ್ಕೆ ಬಂದರೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ರದ್ದು ಮಾಡುವುದಾಗಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ವಾಪಸ್‌ ಪಡೆಯುವಂತಹ ಮಗ ಈ ದೇಶದಲ್ಲಿ ಹುಟ್ಟಿದ್ದಾನಾ? ಎಂದು ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.

ಉತ್ತರಪ್ರದೇಶದ ಲಾಲ್‌ಗಂಜ್‌ನಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಬಗ್ಗೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಸುಳ್ಳು ಹಬ್ಬಿಸುತ್ತಿವೆ. ದೇಶವನ್ನು ದಹಿಸಲು ಆ ಎರಡೂ ಪಕ್ಷಗಳೂ ಶಕ್ತಿ ಮೀರಿ ಪ್ರಯತ್ನಿಸಿವೆ. ಮೋದಿ ಸರ್ಕಾರ ಸಿಎಎ ಜಾರಿಗೆ ತಂದಿದೆ. ಮುಂದೊಂದು ದಿನ ಸಿಎಎ ತೆಗೆದು ಹಾಕುತ್ತೇವೆ ಎಂದು ಇವತ್ತಿಗೂ ಇಂಡಿ ಕೂಟದ ನಾಯಕರು ಹೇಳುತ್ತಿದ್ದಾರೆ. 

ಆದರೆ ದೇಶದಲ್ಲಿ ಅಂಥಾ ವ್ಯಕ್ತಿ ಇವರೆಗೂ ಜನಿಸಿದ್ದಾನಾ? ಎಂದು ಪ್ರಶ್ನಿಸಿದರು.ನಾವು ಈಗಾಗಲೇ ಮೊದಲ ಹಂತದಲ್ಲಿ ವಿದೇಶದಿಂದ ಬಂದವರಿಗೆ ಮೊದಲ ಹಂತದಲ್ಲಿ ಪೌರತ್ವದ ಪ್ರಮಾಣಪತ್ರ ವಿತರಣೆ ಮಾಡಿದ್ದೇವೆ. ಅದನ್ನು ತಡೆಯಲು ವಿಪಕ್ಷಗಳು ತಮ್ಮಲ್ಲಿ ಏನೇನು ಸಾಮರ್ಥ್ಯ ಇದೆಯೋ ಅದನ್ನೆಲ್ಲಾ ಬಳಸಲಿ ಎಂದು ಮೋದಿ ಸವಾಲು ಹಾಕಿದರು.ಇದೀಗ ಪೌರತ್ವ ಪಡೆದವರೆಲ್ಲಾ ಹಿಂದೂ, ಸಿಖ್‌, ಜೈನ ಮತ್ತು ಬೌದ್ಧರು. ಅವರೆಲ್ಲಾ ಧರ್ಮದ ಆಧಾರದಲ್ಲಿ ನಡೆದ ದೇಶ ವಿಭಜನೆಯ ಸಂತ್ರಸ್ತರು ಮತ್ತು ಸುದೀರ್ಘ ಸಮಯದಿಂದ ನಿರಾಶ್ರಿತರಾಗಿ ಇಲ್ಲೇ ವಾಸ ಮಾಡುತ್ತಿದ್ದರು ಎಂದು ಮೋದಿ ಹೇಳಿದರು.

ಮೆಟ್ಟಿಲುಗಳನ್ನು ಹತ್ತಲು ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಮಹಾತ್ಮ ಗಾಂಧಿ ಅವರ ಮಾತನ್ನೇ ಮರೆತುಬಿಟ್ಟಿದೆ. ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತರು ತಮಗೆ ಬಯಸಿದಾಗ ಭಾರತಕ್ಕೆ ಬರಬಹುದು ಎಂದು ಗಾಂಧೀಜಿಯೇ ಹೇಳಿದ್ದರು. ತಮ್ಮ ಸಂಸ್ಕೃತಿ ಹಾಗೂ ಧರ್ಮ ಉಳಿಸಿಕೊಳ್ಳಲು ಸಹಸ್ರಾರು ಕುಟುಂಬಗಳು ದೇಶದಲ್ಲಿ ಆಶ್ರಯವನ್ನು ಪಡೆದುಕೊಂಡಿವೆ. ಆದರೆ ಕಾಂಗ್ರೆಸ್‌ ಎಂದಿಗೂ ಅವರ ಬಗ್ಗೆ ಯೋಚನೆ ಮಾಡಲಿಲ್ಲ. ಏಕೆಂದರೆ ಅವರು ಆ ಪಕ್ಷದ ಮತ ಬ್ಯಾಂಕ್‌ ಅಲ್ಲ ಎಂದು ಛೇಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’