ಧರ್‍ಮಸ್ಥಳದಲ್ಲಿ ಆಣೆ-ಪ್ರಮಾಣ ಬೇಡ: ಬಿಜೆಪಿಯಲ್ಲಿ ಅಪಸ್ವರ

Published : Jun 22, 2026, 05:02 AM IST
Pralhad Joshi

ಸಾರಾಂಶ

ವಿಧಾನಪರಿಷತ್‌ ಚುನಾವಣೆ ಅಡ್ಡಮತದಾನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರತರಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಅಪಸ್ವರ ಕೇಳಿಬಂದಿದೆ.

 ಹುಬ್ಬಳ್ಳಿ/ಬೆಂಗ‍ಳೂರು :  ವಿಧಾನಪರಿಷತ್‌ ಚುನಾವಣೆ ಅಡ್ಡಮತದಾನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರತರಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಅಪಸ್ವರ ಕೇಳಿಬಂದಿದೆ.

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ಎಸ್‌.ಸುರೇಶ್‌ಕುಮಾರ್ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ನಿರ್ಧಾರ ಕೈಬಿಡುವಂತೆ ಬಹಿರಂಗವಾಗಿಯೇ ಹೇಳಿದ್ದಾರೆ.

ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಅಡ್ಡಮತದಾನದಿಂದಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಮನನೊಂದು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಹೇಳಿಕೆ ಗಮನಿಸಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದೇನೆ. ಧರ್ಮಸ್ಥಳ ಕ್ಷೇತ್ರ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದ ವಿಚಾರವನ್ನು ಅಂಥ ಪರಿಸರದಲ್ಲಿ ಚರ್ಚಿಸುವುದು, ಆಣೆ ಪ್ರಮಾಣ ಮಾಡುವುದು ಸರಿಯಲ್ಲ. ಹಾಗಾಗಿ, ಅದನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಈ ಸಲಹೆ ಸ್ವೀಕರಿಸುವುದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎಂದರು. ಅಡ್ಡ ಮತದಾನ ಮಾಡಿದವರ ಪತ್ತೆಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಇದರಲ್ಲಿ ಪತ್ತೆಯಾಗದಿದ್ದರೂ ಮುಂದೊಂದು ದಿನ ಅವರು ಪತ್ತೆಯಾಗೇ ಆಗುತ್ತಾರೆ. ಅವರಿಗೆ ಸೂಕ್ತ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.

ಸರಿಯಾದ ತೀರ್ಮಾನ ಅಲ್ಲ-ಸುರೇಶ್‌:

ನಿಜಕ್ಕೂ ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ದಿಗ್ಭ್ರಮೆ ಉಂಟು ಮಾಡಿದೆ. ಇದ್ಯಾಕೋ ಸರಿಯಾದ ತೀರ್ಮಾನ ಎಂದೆನಿಸುತ್ತಿಲ್ಲ. ದಯವಿಟ್ಟು ಸ್ವಾಮಿ ಮಂಜುನಾಥನ ಶ್ರೇಷ್ಠತೆಯನ್ನು ಈ ರೀತಿ ಒರೆ ಹಚ್ಚುವುದು ಯಾವುದೇ ಕಾರಣಕ್ಕೂ ಬೇಡ ಎಂದು ಸುರೇಶ್‌ಕುಮಾರ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನಸಭೆಯಲ್ಲಿ ಹೇಳಿದಂತೆ ನನ್ನ ಜೀವನದಲ್ಲಿ ನನ್ನ ತಾಯಿ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ. ರಾಜಕಾರಣದಲ್ಲಿ ನಡೆದುಬಿಟ್ಟಿರುವ ಕೀಳು ಮಟ್ಟದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ. ಈ ಅಪಚಾರ ಮಾಡಿರುವವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ ಎಂದಿದ್ದಾರೆ.

ಈಗಾಗಲೇ ಹಲವರು ಧರ್ಮಸ್ಥಳದ ಹಿರಿಮೆಯನ್ನು ಹಾಳು ಮಾಡುವ ಕೆಲಸ ಮಾಡುವುದರಲ್ಲಿ ವಿಕೃತಾನಂದ ಪಡೆದಿದ್ದಾರೆ. ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡ ಮತದಾನ ಮಾಡಿದ ವೀರರು ಆಣೆ-ಪ್ರಮಾಣ ಮಾಡಿ ತಾವು ಉಳಿದುಕೊಳ್ಳಲು ತಮ್ಮ ನೈತಿಕ ದಿವಾಳಿತನ ತೋರಿಸಿದರೆ, ಅದರಿಂದ ಅಪಚಾರದ ಪ್ರಮಾಣ ಹೆಚ್ಚಾಗುತ್ತದಷ್ಟೇ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಣೆ-ಪ್ರಮಾಣ ಸರಿಯಲ್ಲ

ಧರ್ಮಸ್ಥಳ ಕ್ಷೇತ್ರ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದ ವಿಚಾರವನ್ನು ಅಂಥ ಪರಿಸರದಲ್ಲಿ ಚರ್ಚಿಸುವುದು, ಆಣೆ ಪ್ರಮಾಣ ಮಾಡುವುದು ಸರಿಯಲ್ಲ. ಹಾಗಾಗಿ, ಅದನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಈ ಸಲಹೆ ಸ್ವೀಕರಿಸುವುದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಡ್ಡಮತ ಹಾಕಿದವರ ಪತ್ತೆಗೆ ಧರ್ಮಸ್ಥಳದಲ್ಲಿ ಸಭೆ : ಬಿವೈವಿ
ಗ್ರಾಪಂ, ವಾರ್ಡ್‌ಗಳಲ್ಲೂ ಗ್ಯಾರಂಟಿ ಸಮಿತಿ : ಡಿಕೆ ಶಿವಕುಮಾರ್‌